ನವದೆಹಲಿ: ಅದು 2012ರ ಡಿಸೆಂಬರ್ 16… 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ(ಜ್ಯೋತಿ ಸಿಂಗ್).. ಆ ಯುವತಿಯ ಮೇಲೆ ಆರು ಕಾಮಾಂಧರು ಚಲಿಸುವ ಬಸ್ನಲ್ಲಿ ಅತ್ಯಂತ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಎಸಗಿ, ಭೀಕರವಾಗಿ ಹತ್ಯೆ ಯತ್ನ ಮಾಡಿದ್ದರು. ಮಾತ್ರವಲ್ಲ, ಆಕೆಯ ಸ್ನೇಹಿತನ ಮೇಲೂ ಸಹ ಗಂಭೀರವಾಗಿ ಹತ್ಯೆ ಯತ್ನ ಮಾಡಿ, ಇಬ್ಬರನ್ನೂ ನಡು ರಸ್ತೆಯಲ್ಲಿ ಎಸೆದು ಕರುಣೆಯಿಲ್ಲದೇ ಹೋಗಿದ್ದರು.
ಇಂತಹ ಕ್ರೂರಾತಿಕ್ರೂರ ಕೃತ್ಯಕ್ಕೆ ಇಡಿಯ ದೇಶವೇ ಬೆಚ್ಚಿ ಬಿದ್ದಿತ್ತು, ದೇಶದಾದ್ಯಂತ ಸಾಲು ಸಾಲು ಪ್ರತಿಭಟನೆ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು. ಅಂತಹ ಘೋರ ರಾಕ್ಷಸೀಕೃತ್ಯಕ್ಕೆಮ ಬಲಿಪಶುಗಳಾದ ಯುವತಿಗೆ ನ್ಯಾಯ ದೊರಕಬೇಕು ಎಂದು ದೇಶವೇ ಬೆನ್ನಿಗೆ ನಿಂತಿತ್ತು.
ಸರ್ಕಾರ ಈ ಘಟನೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ತನಿಖೆಗೆ ಆದೇಶಿಸಿತು. ಅಪರಾಧಿಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು ಎಂಬ ಒತ್ತಡ ದೇಶದಾದ್ಯಂತ ಹೆಚ್ಚಿ, ಪೊಲೀಸರು ಜಾಗೃತರಾದರು.
ಇನ್ನು, ಇಂದು ಎಸಿಪಿ ಆಗಿರುವ ರಾಜೇಂದ್ರ ಸಿಂಗ್ ಅಂದು ಇನ್ಸ್ ಪೆಕ್ಟರ್ ಆಗಿದ್ದರು. ಪ್ರಕರಣದ ತನಿಖಾಧಿಕಾರಿಯಾಗಿ ಅವರನ್ನು ನೇಮಿಸಲಾಯಿತು. ಪೊಲೀಸರ ಮೇಲೆ ಒತ್ತಡ ಹೇರಲು, ಘಟನೆಯನ್ನು ಪ್ರತಿಭಟಿಸಲು ಸಾರ್ವಜನಿಕರು ಹಾಗೂ ಮಾಧ್ಯಮಗಳು ವಸಂತ್ ವಿಹಾರ್ ಪೊಲೀಸ್ ಠಾಣೆಯ ಮೇನ್ ಗೇಟ್ಗಳು ಜಮಾಯಿಸಿದ್ದರು. ಹೀಗಾಗಿ, ಠಾಣೆಗೆ ಆಗಮಿಸಬೇಕಿದ್ದ ಅಧಿಕಾರಿಗಳು ಹಿಂಬದಿಯ ಕಾಂಪೌಂಡ್ ಹಾರಿ ಒಳ ಬರಬೇಕಾಗಿತ್ತು.
ಇನ್ನು, ಅಂದು ದಕ್ಷಿಣ ದೆಹಲಿಯ ಡಿಸಿಪಿ ಆಗಿದ್ದ ಛಾಯಾ ಶರ್ಮಾ ಪ್ರಕರಣದ ತನಿಖೆಯನ್ನು ನಿರ್ದೇಶನ ಮಾಡುತ್ತಿದ್ದರು. 1 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಮಹಾನಗರದಲ್ಲಿ ಆರೋಪಿಗಳನ್ನು ಕಂಡುಹಿಡಿಯುವುದು ಅತ್ಯಂತ ಸಾಹಸದ ಕೆಲಸವಾಗಿತ್ತು. ಇದಕ್ಕಾಗಿ, 100ಕ್ಕೂ ಅಧಿಕ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಯಿತು. ಪರಿಣಾಮ 72 ಗಂಟೆಯೊಳಗೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿ, ಚಾರ್ಜ್ಶೀಟ್ ದಾಖಲಿಸಲಾಯಿತು.
ಪ್ರಕರಣದ ತನಿಖೆ ಕುರಿತಂತೆ ಮಾಹಿತಿ ನೀಡಿರುವ ದೆಹಲಿ ಪೊಲೀಸ್ ವಿಶೇಷ ದಳದ ಡಿಸಿಪಿ ಪಿ.ಎಸ್. ಖುಶ್ವಂತ್, ಆರಂಭದಲ್ಲಿ ಪ್ರಕರಣವನ್ನು ಬೇಧಿಸುವುದು ಅತ್ಯಂತ ಕ್ಲಿಷ್ಟವಾಗಿತ್ತು. ಯಾವುದೇ ರೀತಿಯ ಸುಳಿವನ್ನು ಆರೋಪಿಗಳು ಬಿಟ್ಟಿರಲಿಲ್ಲ. ಹೀಗಾಗಿ, ಘಟನೆ ನಡೆದ ಪ್ರದೇಶಗಳಲ್ಲಿರುವ ಎಲ್ಲ ಹೊಟೇಲ್ ಹಾಗೂ ಕಟ್ಟಡಗಳ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ, ಪರಿಶೀಲನೆ ನಡೆಸಲಾಯಿತು. ಈ ವೇಳೆ ರಾತ್ರಿ 9.34 ಹಾಗೂ 9.54ಕ್ಕೆ ಒಂದೇ ಬಸ್, ಒಂದೇ ಬಸ್ ನಿಲ್ದಾಣಕ್ಕೆ ಎರಡು ಬಾರಿ ಆಗಮಿಸಿದ ದೃಶ್ಯ ದೊರಕಿದ್ದು, ಅನುಮಾನಕ್ಕೆ ಕಾರಣವಾಗಿ, ಪ್ರಕರಣ ಬೇಧಿಸಲು ಇದೇ ಪ್ರಮುಖ ಅಂಶವಾಗಿತ್ತು. ಆ ವೇಳೆ ಸುಮಾರು 381 ಬಸ್ಗಳನ್ನು ತಪಾಸಣೆ ನಡೆಸಲಾಗಿತ್ತು ಎಂದಿದ್ದಾರೆ.
ಈ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ, ಅನುಮಾನಕ್ಕೆ ಕಾರಣವಾದ ಬಸ್ಸನ್ನು ರಾತ್ರಿಯೊಳಗೆ ಹುಡುಕಲಾಯಿತು. ಬಸ್ ಚಾಲಕ ರಾಮ್ ಸಿಂಗ್ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಯಿತು. ಆರಂಭದಲ್ಲಿ ಅಪರಾಧವನ್ನು ಒಪ್ಪಿಕೊಳ್ಳದ ಆತ, ಆನಂತರ ತಮ್ಮ ತಪ್ಪನ್ನು ಒಪ್ಪಿಕೊಂಡ ಎಂದರು.
ಈತ ನೀಡಿದ್ದ ಮಾಹಿತಿ ಆಧರಿಸಿ, ಎಲ್ಲ ಆರೋಪಿಗಳನ್ನು ಘಟನೆ ನಡೆದ ಕೇವಲ 72 ಗಂಟೆಗಳ ಒಳಗಾಗಿ ದೆಹಲಿ ಪೊಲೀಸರು ಬಂಧಿಸಿ, ದಾಖಲೆ ಬರೆದಿದ್ದರು.
Discussion about this post