ನವದೆಹಲಿ: ಮೊಬೈಲ್ ಬಳಕೆದಾರರನ್ನು ಬೆಂಬಿಡದೆ ಕಾಡುವ ಕಾಲ್ ಡ್ರಾಪ್ ಸಮಸ್ಯೆ ಕೇವಲ ಜನಸಾಮಾನ್ಯರನ್ನು ಮಾತ್ರವಲ್ಲ, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಸಹ ಕಾಡಿದೆ.
ಈ ಕುರಿತಂತೆ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದ್ದು, ಪ್ರಧಾನಿ ಪ್ರಗತಿ ಅವಲೋಕನ ಸಭೆ ನಡೆಸುತ್ತಿದ್ದಾಗ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ದೆಹಲಿ ವಿಮಾನ ನಿಲ್ದಾಣದಿಂದ ಅಧಿಕೃತ ನಿವಾಸಕ್ಕೆ ತೆರಳುವ ಸಂದರ್ಭದಲ್ಲಿ ಕರೆ ಪೂರ್ಣಗೊಳಿಸುವಲ್ಲಿ ಎದುರಿಸಿದ ಸವಾಲಿನ ಬಗ್ಗೆ ತಿಳಿಸಿದ್ದಾರೆ.
ತಮಗೆ ಎದುರಾಗಿರುವ ಸವಾಲಿನ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮೋದಿ ಈ ಸಮಸ್ಯೆಗೆ ತಾಂತ್ರಿಕ ಪರಿಹಾರ ಕಂಡುಹಿಡಿಯುವಂತೆ ದೂರಸಂಪರ್ಕ ಇಲಾಖೆಗೆ ಸಲಹೆ ನೀಡಿದ್ದು, ಟೆಲಿಕಾಂ ಸೇವಾ ಕಂಪನಿಗಳು ತಮ್ಮ ಗ್ರಾಹಕರಿಗೆ ಉನ್ನತ ಮಟ್ಟದ ತೃಪ್ತಿಯಾಗುವಂತೆ ಸೇವೆ ಒದಗಿಸಬೇಕು ಎಂದಿದ್ದಾರೆ.
ಕರೆ ಕಡಿತದ ಬಗ್ಗೆ ಗ್ರಾಹಕರಿಂದ ಇಲಾಖೆಗೆ ಹರಿದುಬರುತ್ತಿರುವ ದೂರುಗಳ ಬಗ್ಗೆ ದೂರ ಸಂಪರ್ಕ ಇಲಾಖೆ ಕಾರ್ಯದರ್ಶಿ ಅರುಣಾ ಸುಂದರರಾಜನ ವಿವರಗಳನ್ನು ನೀಡಿದಾಗ ಮೋದಿ ಸ್ವತಃ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುವವರು ಕರೆ ಮಾಡಲು ಹೇಗೆ ಪ್ರಯತ್ನಿಸುತ್ತಾರೆ ಎನ್ನುವುದನ್ನು ಬಣ್ಣಿಸಿದ ಮೋದಿ, ಕಾಲ್ ಡ್ರಾಪ್ ಸಮಸ್ಯೆ ರಾಷ್ಟ್ರವ್ಯಾಪಿ ಸಮಸ್ಯೆಯಾಗಿದೆ. ಇದಕ್ಕೆ ತಕ್ಷಣ ಸೂಕ್ತ ಪರಿಹಾರ ಕಂಡು ಹಿಡಿಯಿರಿ ಎಂದು ಅಧಿಕಾರಿಗಳಿ ಪ್ರಧಾನಿ ಮೋದಿ ಸೂಚನೆ ನೀಡಿದರು ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಹೇಳಿದೆ.
Discussion about this post