ಕಲ್ಪ ಮೀಡಿಯಾ ಹೌಸ್ | ಮೈಸೂರು |
ಶ್ರೀಮನ್ ಮಧ್ವಾಚಾರ್ಯ ಮೂಲಮಹಾ ಸಂಸ್ಥಾನ ಶ್ರೀ ಉತ್ತರಾದಿ ಮಠದ ಶಾಖೆಯಾದ ಶ್ರೀರಾಮಪುರದ ಶ್ರೀ ವೆಂಕಟೇಶ ಧ್ಯಾನ ಕೇಂದ್ರದಲ್ಲಿ ಸೋಮವಾರ ನೂತನ ರಥ ಸಮರ್ಪಣೆ ನೆರವೇರಿತು.
ಈ ಸಂದರ್ಭ ಮಾತನಾಡಿದ ರಥದ ದಾನಿ ಮತ್ತು ಉದ್ಯಮಿ ಎಂ.ಡಿ. ಗೋಪೀನಾಥ್, ಶ್ರದ್ಧೆ ಮತ್ತು ಭಕ್ತಿ ಜಾಗೃತಿಗೆ ಶರನ್ನವರಾತ್ರಿ ಪ್ರೇರಣೆ ನೀಡಲಿ ಎಂದರು.
ಧಾರ್ಮಿಕ ಕೇಂದ್ರಗಳನ್ನು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಆಚರಣೆಗಾಗಿ ಸಶಕ್ತ ಮಾಡಬೇಕು. ಅಲ್ಲಿಗೆ ಅಗತ್ಯವಿರುವ ಸವಲತ್ತುಗಳನ್ನು ಸಮರ್ಪಣೆ ಮಾಡಬೇಕು. ನೂರಾರು ಭಕ್ತರಿಗೆ ಇದರಿಂದ ಸಂಭ್ರಮ ಮತ್ತು ಆನಂದ ಹೆಚ್ಚಾಗಲಿ ಎಂಬ ಉದ್ದೇಶದಿಂದ 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ರಥ ಸಮರ್ಪಣೆ ಮಾಡುವ ಯೋಗ ನಮಗೆ ದೊರಕಿರುವುದು ಸುಕೃತವೇ ಆಗಿದೆ ಎಂದರು.
ವೆಂಕಟೇಶ ಧ್ಯಾನ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಪಂಡಿತ ಹೇಮಂತಾಚಾರ್ಯ ಗುಡಿ, ಅಗ್ರಹಾರದ ಧನ್ವಂತರಿ ಸನ್ನಿಧಾನದ ಪ್ರಧಾನ ವ್ಯವಸ್ಥಾಪಕ ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ, ದಾನಿ ಎ.ಎನ್. ರಮೇಶ್, ಉದ್ಯಮಿ ನಾಗೇಂದ್ರ ಇತರರು ಇದ್ದರು.
ಶರನ್ನವರಾತ್ರಿ #Sharannavarathri ಅಂಗವಾಗಿ ಇದೇ ಸಂದರ್ಭ ಲಕ್ಷ ಲಕ್ಷ್ಮೀ ಹೃದಯ ಹೋಮ, ಲಕ್ಷ ನಾರಾಯಣ ಹೃದಯ ಹೋಮ ನೆರವೇರಿತು.
ಶ್ರೀಮಾತೆ ರಮಾಬಾಯಿ ಗೋವಿಂದಾಚಾರ್ಯ ಪಾಂಡುರಂಗಿ ನೇತೃತ್ವದಲ್ಲಿ ನೂರಾರು ಮಾತೆಯರಿಂದ ಲಕ್ಷ್ಮೀ ಶೋಭಾನ ಪಾರಾಯಣ, ನಂತರ ಅನ್ನ ಸಂತರ್ಪಣೆ, ಬೆಮೆಲ್ ಆರ್ಚ್ ಸಮೀಪ ಸಾರ್ವಜನಿಕರಿಗೆ ಮಹಾ ಪ್ರಸಾದ ವಿತರಣೆ ನೆರವೇರಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
























