ನವದೆಹಲಿ: ಯಾವುದೇ ಪೊಲೀಸರು ಇನ್ನು ಮುಂದೆ ಶೂ ಧರಿಸಿ, ಶಸ್ತ್ರಾಸ್ತ್ರ ಹಿಡಿದು ಪುರಿ ಜಗನ್ನಾಥ ದೇವಾಲಯವನ್ನು ಪ್ರವೇಶಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.
ಈ ಕುರಿತಂತೆ ಅರ್ಜಿಯೊಂದರ ವಿಚಾರಣೆ ನಡೆಸಿ, ತೀರ್ಪು ನೀಡಿರುವ ನ್ಯಾಯಾಲಯ, ಯಾವುದೇ ಪೊಲೀಸರೇ ಆಗಲಿ, ಭದ್ರತಾ ಸಿಬ್ಬಂದಿಗಳೇ ಆಗಲಿ ಯಾವುದೇ ಕಾರಣಕ್ಕೂ ಶೂ ಹಾಗೂ ಶಸ್ತ್ರ ಧರಿಸಿ ದೇಗುಲವನ್ನು ಪ್ರವೇಶ ಮಾಡುವಂತಿಲ್ಲ ಎಂದಿದೆ.
ಜಗನ್ನಾಥ ದೇಗುಲದಲ್ಲಿ ಹೊಸ ಕ್ಯೂ ವ್ಯವಸ್ಥೆಯಿಂದ ಬೇಸಕ್ತ ಭಕ್ತಾದಿಗಳು ಅ.3 ರಂದು ಬಂದ್ಗೆ ಕರೆ ನೀಡಿದ್ದರು. ಈ ಬಂದ್ ಹಿಂಸಾರೂಪಕ್ಕೆ ತಿರುಗಿತ್ತು. ಪ್ರತಿಭಟನೆಗಿಳಿದಿದ್ದ ಭಕ್ತರು ಏಕಾಏಕಿ ದೇವಸ್ಥಾನದ ಆಡಳಿತ ಮಂಡಳಿಯ ಕಚೇರಿ ಮೇಲೆ ದಾಳಿ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಸಂಘಟನೆಯೊಂದು ನ್ಯಾಯಾಲಯದ ಮೆಟ್ಟಿಲೇರಿತ್ತು. ಪುರಿ ಜಗನ್ನಾಥ ದೇಗುಲದೊಳಗೆ ಪೊಲೀಸರು ಶಸ್ತ್ರಾಸ್ತ್ರ ಹಾಗೂ ಶೂಗಳನ್ನು ಧರಿಸಿ ಪ್ರವೇಶ ಮಾಡುತ್ತಿದ್ದಾರೆ. ಪ್ರಕರಣ ಸಂಬಂಧ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿತ್ತು.
ಈ ಅರ್ಜಿ ಕುರಿತಂತೆ ಇಂದು ವಿಚಾರಣೆ ನಡೆಸಿ, ನ್ಯಾಯಾಲಯ ತೀರ್ಪು ನೀಡಿದೆ.
Discussion about this post