ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಅಕ್ಟೋಬರ್ 1: ಪ್ರತಿ ವರ್ಷ ಆಚರಿಸಲಾಗುವ ಸ್ವಯಂಪ್ರೇರಿತ ರಕ್ತದಾನಿಗಳ ದಿನ.
ಭಾರತದಲ್ಲಿ ವರ್ಗಾವಣೆ ಔಷಧದ ಪಿತಾಮಹ ಎಂದು ಪರಿಗಣಿಸಲಾಗಿರುವ ಭಾರತೀಯ ವೈದ್ಯರೊಬ್ಬರು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಕ್ತದ ವರ್ಗಾವಣೆ ಕುರಿತಾಗಿ ಮಾಡಿರುವ ಸಂಶೋಧನೆ ಹಾಗೂ ಭಾರತದಲ್ಲಿ ಪ್ರಥಮ ಬಾರಿಗೆ ಟ್ರಾನ್ಸ್ಫ್ಯೂಷನ್ ಮೆಡಿಸಿನ್’ನಲ್ಲಿ ಸ್ನಾತಕೋತ್ತರ ಪದವಿಗಳನ್ನು ಪರಿಚಯಿಸಿ ರಕ್ತನಿಧಿ ಎಂದು ಕರೆಸಿಕೊಳ್ಳುವ ಬ್ಲಡ್ ಬ್ಯಾಂಕ್’ಗಳ ಹುಟ್ಟಿಗೆ ಕಾರಣಕರ್ತರೆನಿಸಿ, ಸಾರ್ವಜನಿಕರಲ್ಲಿ ರಕ್ತದಾನ ಕುರಿತು ಇದ್ದ ಮಿಥ್ಯಗಳನ್ನು ನಿವಾರಿಸಿ ಜಾಗೃತಿ ಮೂಡಿಸುವಲ್ಲಿ ಶ್ರಮ ವಹಿಸಿ, ಅವರು ಭಾರತಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸುವ ಸಂಪ್ರದಾಯದ ಭಾಗವಾಗಿ ಈ ದಿನವನ್ನು 1975 ರಿಂದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತದಲ್ಲಿ ರಕ್ತವು ಮಾರುವ ಅಥವಾ ಕೊಳ್ಳುವ ಒಂದು ವಸ್ತುವಲ್ಲ ಎಂದು ಪ್ರತಿಪಾದಿಸಿ ಈ ಅಂಶಗಳನ್ನು ಭಾರತ ಸರ್ಕಾರವು ಭಾರತದ ರಾಷ್ಟ್ರೀಯ ರಕ್ತ ನೀತಿಗೆ ಸೇರಿಸುವಲ್ಲಿ ಅಪಾರ ಶ್ರಮ ವಹಿಸಿದ ಡಾ.ಜೈಗೋಪಾಲ್ ಜಾಲಿಯವರ ಜನ್ಮದಿನವನ್ನು ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನಿಗಳ ದಿನವನ್ನಾಗಿ ಆಚರಿಸಿ ಅವರ ಕೊಡುಗೆಯನ್ನು ಭಾರತ ಸರ್ಕಾರವು ಸ್ಮರಿಸುತ್ತಿದೆ.
ನಮ್ಮ ಶಿವಮೊಗ್ಗದ ಇತಿಹಾಸವನ್ನು ಶೋಧಿಸಿದರೆ, ನಗರದ ಜೆಪಿಎನ್ ರಸ್ತೆಯಲ್ಲಿದ್ದ ವೆಲ್ಡನ್ ಲ್ಯಾಬೊರೇಟೊರಿಯು ದಾನಿಗಳ ರಕ್ತದ ಸ್ಯಾಂಪಲ್ ಪಡೆದು ಗುಂಪನ್ನು ಪತ್ತೆ ಹಚ್ಚಿ ನಂತರ ವಿವಿಧ ಅಗತ್ಯ ಪರೀಕ್ಷೆಗಳನ್ನು ನಡೆಸಿ, ರಕ್ತವನ್ನು ಪಡೆಯಲು ಯೋಗ್ಯವೆಂದು ಖಾತ್ರಿಯಾದ ಮೇಲಷ್ಟೇ ದಾನಿಗಳಿಂದ ರಕ್ತ ಪಡೆದು ಅಗತ್ಯವಿದ್ದವರಿಗೆ ನೀಡುವ ಹೊತ್ತಿಗೆ ಅರ್ಧ ದಿನ ಕಳೆದು ಹೋಗಿರುತ್ತಿತ್ತು.
ರಕ್ತ ಸಂಗ್ರಹ ಮಾಡಲು ಅಗತ್ಯ ಯಂತ್ರೋಪಕರಣಗಳು ಇಲ್ಲದಿದ್ದ ಆ ಸಮಯದಲ್ಲಿ ವೆಲ್ಡನ್ ಲ್ಯಾಬಿನ ಅಂದಿನ ಸೇವೆ ಅತೀ ಮಹತ್ವದ್ದಾಗಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ. 1997ರಲ್ಲಿ ಅಂತಾರಾಷ್ಟ್ರೀಯ ರೋಟರಿ ಸೇವಾ ಸಂಸ್ಥೆಯ ಭಾಗವಾದ ಶಿವಮೊಗ್ಗದ ರೋಟರಿ ಮಿಡ್ ಟೌನ್ ಸಂಸ್ಥೆಯ ಆಸಕ್ತಿಯ ಫಲವಾಗಿ ರೋಟರಿ ಬ್ಲಡ್ ಬ್ಯಾಂಕ್ ಸ್ಥಾಪನೆಗೊಂಡು ಅಂದಿನಿಂದ ಇಂದಿನವರೆಗೂ ಎಡಬಿಡದೇ ಕಾರ್ಯನಿರ್ವಹಿಸುತ್ತಾ ಲಕ್ಷಾಂತರ ಜನರ ಪ್ರಾಣ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವುದು ಶಿವಮೊಗ್ಗದ ಜನರಿಗೆ ಅರಿಯದ ವಿಷಯವೇನಲ್ಲ. ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಶಿವಮೊಗ್ಗದ ಶಾಖೆಯಾದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶಿವಮೊಗ್ಗ 2006ರಲ್ಲಿ ಪ್ರಾರಂಭಗೊಂಡು ನಿರಂತರ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ರಕ್ತದಾನ ಕುರಿತಾಗಿ ಜಾಗೃತಿ ಮೂಡಿಸುತ್ತ ರಕ್ತದಾನದ ಮಹತ್ವವನ್ನು ಸಾರುತ್ತಿದೆ. ಅಷ್ಟೇ ಅಲ್ಲದೇ ಶಾಲಾ ಮಕ್ಕಳಿಗೆ ರಕ್ತದ ಗುಂಪು ಪತ್ತೆ ಹಚ್ಚುವ ಶಿಬಿರಗಳನ್ನು ಆಯಾ ಶಾಲೆಗಳ ಮುಖ್ಯೋಪಾಧ್ಯಾಯರ ವಿನಂತಿಯ ಮೇರೆಗೆ ಉಚಿತವಾಗಿ ನಡೆಸಿಕೊಡುತ್ತಾ ಶಾಲಾ ಮಕ್ಕಳಲ್ಲಿ ರಕ್ತದಾನದ ಮಹತ್ವವನ್ನು ತಿಳಿಸಿಕೊಡುವಲ್ಲಿ ಯಶಸ್ವಿಯಾಗಿದೆ.ಇತ್ತೀಚೆಗೆ ವಿಶ್ವವು ಎದುರಿಸಿದ ಭೀಕರ ಕೊರೋನಾಘಾತದಲ್ಲಿಯೂ ರಕ್ತದಾನ ಸೇವಾ ಸಂಸ್ಥೆಗಳು ಹೆಚ್ಚು ಹೆಚ್ಚು ರಕ್ತ ಸಂಗ್ರಹಣೆಗೆ ಒತ್ತು ನೀಡಿದ್ದವಾದರೂ ಸಾರ್ವಜನಿಕರಲ್ಲಿ ಉಂಟಾಗಿದ್ದ ಕೊರೋನಾ ಭಯದಿಂದ ಒಂದಷ್ಟು ಹಿನ್ನಡೆ ಅನುಭವಿಸಬೇಕಾಗಿ ಬಂದು ರೋಗಿಗಳು ತಮ್ಮ ರಕ್ತದ ಅವಶ್ಯಕತೆಗೆ ಪರದಾಡಿದ್ದನ್ನು ಮನಗಂಡು ದಾಳಿಗಳಲ್ಲಿ ವಿಶೇಷ ಮನವಿ ಮಾಡಿ ರಕ್ತನಿಧಿ ಕೇಂದ್ರಗಳಿಗೆ ಬರುವಂತೆ ಪ್ರೇರೇಪಣೆ ನೀಡಿ ಸಾಕಷ್ಟು ಜೀವಗಳನ್ನು ಉಳಿಸಿದ ತೃಪ್ತಿ ತಮಗಿದೆ ಎನ್ನುತ್ತಾರೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶಿವಮೊಗ್ಗದ ಮುಖ್ಯಸ್ಥರಾದ ಧರಣೇಂದ್ರ ದಿನಕರ್. ಯುವ ಸಮುದಾಯದಲ್ಲಿ ರಕ್ತದಾನದ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ ಎನ್ನುತ್ತಾರೆ.
ಪ್ರಸ್ತುತ ರೋಟರಿ ಬ್ಲಡ್ ಬ್ಯಾಂಕ್ ಶಾಖೆಯಲ್ಲಿ ಪ್ರತಿ ತಿಂಗಳಿಗೆ ಅಂದಾಜು 900 ಯೂನಿಟ್ ಸಂಗ್ರಹವಾಗುತ್ತಿದ್ದು ರೆಡ್ ಕ್ರಾಸ್ ಶಿವಮೊಗ್ಗದಲ್ಲಿ ಅಂದಾಜ 700 ಯೂನಿಟ್ ಪ್ರತಿ ತಿಂಗಳಿಗೆ ಸಂಗ್ರಹವಾಗುತ್ತಿದೆ. ಇನ್ನುಳಿದಂತೆ ನಗರದ ಮೆಗಾನ್ ಆಸ್ಪತ್ರೆಯ ರಕ್ತನಿಧಿಯಲ್ಲಿ ಸುಮಾರು ಒಂದು ಸಾವಿರ ಯೂನಿಟ್’ಗಳಷ್ಟು ಸಂಗ್ರಹವಾದರೆ ಇತರೆ ಆಸ್ಪತ್ರೆಗಳಲ್ಲಿ ಒಂದು ಸಾವಿರ ಯೂನಿಟ್’ಗಳಷ್ಟು ಸಂಗ್ರಹ ಸೇರಿ ಶಿವಮೊಗ್ಗದ ಒಟ್ಟಾರೆ ರಕ್ತದ ಯೂನಿಟ್ ಸಂಗ್ರಹ ಸಾಮರ್ಥ್ಯವು ಪ್ರತಿ ತಿಂಗಳಿಗೆ ಸುಮಾರು 3500 ದಿಂದ 4000 ಎಂದು ಅಂದಾಜಿಸಬಹುದು. ಆದರೂ ಈ ಸಂಖ್ಯೆಯು ಶಿವಮೊಗ್ಗದ ಒಟ್ಟು ಅಗತ್ಯಕ್ಕಿಂದ ಕಡಿಮೆ ಎನ್ನುವುದು ಗಮನಿಸಬೇಕಾದ ಬಹುಮುಖ್ಯ ಅಂಶ. ಈ ನಿಟ್ಟಿನಲ್ಲಿ ಎನ್’ಎಸ್’ಎಸ್, ಎನ್’ಸಿಸಿ, ಯಂಗ್ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ಎಲ್ಲಾ ಕಾಲೇಜುಗಳ ಪ್ರತಿನಿಧಿಗಳು, ಯುವಜನರು ಸಕ್ರಿಯರಾಗಿ ತಾವೂ ರಕ್ತದಾನ ಮಾಡಿ ಇತರರಿಗೂ ಪ್ರೇರಣೆ ನೀಡುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯಬೇಕಿದೆ.ಇತ್ತೀಚೆಗೆ ಯುವಜನರು ಹುಟ್ಟು ಹಬ್ಬಗಳಂದು, ವಿವಾಹ ಮಹೋತ್ಸವದಂದು ಹಾಗೂ ಇತರೆ ವಿಶೇಷ ದಿನಗಳಂದು ರಕ್ತದಾನ ಮಾಡುವ ಹವ್ಯಾಸ ಬೆಳೆಯುತ್ತಿದ್ದು ಜಾಗೃತಿ ಮೂಡಿಸುವಲ್ಲಿ ಪರಿಣಾಮಕಾರಿಯಾಗಿದೆ. ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ರಕ್ತದಾನದ ಬಗ್ಗೆ ಅತಿ ಹೆಚ್ಚು ಜಾಗೃತಿಯ ಅಗತ್ಯವಿದ್ದು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನದಿಂದ ಆರೋಗ್ಯ ವೃದ್ದಿಸುವುದಲ್ಲದೇ ದೇಹದಲ್ಲಿ ಹೊಸ ರಕ್ತಕಣಗಳ ಉತ್ಪಾದನೆಯು ಹೆಚ್ಚು ಲವಲವಿಕೆಯಿಂದಿರಲು ಸಹಾಯಕಾರಿಯಾಗುತ್ತದೆ ಎಂಬ ವೈದ್ಯರ ಅಭಿಪ್ರಾಯವನ್ನು ನಾವುಗಳು ಅರಿಯಬೇಕಿದೆ. ಪ್ರತಿ ರಕ್ತದಾನವು ಒಂದೊಂದು ಜೀವವನ್ನು ಉಳಿಸಬಲ್ಲದು ಎಂದಾದರೆ ಮನುಷ್ಯನ ಜೀವಿತಾವಧಿಯಲ್ಲಿ ಅದೆಷ್ಟು ಜೀವಗಳನ್ನು ಉಳಿಸಬಲ್ಲೆವು ಅಲ್ಲವೇ? ಬನ್ನಿ ಕಾರ್ಯಪ್ರವೃತ್ತರಾಗೋಣ…
ರಕ್ತದಾನ ಶಿಬಿರಗಳನ್ನು ಆಯೋಜಿಸಲು, ಶಾಲಾ ಮಕ್ಕಳಿಗೆ ರಕ್ತದ ಗುಂಪು ಪತ್ತೆ ಹಚ್ಚುವ ಶಿಬಿರಗಳು ಮತ್ತಿತರ ರಕ್ತದಾನದ ಯಾವುದೇ ಮಾಹಿತಿಗಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶಿವಮೊಗ್ಗದ ಶ್ರೀಧರಣೇಂದ್ರ ದಿನಕರ್ ಇವರನ್ನು ಸಂಪರ್ಕಿಸಬಹುದಾಗಿದೆ. ಇವರ ಮೊಬೈಲ್ ಸಂಖ್ಯೆ: 9481210866.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post