ಭಾರತೀಯ ಸನಾತನ ಕಥನಗಳಲ್ಲಿ ವಿಷ್ಣುಪಾರಮ್ಯದ ಬಗ್ಗೆ ವಿಪುಲವಾದ ಸಾಹಿತ್ಯವಿದೆ. ಅದರಲ್ಲಂತೂ ಮಹಾವಿಷ್ಣುವಿನ ದಶಾವತಾರವು ದೇವಾದಿದೇವನ ” ಸಂಭವಾಮಿ ಯುಗೇ ಯುಗೇ” ಎನ್ನುವ ಗೀತಾವಾಕ್ಯಕ್ಕೆ ಸೋದಾಹರಣವಾಗಿದೆ.
ಮತ್ಸ್ಯ, ಕೂರ್ಮ, ವರಾಹ, ನಾರಸಿಂಹ….. ಹೀಗೆ ವೈವಿಧ್ಯ ರೂಪಗಳಿಂದ ಅಸಾಧಾರಣ ಶಕ್ತಿಯಿಂದ ಸಂಪನ್ನಗೊಂಡಿದ್ದಾಗಿದೆ. ನನಗೆ ಅತ್ಯಂತ ಆಸಕ್ತಿದಾಯಕವಾಗಿ ಕಂಡ ಅಂಶವೆಂದರೆ ನರ-ನಾರಾಯಣ ರೂಪ. ಸಾಮಾನ್ಯವಾಗಿ ವಿಷ್ಣುವಿನ ಎಂಟನೇ ಅವತಾರವಾದ ಕೃಷ್ಣ ಮತ್ತು ಮಧ್ಯಮ ಪಾಂಡವ ಅರ್ಜುನರನ್ನು ನರ-ನಾರಾಯಣ ಎಂದು ಹೆಸರಿಸುವುದು ಪ್ರತೀತಿ. ಈ ನರ-ನಾರಾಯಣ ರೂಪ ನಮಗೆ ನಾಲ್ಕನೇ ಅವತಾರದಲ್ಲೇ ಸೂಚನೆಯಾಗಿದೆ ಅನಿಸುತ್ತದೆ.
ಅಲ್ಲಿಯವರೆಗೂ ಹಿಂದೆ ಆದ ಅವತಾರಗಳಲ್ಲಿ ಮೂರೂ ಸಂಪೂರ್ಣ ಪ್ರಾಣಿ ಸ್ವರೂಪವಾಗಿದ್ದನ್ನ ಕಾಣಬಹುದು. ಜೀವವಿಕಾಸದ ಹಂತವನ್ನೂ ಮೇಧಾವಿಗಳು ಗುರುತಿಸುತ್ತಾರೆ ವಿಷ್ಣುವಿನ ಅವತಾರಗಳಿಗೆ ಆಯಾ ಕಾಲದ, ಸಂದರ್ಭದ ಅವಶ್ಯಕತೆಗಳು ಕಂಡುಬರುತ್ತವೆ. ಒಂದೊಂದಕ್ಕೂ ಒಂದೊಂದು ಹಿನ್ನೆಲೆ ಮತ್ತು ಸಂದೇಶಗಳಿವೆ. ನರಸಿಂಹ ಅವತಾರದ ಸಂದರ್ಭ ನನಗೆ ಹೀಗೆ ಕಾಣಿಸುತ್ತದೆ. ಹಿರಣ್ಯಕಶಿಪು ದೈವದ ಅಸ್ತಿತ್ವ ಮತ್ತು ಆರಾಧನೆಯ ಬಗ್ಗೆ ಅವಿಶ್ವಾಸತಾಳಿದ ಮನೋಧರ್ಮದ ಸಂಕೇತ. ಅದಕ್ಕೆ ತದ್ವಿರುದ್ಧವಾಗಿ ಪ್ರಹ್ಲಾದ, ಭಗವಂತ ಸರ್ವವ್ಯಾಪ್ತ ಸರ್ವಶಕ್ತ ಎಂದು ನಂಬಿದ ಮನೋಧರ್ಮಿಯ ಸಂಕೇತ.
ಪ್ರಸ್ತುತ ಈಗ ನಡೆಯುತ್ತಿರುವ ನಾಸ್ತಿಕವಾದವೂ ದೈವದೊಲುಮೆಗೆ ಒಂದು ಕಿರುದಾರಿಯೆಂದರೂ ಸರಿಯೆ. ಏಕೆಂದರೆ ವೈಕುಂಠದ ದ್ವಾರಪಾಲಕರಾದ ಜಯ-ವಿಜಯರಿಗೆ ಶಾಪ ದೊರೆತ ಹಿನ್ನೆಲೆಯಲ್ಲಿ ಇದು ಸರ್ವಸಮ್ಮತವಾಗಬಹುದೇನೊ. ಭಕ್ತರಾದರೆ ಏಳು ಜನ್ಮ. ಭಗವತ್ಶತ್ರುಗಳದರೆ ಮೂರು ಜನ್ಮ. ಸರ್ವವ್ಯಾಪ್ತ ಎಂಬುದನ್ನ ನಿರೂಪಿಸಲು ಬಹುಷಃ ನರಸಿಂಹ ಅವತಾರವಾಗಿರಬಹುದು. ಅದನ್ನೇ ಕನಕದಾಸರು ಮತ್ತೆ ಕಲಿಯಗದಲ್ಲಿ ಬಹಳ ಸರಳವಾಗಿ “ಬಾಳಹಣ್ಣು ಪ್ರಸಂಗ “ದಲ್ಲಿ ನಿರೂಪಿಸಿದರು.
ಹಿರಣ್ಯಾಕ್ಷ ಅತೀ ದೈವದ್ವೇಷಿ. ಭೂಮಿಯಲ್ಲಿ ಭಗವಂತನನ್ನ ಆರಾಧಿಸವವರೇ ಇರಬಾರದು. ಭೂಮಿಯಿದ್ದರಲ್ಲವೆ? ಭಕ್ತರಿರುವುದು. ಇಡೀಭೂಮಿಯನ್ನೇ ಇಲ್ಲದಂತೆ ಮಾಡಿಬಿಟ್ಟರೆ ಭಕ್ತರೇ ಇರುವುದಿಲ್ಲ. ಭಗವಂತನ ಆರಾಧನೆಯೇ ನಡೆಯುವುದು ನಿಂತು ಬಿಡುತ್ತದೆ. ಹೀಗೆ ಯೋಚಿಸಿ ಸಮುದ್ರದಡಿಯಲ್ಲಿ ಮುಚ್ಚಿಟ್ಟ. ಆಗ ವಿಷ್ಣುವು ವರಾಹರೂಪ ತಾಳಿ ಭೂಮಿಯನ್ನು ರಕ್ಷಿಸಬೇಕಾಯಿತು.
” ನಾನೇ ದೇವರು.ನನ್ನನ್ನೇ ಪೂಜಿಸಿ ” ಎಂದು ಮೆರೆದ ಹಿರಣ್ಯಕಶಿಪು . ಸದ್ಯ ವರ್ತಮಾನದ ನಾಸ್ತಿಕರ ಸಂಕೇತವಾಗಿ ಕಾಣುತ್ತಾನೆ. ಆದರೆ ಬಹಳ ಸೂಕ್ಷ್ಮಮತಿಗಳಾಗಿ ನೋಡಿದಾಗ ದೇವರಿಗೂ ಸವಾಲಾಗುವ ಆ ಶಕ್ತಿಯನ್ನೇ ಪ್ರಶ್ನಿಸುವ ತರ್ಕ ಹಿರಣ್ಯಕಶಿಪುವಿನಲ್ಲೇ ಇತ್ತು. ಏಕೆಂದರೆ ಬ್ರಹ್ಮನನ್ನ ತನ್ನ ತಪಸ್ಸಿನಿಂದಲೇ ಮೆಚ್ಚಿಸಿದ. ಬ್ರಹ್ಮನನ್ನೇ ಪರವಶಗೊಳಿಸಿದ. ಮನುಷ್ಯರಿಂದ, ಪ್ರಾಣಗಳಿಂದ, ಕ್ರಿಮಿಕೀಟಗಳಿಂದ ಹಗಲು ಇರುಳು.. ಇತ್ಯಾದಿಗಳಿಂದ ಎಲ್ಲ ಷರತ್ತುಗಳನ್ನು ಹೇಳಿ ಮರಣ ಸಂಭವಿಸಬಾರದೆಂದು ವರ ಪಡೆದುಕೊಂಡ. ಆದರೆ ಎಲ್ಲವಕ್ಕೂ ತಥಾಸ್ತು ಎಂದ ಬ್ರಹ್ಮನಿಗೇ ಮತ್ತೆ ಯೋಚಿಸುವಂತೆ ಮಾಡಿಬಿಟ್ಟ ಈ ಭೂಪ. ಈ ವಿಚಿತ್ರ ವರಕ್ಕೇ ಪರಿಹಾರ ಸೂತ್ರವಾಗಿದೆ ನರಸಿಂಹಾವತಾರ.
ದೇವರಿಗೆ ತನ್ನ ಇರವನ್ನ ತಿಳಿಸಲು ಯಾವುದೇ ಜರೂರು ಕಾರಣಬೇಕಾಗಿಲ್ಲ. ಆದರೆ ಅದು ನಂಬಿಕೆಯುಳ್ಳವರಿಗೆ ಪ್ರಕಟವಾಗುವ ಪ್ರಚ್ಛನ್ನ ಶಕ್ತಿ. ನಾವು ದೇವರು ಪ್ರಕಟವಾಗುವನೆ? ಎಂದು ನಮ್ಮನ್ನೇ ಪ್ರಶ್ನಿಸಿಕೊಂಡರೆ. ಉತ್ತರವೇ ಹೊಳೆಯುವುದಿಲ್ಲ. ಹೊಳೆದರೆ ನಮ್ಮ ಮನಸ್ಥಿತಿಯೇ ಭಿನ್ನವಾಗುತ್ತದೆ. ಬದುಕಿನ ಎಷ್ಟೋ ಸಮಸ್ಯೆಗಳಿಗೆ ಉತ್ತರ ತಾನಾಗಿಯೇ ಹೊಳೆಯುತ್ತದೆ. ಆ ಮನಸ್ಸಿನ ಹಂತ ಸುಲಭವಾಗಿ ಬಿಟ್ಟರೆ ನಾವು ಬೇಗುದಿಗಳ ಬೇಡಿಗಳಲ್ಲಿ ಬಂದಿಯಾಗಿ ಬಿಡುತ್ತಿರಲಿಲ್ಲ. ಏಕೆಂದರೆ ನಮಲ್ಲಿ ವಾಂಛೆಗಳೇ ಹುಟ್ಟಕೊಳ್ಳುವುದಿಲ್ಲ.
ಹಾಗಾದಾಗ ಅದು ಪರಾಕಾಷ್ಠತೆ. ಅದನ್ನು ವೈರಾಗ್ಯ ಎನ್ನುವುದು. ಅದು ಬಲವಂತವಲ್ಲ. ಬೇಕುಗಳಲ್ಲಿ ಏನೂ ಸ್ವಾರಸ್ಯವಿಲ್ಲ ಎಂಬ ಸಹಜ ಅನುಭಾವ.
ನರಸಿಂಹ ಅವತಾರದ ಮತ್ತೊಂದು ಗಮನಾರ್ಹ ಅಂಶ. “ಅಣು ರೇಣು ತೃಣ ಕಾಷ್ಠಗಳಲ್ಲಿಯೂ ದೇವನು ಸರ್ವವ್ಯಾಪಿ ಎಂಬುದು. ಅರಮನೆಯ ಕಂಬದಲ್ಲಿಯೂ ಇದ್ದಾನೆಯೇ ? ಎಂದು ಕೇಳಿದ ಹಿರಣ್ಯಕಶಿಪು. ಅಷ್ಟೇ ಸಮಚಿತ್ತದಿಂದ “ಕಂಬದಲ್ಲಯೂ ಇರುವನು” ಎಂದ ಶಿಶು ಪ್ರಹ್ಲಾದ. ಧಡ ಧಡ ಕಂಬ ಬಿರಿಯಿತು. ಕಣ್ಣುಗಳಿಂದ ಬೆಂಕಿಯುಗುಳುತ್ತಾ ಸಿಂಹದ ಘರ್ಜನೆಯೊಂದಿಗೆ “ನರಸಿಂಹ”ನಾಗಿ ಬಂದ ವಿಷ್ಣು. ಈ ಹೊತ್ತಿನ ಸ್ವರೂಪವನ್ನೇ ಎಂಟು ಹೆಸರುಗಳಲ್ಲಿ ಹಿಡಿದಿಡಲಾಗಿದೆ.
ಅಗ್ನಿಲೋಚನ… ಬೆಂಕಿಯನ್ನೇ ಹೊಂದಿರುವ ಕಣ್ಣುಳ್ಳವನು. ಭೈರವಾಡಂಬರ… ಭೀಕರ ಧ್ವನಿಯಿಂದ ಘರ್ಜಿಸುವನು. ಕರಾಳ…ಅಗಲ ಬಾಯಿಯಲ್ಲಿ ಚಾಚಿದ ಕೋರೆದಾಡಿಗಳುಳ್ಳವನು. ಹಿರಣ್ಯಕಶಿಪು ಧ್ವಂಸ… ಹಿರಣ್ಯಕಶಿಪುವನ್ನ ಸಂಹರಿಸಿದವನು. ನಖಾಸ್ತ್ರ…ಕೈ ಉಗುರುಗಳನ್ನೇ ಆಯುಧವಾಗುಳ್ಳವನು. ಸಿಂಹವದನ….ಸಿಂಹದ ಮುಖವುಳ್ಳವನು. ಮೃಗೇಂದ್ರ….ಮೃಗಗಳ ರಾಜನಾದ ಸಿಂಹರೂಪಿ. ಬಲದೇವ…ವಿಶಿಷ್ಟವಾದ ಶಕ್ತಿಯುಳ್ಳವನು.
ಹೀಗೆ ಈ ಅಷ್ಟರೂಪ ಸ್ಮೆರಣೆ ಮಾಡಿದರೆ ನಮಗೊದಗಿದ ಭಯಗಳಿಂದ ಪಾರು ಮಾಡುತ್ತಾನಂತೆ. ಆದಿಶಂಕರರು ಸ್ವಯಂ ಅನುಭವದಿಂದ ‘ಶ್ರೀಲಕ್ಷ್ಮೀ ನರಸಿಂಹ ಕರಾವಲಂಬನ ಸ್ತೋತ್ರ” ರಚಿಸಿರುವುದೂ ನಾರಸಿಂಹನ ಕೃಪೆ ಬೇಕಾದವರು ಪಠಿಸಲು ಸುಲಭವಾಗಿದೆ.
ಬ್ರಹ್ಮದೇವ ವರವನ್ನೇನೋ ಕೊಟ್ಟುಬಿಟ್ಟ. ತ್ರಿಮೂರ್ತಿಗಳಲ್ಲಿ ಭಿನ್ನಾಭಿಪ್ರಾಯ ತೊಡೆದು ಹಾಕಲು ವಿಷ್ಣು ಅರ್ಧಪ್ರಾಣಿ. ಅರ್ಧಮನುಷ್ಯನ ರೂಪ ತಾಳಬೇಕಾಯಿತು. ವರಸಿದ್ಧಿಗೆ ಕಠಿಣ ತಪಸ್ಸು ಬೇಕು. ತಪಸ್ಸುಮಾಡಲು ಆಸ್ತಿಕರೇ ಆಗಬೇಕಿಲ್ಲ. ನಾಸ್ತಿಕರೂ ಸಿದ್ಧಿ ಪಡೆಯಬಹುದು ಎಂಬ ಸೂಚನೆಯೂ ಇದೆ. ಅಲ್ಲದೇ ಪಡೆದ ಸಿದ್ಧಿಯನ್ನು ಒಳಿತಿಗೆ ಬಳಸಿದರೆ ಕ್ಷೇಮಕರ ಇಲ್ಲದಿರೆ ಸ್ವಯಂನಾಶ ಎಂಬ ಎಚ್ಚರಿಕೆಯೂ ಇದೆ. ಇಡೀ ಅವತಾರಗಳ ಪ್ರಯತ್ನ ನೋಡಿದರೆ ಒಂದೊಂದೂ ಸನ್ನಿವೇಶಗಳಲ್ಲಿ ಅಧರ್ಮದ ಮೇಲಾಟವನ್ನು ಕೊನೆಗಾಣಿಸುವುದು. ಧರ್ಮವನ್ನು ಪ್ರತಿಷ್ಠಾಪಿಸಿವುದು.
ಇದು ಎಲ್ಲರ ಮನಸ್ಸಿನಲ್ಲೂ ನಡೆಯಬೇಕಾದ ಮನಸ್ಸಿನ ಸ್ಥಿತಿ. ಮನುಷ್ಯತ್ವ ,ಮಾನವತೆ ವಿರುದ್ಧ ಏನೆಲ್ಲಾ ಕೃತ್ಯಗಳು ನಡೆದಾಗ ಅಪ್ಪಟ ಮನುಷ್ಯ ಹೃದಯ ಆಯಾ ಸಂದರ್ಭಕ್ಕನುಗುಣವಾಗಿ ಪ್ರತಿಭಟನೆ ವ್ಯಕ್ತಪಡಿಸುತ್ತದೆ. ಪ್ರಹ್ಲಾದನೆಂಬ ಸತ್ಯಾಂಶದ ಸಂಕೇತವನ್ನೂ ರಕ್ಷಿಸುತ್ತದೆ.ಅದೇ ಎಲ್ಲಾ ಕಾಲಕ್ಕೂ ಅವತಾರಗಳು ನೀಡುವ ಸೂಕ್ಷ್ಮ ಸಂದೇಶ.
ಹಿರಿಯರು ಉಪದೇಶಮಾಡುವ ಸಿದ್ಧಿಶ್ಲೋಕವಿದೆ. ಅದರಿಂದಲೇ ಉಪಸಂಹಾರ.
“ಉಗ್ರ ವೀರಂ ಮಹಾವಿಷ್ಣುಂ, ಜ್ವಲಂತಂ ಸರ್ವತೋಮುಖಂ: ನೃಸಿಂಹಂ ಭೀಷಣಂ ಭದ್ರಂ ಮೃತ್ಯುಮೃತ್ಯುರ್ನಮಾಮ್ಯಹಂ.”
ಲೇಖನ: ಡಾ. ಚನ್ನಗಿರಿ ಸುಧೀಂದ್ರ
Discussion about this post