ಕಲ್ಪ ಮೀಡಿಯಾ ಹೌಸ್ | ಮುಂಬೈ |
ಪ್ರಧಾಣಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ದುರ್ಬಲ ಅರ್ಥಿಕತೆಯಿಂದ ವಿಶ್ವದ ಐದನೇ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಸಹಕಾರ ಹಾಗೂ ಗೃಹ ಸಚಿವ ಅಮಿತ್ ಶಾ Amith Shah ಹೇಳಿದರು.
ಮುಂಬೈನಲ್ಲಿ ಇಂದು ನಡೆದ ಇಂಡಿಯಾ ಗ್ಲೋಬಲ್ ಫೋರಂನ ವಾರ್ಷಿಕ ಹೂಡಿಕೆ ಶೃಂಗಸಭೆ – NXT10 ಅನ್ನು ಉದ್ದೇಶಿಸಿ ಅವರು ಮಾತನಾಡಿದರು.
2004 ರಿಂದ 2014 ರವರೆಗೆ ಕೇಂದ್ರದಲ್ಲಿ ಸೋನಿಯಾ-ಮನಮೋಹನ್ ಸರ್ಕಾರ ಅಧಿಕಾರದಲ್ಲಿದ್ದಾಗ ದೇಶದ ಆರ್ಥಿಕತೆಯು, ವಿಶ್ವದಲ್ಲಿ 11ನೇ ಸ್ಥಾನದಲ್ಲಿತ್ತು ಎಂಬುದು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ತಿಳಿದಿದೆ. ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ PM Narendra Modi ನೇತೃತ್ವದ ಸರ್ಕಾರ ದೇಶದ ಆರ್ಥಿಕತೆಯನ್ನು 5ನೇ ಸ್ಥಾನಕ್ಕೆ ತರುವ ಕಾರ್ಯ ಮಾಡಿದೆ ಎಂದರು.
ತಮ್ಮ ಮೂರನೇ ಅವಧಿಯಲ್ಲಿ ದೇಶದ ಆರ್ಥಿಕತೆಯನ್ನು ಮೋದಿಯವರು ಮೂರನೇ ಸ್ಥಾನಕ್ಕೆ ತರುವುದು ಖಚಿತ. 2014ರ ಹಿಂದಿನ 10 ವರ್ಷಗಳವರೆಗೆ ದೇಶದ ಆರ್ಥಿಕತೆಯ ಸ್ಥಿತಿ ಹದಗೆಟ್ಟಿತ್ತು, ಹೂಡಿಕೆದಾರರ ವಿಶ್ವಾಸ ಕುಸಿದಿತ್ತು. ಆದರೆ ಇಂದಿನ ಅಮೃತ ಕಾಲಘಟ್ಟದಲ್ಲಿ ದೇಶದ ಆರ್ಥಿಕತೆಯು ಬಲಿಷ್ಠವಾಗಿದೆ ಮತ್ತು ಭಾರತವು ಆತ್ಮ ವಿಶ್ವಾಸದಿಂದ ಎದ್ದನಿಂತು ಸ್ವಾವಲಂಬಿಯಾಗಿದೆ ಎಂದರು.
ಮೋದಿಯವರ ದೂರದೃಷ್ಟಿಯ ನಾಯಕತ್ವ ಮತ್ತು `ಅಂತ್ಯೋದಯ’ (ಕೊನೆಯ ಹಂತದ ವ್ಯಕ್ತಿಯ ಉನ್ನತಿ) ರಾಜಕಾರಣಕ್ಕೆ ಹೆಸರಾಗಿರುವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರವು ‘ನಿಷ್ಕ್ರಿಯ’ತೆಯಿಂದ ಎದ್ದು ‘ಚಲನಶೀಲ’ವಾಗಿದೆ. ‘ರಿಗ್ರೆಸಿವ್’ನಿಂದ ‘ಪ್ರೋಗ್ರೆಸಿವ್’ಗೆ ಬದಲಾಗಿರುವ ಭಾರತದ ಆರ್ಥಿಕತೆಯು ‘ದುರ್ಬಲ’ ಸ್ಥಾನದಿಂದ ಅಗ್ರ ಸ್ಥಾನಕ್ಕೆ ತಲುಪಿದೆ. ಭಾರತವು ಈಗ ದುರ್ಬಲ ಐದು ಆರ್ಥಿಕತೆ ಹಣೆಪಟ್ಟಿಯಿಂದ ಹೊರಬಂದು, ಅಗ್ರ ಐದು ಆರ್ಥಿಕತೆಗಳ ಪಟ್ಟಕ್ಕೆ ತಲುಪಿದೆ. ಹೊಸ ಜಾಗತಿಕ ಭೂಪಟದಲ್ಲಿ ಭಾರತವು ‘ಡಾರ್ಕ್ ಸ್ಪಾಟ್’ ನಿಂದ ‘ಬ್ರೈಟ್ ಸ್ಪಾಟ್’ ಆಗಿ ಹೊರಹೊಮ್ಮಿದೆ ಎಂದರು.
Also read: ತವರುಮನೆಯಿಂದ ಗದ್ದುಗೆಯಲ್ಲಿ ಪ್ರತಿಷ್ಠಾಪನೆಯಾದ ಶ್ರೀಮಾರಿಕಾಂಬಾ ತಾಯಿ
10 ವರ್ಷಗಳಲ್ಲಿ ಸರ್ಕಾರವು ನೋಟು ಅಮಾನ್ಯೀಕರಣ, ಜಿಎಸ್ಟಿ, ಜನ್ ಧನ್, ತ್ರಿವಳಿ ತಲಾಖ್, ಹೊಸ ಶಿಕ್ಷಣ ನೀತಿ, ಸಿಎಎ, ವಿಧಿ 370 ಮತ್ತು 35 ಎ, ನಾರಿ ಶಕ್ತಿ ವಂದನ್ ಅಧಿನಿಯಮ್, ಮೂರು ಹೊಸ ಕಾನೂನುಗಳು, ರಾಮಮಂದಿರ ನಿರ್ಮಾಣ, ಹೊಸ ಸಂಸತ್ತಿನ ಕಟ್ಟಡ, ಕರ್ತಾರ್ಪುರ ಕಾರಿರ್ಡಾ ನಿರ್ಮಾಣ, ಈಶಾನ್ಯ, ಕಾಶ್ಮೀರ ಮತ್ತು ಎಡಪಂಥೀಯ ಉಗ್ರವಾದದ ಮೇಲೆ ನಿಯಂತ್ರಣ, ಗೃಹೋಪಯೋಗಿ ವಿದ್ಯುತ್, ಅನಿಲ ಮತ್ತು ನೀರು, 5 ಲಕ್ಷದವರೆಗೆ ಉಚಿತ ಚಿಕಿತ್ಸೆ, ರೈತರಿಗೆ ಆರ್ಥಿಕ ನೆರವು, ಸರ್ಜಿಕಲ್ ಸ್ಟ್ರೈಕ್, ವೈಮಾನಿಕ ದಾಳಿ ಮತ್ತು ಇನ್ನೂ ಅನೇಕ ನಿರ್ಧಾರಗಳು ಸೇರಿದಂತೆ 50 ಕ್ಕೂ ಹೆಚ್ಚು ಪರಿವರ್ತಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇವು ಭಾರತಕ್ಕೆ ವಿಶ್ವದಲ್ಲಿ ಹೊಸ ಗುರುತನ್ನು ನೀಡಿದೆ.
ಇಂದಿನ ಅಮೃತ ಕಾಲಘಟ್ಟದಲ್ಲಿ, 2024ರ ಲೋಕಸಭೆ ಚುನಾವಣೆಯೂ ಸಮೀಪಿಸುತ್ತಿದೆ. ಮೋದಿ ಸರ್ಕಾರದ ಸಾಧನೆಗಳೊಂದಿಗೆ ಭಾರತೀಯ ರಾಜಕಾರಣದ ಚಾಣಕ್ಯ ಚುನಾವಣಾ ಸಮರದಲ್ಲಿ ಪ್ರತಿಪಕ್ಷಗಳಿಗೆ ನಿರ್ಣಾಯಕ ಸೋಲು ನೀಡಲು ಮತ್ತೊಮ್ಮೆ ರಣರಂಗಕ್ಕೆ ಇಳಿದಿದ್ದಾರೆ. ಕಳೆದ 10 ವರ್ಷಗಳ ಸಾಧನೆಯನ್ನು ಆಧರಿಸಿ ದೇಶದ ಜನತೆ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ನಿರ್ಧರಿಸಿದೆ. ಶಾ ಚುನಾವಣಾ ಕಣಕ್ಕೆ ಇಳಿದರೆ ಕಮಲ ಅರಳುವುದು ಖಚಿತ ಎಂಬುದು ವಿರೋಧ ಪಕ್ಷಗಳಿಗೂ ಗೊತ್ತಿದೆ. ಯಾವುದೇ ಚುನಾವಣೆಯಲ್ಲಿ ಗೆಲುವು ಸಾಧಿಸಲು ಭಾರತೀಯ ಜನತಾ ಪಕ್ಷದ ಅಸಾಮಾನ್ಯ ನಾಯಕ ಶಾ ಅಸ್ತ್ರವೊಂದಿದ್ದರೆ ಸಾಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post