ಕಲ್ಪ ಮೀಡಿಯಾ ಹೌಸ್ | ನ್ಯಾಮತಿ |
ರಾಜ್ಯದ ಹಲವು ಕಡೆಗಳಲ್ಲಿ ಚಿರತೆ ಹಾವಳಿ ಪ್ರಕರಣಗಳು ವರದಿಯಾಗುತ್ತಿರುವಂತೆಯೇ ದಾವಣಗೆರೆ ಜಿಲ್ಲೆಯ ನ್ಯಾಮತಿಯಲ್ಲಿ ಬೆಚ್ಚಿ ಬೀಳುವಂತಹ ಘಟನೆ ನಡೆದಿದೆ.
ತಾಲೂಕಿನ ಹರಮಘಟ್ಟ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಮೆಕ್ಕೆ ಜೋಳದ ಹೊಲವೊಂದರಲ್ಲಿ ಕೆಲವ ಮಾಡುತ್ತಿದ್ದ ಮಹಿಳೆಯ ಮೇಲೆ ದಾಳಿ ನಡೆಸಿದ ಚಿರತೆ, ಆಕೆಯ ಕುತ್ತಿಗೆಗೆ ಬಾಯಿ ಹಾಕಿ ಸುಮಾರು ನೂರು ಅಡಿಗೂ ದೂರ ಎಳೆದೊಯ್ದ ಘಟನೆ ನಡೆದಿದೆ.
ಹೊಲದಲ್ಲಿ ಸುಮಾರು 7-8 ಮಹಿಳೆಯರು ಕೆಲಸ ಮಾಡುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಚಿರತೆ, ಕಮಲ ಬಾಯಿ(55) ಎಂಬಾಕೆ ಮೇಲೆ ದಾಳಿ ನಡೆಸಿ, ಎಳೆದೊಯ್ದಿದೆ. ಚಿರತೆ ದಾಳಿ ನಡೆಸಿದ ತಕ್ಷಣ ಅಲ್ಲಿದ್ದವರು ಕೂಗಿಕೊಂಡಿದ್ದಾರೆ. ಇದರಿಂದ ಚಿರತೆ ಆಕೆಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದೆ. ಆದರೆ, ಆ ವೇಳೆಗಾಗಲೇ ಆಕೆ ಮೃತಪಟ್ಟಿದ್ದರು ಎಂದು ವರದಿಯಾಗಿದೆ.
ಮಹಿಳೆಯ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು, ದಾಳಿ ನಡೆಸಿರುವ ಚಿರತೆಯನ್ನು ಸೆರೆ ಹಿಡಿಯಲು ಈ ಭಾಗದಲ್ಲಿ ಬೋನು ಇರಿಸಲಾಗಿದ್ದು, ಸಿಸಿ ಕ್ಯಾಮೆರಾಗಳ ಮೂಲಕ ಚಲನವಲನ ವೀಕ್ಷಿಸಲಾಗುತ್ತಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















