ಶಿವಮೊಗ್ಗ: ಮಲೆನಾಡಿನ ಪ್ರತಿಷ್ಠಿತ ಸಹಚೇತನ ನಾಟ್ಯಾಲಯದ ವತಿಯಿಂದ ನಾಟ್ಯಾರಾಧನಾ-10 ಎಂಬ ವಿಶೇಷ ನೃತ್ಯ ವೈಭವವನ್ನು ಸೆ.20, 21 ಹಾಗೂ 22ರಂದು ಆಯೋಜಿಸಲಾಗಿದೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಸಹಚೇತನ ನಾಟ್ಯಾಲಯದ ನೃತ್ಯಗುರು ಸಹನಾ ಚೇತನ್, ನೃತ್ಯದ ಪರಿಭಾಷೆ ಮಾನವನ ಆತ್ಮ ವಿಕಾಸದ ಬುನಾದಿ. ಸಂಸ್ಕೃತಿ ಸಂಸ್ಕಾರಗಳ ಜೊತೆಜೊತೆಗೆ ನಮ್ಮ ದೇಶದ ಇತಿಹಾಸ ಹಾಗೂ ಕಲಾಸಿರಿವಂತಿಕೆಯನ್ನು ಈ ಕಾಲಘಟ್ಟದಲ್ಲೂ ನಾವು ನೋಡುತ್ತಿದ್ದೇವೆಂದರೆ ಅದು ನಮ್ಮ ಹಿರಿಯರು ನಮಗೆ ನೀಡಿದ ಬಳುವಳಿ. ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೇಶದ ಮೂಲೆಮೂಲೆಗಳಿಂದ ಕಂಡುಕೇಳರಿಯದ ನೃತ್ಯ ಪ್ರಕಾರಗಳನ್ನು ಕರೆಯಿಸಿ ಶಿವಮೊಗ್ಗೆಯ ರಸಿಕರಿಗೆ ಕಲಾರಸಸ್ವಾದವನ್ನು ಕಳೆದ ಒಂಬತ್ತು ವರ್ಷಗಳಿಂದ ನೀಡುತ್ತಾ ಬಂದಿದ್ದು ಈ ನಿಟ್ಟಿನಲ್ಲಿ ಭಾರತೀಯ ಸಂಸ್ಕೃತಿಯ ಪ್ರಾಚೀನ ಪರಂಪರೆಯಾದ ನೃತ್ಯಕಲೆಗೆ ಸಹಚೇತನ ನಾಟ್ಯಾಲಯ ಈ ಕಾರ್ಯಕ್ರಮವನ್ನು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದೆ ಎಂದರು.
ಈ ಬಾರಿ ಸಹಚೇತನ ತನ್ನ ಹತ್ತನೆಯ ವರ್ಷದ ನಾಟ್ಯಾರಾಧನೆಯನ್ನು ಆಚರಿಸುತ್ತಿದೆ. ಸೆ. 20ರಂದು ಪ್ರಣವಾಕಾರಂ ಪ್ರಣಮಾಮ್ ಎಂಬ ಶೀರ್ಷಿಕೆಯ ಅಡಿಯಲ್ಲಿ ಶಾಸ್ತ್ರೀಯ ಮಾರ್ಗ ಆಧಾರಿತ ಶ್ರೀಗಣೇಶನ ವಿಶೇಷ ಕೃತಿಗಳನ್ನು ನೃತ್ಯಕ್ಕೆ ಅಳವಡಿಸಲಾಗಿದ್ದು, ನಾಟ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ವೇದಿಕೆಯಲ್ಲಿ ಪ್ರಸ್ತುತ ಪಡಿಸುತ್ತಾರೆ ಎಂದರು.
ಸೆಪ್ಟೆಂಬರ್ 21 ರಂದು ನೃತ್ಯಗುರು ಸಹನಾ ಚೇತನ್ ತಮ್ಮ ಏಕವ್ಯಕ್ತಿ ನೃತ್ಯ ರೂಪಕದಲ್ಲಿ ಕೃಷ್ಣನ ಒಂದು ವಿಶಿಷ್ಟ ಕೀರ್ತನೆಯನ್ನು ಆರಿಸಿಕೊಂಡು ಆ ಕೀರ್ತನೆಯಲ್ಲಿ ಶ್ರೀಕೃಷ್ಣನ ಬಗೆಗಿನ ವಿವಿಧ ಜನರ ಒಂಬತ್ತು ವಿಭಿನ್ನ ಆಲೋಚನೆಗಳು ಮತ್ತು ಭಾವನೆಗಳನ್ನು ನವರಸ ವಿಲಾಸ ಎಂಬ ಶೀರ್ಷಿಕೆಯಡಿ ಪ್ರದರ್ಶಿಸಲಾಗುತ್ತದೆ. ನಂತರ ಭರತನಾಟ್ಯದ ವಿವಿಧ ಆಯಾಮಗಳನ್ನು ಪ್ರತಿಬಿಂಭಿಸುವ ಸಾಧಾರಣ ಮಾರ್ಗದಿಂದ ಮೊದಲುಗೊಂಡು ಬೇರೆ ಬೇರೆ ಶೈಲಿಗಳಲ್ಲಿ ಹಾಗೂ ರಾಜ್ಯಗಳಲ್ಲಿ ಅಳವಡಿಸಿಕೊಂಡಿರುವ ವಿಶೇಷ ಮಾರ್ಗನೃತ್ಯ ಭಾಗಗಳನ್ನು ಪ್ರಸ್ತುತ ಪಡಿಸುತ್ತಾ ಶ್ರೀರಾಮ ಕೀರ್ತನೆಗಳನ್ನೂ ಶ್ರೀರಾಮ ನಾಟ್ಯಂನಲ್ಲಿ ಪ್ರದರ್ಶಿಸಲಾಗುವುದು ಎಂದರು.
ಸೆ.22ರಂದು ವಿಶೇಷವಾಗಿ ಮಲೆನಾಡಿಗರ ಪಾಲಿಗೆ ರೋಚಕ ಅನುಭವವನ್ನು ಕೊಡುವ ಕೇರಳದ ಕ್ಷೇತ್ರ ಡಾನ್ಸ್ ಕಂಪನಿಯವರಿಂದ ಕೂಚುಪುಡಿ ಹಾಗೂ ಭರತನಾಟ್ಯ ನೃತ್ಯಗಳ ವಿಶಿಷ್ಟ ಸಮ್ಮಿಲನವನ್ನು ಪ್ರದರ್ಶಿಸಲಾಗುತ್ತದೆ. ಈ ಎರಡೂ ನೃತ್ಯ ಶೈಲಿಗಳನ್ನು ಕರಗತಗೊಳಿಸಿಕೊಂಡಿರುವ ತಂಡದ ಮುಖ್ಯ ನೃತ್ಯಗಾರರಾದ ಸರುಣ್ ರವೀಂದ್ರನ್ ಇವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನೃತ್ಯ ಸಂಯೋಜನೆಗಳನ್ನು ಮಾಡಿ ತಂಡ ಕಟ್ಟಿ ವಿಶ್ವದಾದ್ಯಂತ ಪ್ರದರ್ಶನಗಳನ್ನು ಈಗಾಗಲೇ ನೀಡುತ್ತಾ ಬಂದಿದ್ದಾರೆ. ಜೊತೆಗೆ ಗಾಜಿಯಾಬಾದ್’ನ ಫುಟ್ ವರ್ಕ್ಸ್ ಡಾನ್ಸ್ ಕಂಪನಿ ತಂಡದವರು ಪ್ಲಾಸ್ಟಿಕ್ ನಿರ್ಮೂಲನೆ ಹಾಗೂ ಅದರಿಂದಾಗುವ ಭಯಾನಕ ದುರಂತಗಳ ಪ್ರತ್ಯಕ್ಷ ನಿರೂಪಣೆಯನ್ನು ಕಟ್ಟಿಕೊಡುವ ಹೊಸ ರೀತಿಯ ಪ್ರಯತ್ನವನ್ನು ಸಮಕಾಲೀನ ನೃತ್ಯದಲ್ಲಿ (ಕಂಟೆಂಪರರಿ) ಪ್ರಸ್ತುತಪಡಿಸಲಿದ್ದಾರೆ ಎಂದರು.
ಈ ಮೂರೂ ದಿನಗಳ ಕಾರ್ಯಕ್ರಮಕ್ಕೆ ವಾಸು, ವಿಕ್ರಂ ಆರ್ಟ್ಸ್’ರವರ ರಂಗ ಸಜ್ಜಿಕೆ, ಹರಿಗೆ ಗೋಪಾಲಸ್ವಾಮಿಯವರ ಬೆಳಕಿನ ವಿನ್ಯಾಸ, ಪುರುಷೋತ್ತಮ ತಲವಾಟ ಮತ್ತು ವೃಂದದವರ ಪ್ರಸಾಧನವಿದ್ದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರವಿದೆ ಎಂದರು.
ಕಾರ್ಯಕ್ರಮಕ್ಕೆ ಉದ್ಘಾಟನಾ ದಿನದಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಪಾಲಿಕೆ ಸದಸ್ಯ ಪ್ರಭಾಕರ ಪಿ.(ಪ್ರಭು) ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರೋಪದಂದು ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ ಹಾಗೂ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅತಿಥಿ, ಕಲಾವಿದರನ್ನು ಸನ್ಮಾನಿಸಲಿದ್ದಾರೆ ಎಂದರು.
ಈ ಮೂರೂ ದಿನಗಳ ಸಾಂಸ್ಕೃತಿಕ ರಸದೌತಣಕ್ಕೆ ಉಚಿತ ಪ್ರವೇಶವಿದ್ದು ಕಲಾಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಸಹಚೇತನ ಬಳಗಕ್ಕೆ ಹುರಿದುಂಬಿಸಿ ಕಲಾಭಿಮಾನಿಗಳೆಲ್ಲರೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಹಚೇತನ ಬಳಗದ ಗೌರವಾಧ್ಯಕ್ಷರಾದ ಎಸ್.ಎನ್. ಚನ್ನಬಸಪ್ಪ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನಾಟ್ಯಾಲಯದ ಗೌರವಾಧ್ಯಕ್ಷರಾದ ಎಸ್.ಎನ್. ಚನ್ನಬಸಪ್ಪ, ಅಧ್ಯಕ್ಷ ಎನ್.ಆರ್. ಪ್ರಕಾಶ್, ಖಜಾಂಚಿ ಎಸ್. ಚೇತನ್, ನಿರ್ದೇಶಕರುಗಳಾದ ಆನಂದ್ ರಾಮ್, ಮಾಲತೇಶ್, ಹರೀಶ್ ಕಾರ್ಣಿಕ್, ಲಕ್ಷ್ಮೀನಾರಾಯಣ್, ಮಾಲತೇಶ್, ಪಾರ್ವತಿ, ಸಿಂಧುಶ್ರೀ ಉಪಸ್ಥಿತರಿದ್ದರು.
Discussion about this post