ಬೆಂಗಳೂರಿನ ಓಂಕಾರ ಆಶ್ರಮ ಪ್ರೇಕ್ಷಣೀಯ ಸ್ಥಳವೂ ಹೌದು, ಧಾರ್ಮಿಕ ಕ್ಷೇತ್ರವೂ ಹೌದು. ಸುತ್ತಣದ ಹಚ್ಚ ಹಸಿರ ರಮಣೀಯ ದೃಶ್ಯದ ಝೇಂಕಾರ ಈ ಪುಣ್ಯ ಕ್ಷೇತ್ರ ಹಲವು ವಿಶಿಷ್ಟತೆಗಳಿಂದ ಕೂಡಿದೆ. ರಾಜ್ಯದ ಏಕೈಕ ಮತ್ಸ್ಯ ನಾರಾಯಣ ದೇವಸ್ಥಾನ ಇರುವುದು ಇದೇ ಕ್ಷೇತ್ರದಲ್ಲಿ. ಮಹಾಶಿವರಾತ್ರಿಯನ್ನು ಇಲ್ಲಿ ಅತ್ಯಂತ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಆಶ್ರಮದ ಕಿರು ಪರಿಚಯ ಇಲ್ಲಿದೆ.
ಬೆಂಗಳೂರಿನ ಶ್ರೀನಿವಾಸಪುರದ ಕೆಂಗೇರಿ – ಉತ್ತರಹಳ್ಳಿಗೆ ಹೋಗುವ ಮಾರ್ಗದಲ್ಲಿ ಆಶ್ರಮ ಮತ್ತು ಎಲ್ಲಕ್ಕೂ ಕಲಸವಿಟ್ಟಂತೆ ಶ್ವೇತವರ್ಣದ ವೈಭವದಲ್ಲಿ ನಿರ್ಮಾಣಗೊಂಡಿರುವ ಶ್ರೀದ್ವಾದಶ ಜ್ಯೋತಿರ್ಲಿಂಗ ಭವ್ಯದೇವಸ್ಥಾನವಿದೆ. ಒಟ್ಟು 16 ಎಕರೆ ಜಾಗದಲ್ಲಿ ಈ ಆಶ್ರಮವನ್ನು ನಿರ್ಮಿಸಲಾಗಿದೆ. ವೇದಪಾಠ ಶಾಲೆ, ಯಾಗ ಶಾಲೆ ಮತ್ತು ಗೋ ಶಾಲೆಗಳು ಆಶ್ರಮದಲ್ಲಿವೆ.
ಆಶ್ರಮದ ಇತಿಹಾಸ:
1994ರಲ್ಲಿ ಸದ್ಗುರು ಶ್ರೀ ಶಿವಪುರಿ ಮಹಾಸ್ವಾಮಿಗಳು ಭಕ್ತಾಧಿಗಳ ಅನುಕೂಲಕ್ಕೆ ಒಂದೇ ಸ್ಥಳದಲ್ಲಿ ದ್ವಾದಶ ಜ್ಯೋತಿರ್ಲಿಂಗ ದರ್ಶನ ವ್ಯವಸ್ಥೆ ಮಾಡುವ ಉದ್ದೇಶದಿಂದ ಒಂದೊಂದು ಲಿಂಗಕ್ಕೂ ಪ್ರತ್ಯೇಕ ದೇವಸ್ಥಾನ ನಿರ್ಮಿಸುವ ಯೋಜನೆ ಹಮ್ಮಿಕೊಂಡರು. ಅವರ ಆಣತಿಯಂತೆ 2000ರಲ್ಲಿ ದೇವಸ್ಥಾನ ನಿರ್ಮಾಣ ಕಾಮಗಾರಿ ಪ್ರಾರಂಭವಾಯಿತು. 2007ರಲ್ಲಿ ಶಿವಪುರಿಶ್ರೀಗಳು ಬ್ರಹ್ಮಲೀನರಾದನಂತರ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಮಧುಸೂದನಾನಂದಪುರಿ ಸ್ವಾಮಿಜಿ ಪೀಠವನ್ನು ಆಲಂಕರಿಸಿ ಗುರುಗಳ ಅಣತಿಯಂತೆ 2011 ಫೆ.16ರಂದು ಜ್ಯೋತಿರ್ಲಿಂಗ ದೇವಸ್ಥಾನಗಳನ್ನು ಲೋಕಾರ್ಪಣೆ ಮಾಡಿರುತ್ತಾರೆ.
ದ್ವಾದಶ ಜ್ಯೋತಿರ್ಲಿಂಗ ದರ್ಶನ:
ರಾಮೇಶ್ವರದಿಂದ ಕೇದಾರದವರೆಗೂ 12 ಜ್ಯೋತಿರ್ಲಿಂಗಗಳು ನೆಲೆಯಾಗಿವೆ. ಭಕ್ತಾಧಿಗಳ ಕೆಲವು ಅನನುಕೂಲಗಳಿಂದಾಗಿ ಎಲ್ಲ ಜ್ಯೋತಿರ್ಲಿಂಗ ದೇವಸ್ಥಾನಗಳನ್ನು ಒಟ್ಟಿಗೆ ದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ಓಂಕಾರ ಆಶ್ರಮದ ಆವರಣದಲ್ಲಿ 12 ಜ್ಯೋತಿರ್ಲಿಂಗಗಳನ್ನು ಒಟ್ಟಿಗೆ ಪ್ರತಿಷ್ಠಾಪಿಸಿದ್ದರಿಂದ ಒಂದೇ ಸ್ಥಳದಲ್ಲಿ 12 ಜ್ಯೋತಿರ್ಲಿಂಗಗಳ ದರ್ಶನ ಭಾಗ್ಯ ಭಕ್ತರಿಗೆ ಸಾಧ್ಯವಾಗಲಿದೆ.
ಪ್ರಧಾನ ದೇವರಾಗಿ 108 ಅಡಿ ಗೋಪುರದ ಗರ್ಭಗುಡಿಯಲ್ಲಿ ಓಂಕಾರೇಶ್ವರ ಲಿಂಗದ ಜೊತೆ ಸ್ಪತಿಕದ ಶ್ರೀಚಕ್ರವಿದ್ದು ದೇವಾಲಯವಿದ್ದು ಓಂಕಾರ ಆಶ್ರಮದಲ್ಲಿ 12 ಜ್ಯೋತಿರ್ಲಿಂಗ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದರೆ 13 ಸಾವಿರ ಬಾಣಲಿಂಗ ದರ್ಶನದ ಫಲ ಪ್ರಾಪ್ರಿಯಾಗುತ್ತದೆ. (ಶಿವಲಿಂಗ ರಹಸ್ಯದ ಕುರಿತು ಪ್ರತ್ಯೇಕ ಲೇಖನವಿದೆ ಗಮನಿಸಿ)
ಹೊರನೋಟದಲ್ಲೇ ಸೊಗಸಾದ ಶ್ವೇತವರ್ಣದ ಗೋಪುರಗಳಿಂದ ಕಂಗೋಳಿಸುವ ದೇಗುಲದಲ್ಲಿ ಮಾಂಧಾತ್ಯ ಪರ್ವತದ ಓಂಕಾರೇಶ್ವರ, ರಾಮೇಶ್ವರದ ರಾಮೇಶ್ವರ, ನಾಸಿಕ್ನ ತ್ರೈಯಂಬಕೇಶ್ವರ, ವಾರಣಾಸಿಯ ವಿಶ್ವೇಶ್ವರ, ಕೇದಾರದ ಕೇದಾರನಾಥೇಶ್ವರ, ಉಜ್ಜಯಿನಿಯ ಮಹಾಕಾಳೇಶ್ವರ, ಸೌರಾಷ್ಟ್ರದ ಸೋಮನಾಥೇಶ್ವರ, ಸಹ್ಯಾದ್ರಿಯ ಭೀಮಾಶಂಕರ, ದಾರುಕಾವನದ ನಾಗೇಶ್ವರ, ದೇವಗಿರಿಯ ಘತ್ಮೇಶ್ವರ, ದೇವಘರದ ವೈದ್ಯನಾಥೇಶ್ವರ ಹಾಗೂ ಶ್ರೀಶೈಲದ ಮಲ್ಲಿಕಾರ್ಜುನರನ್ನೊಳಗೊಂಡಂತೆ ಭರತಖಂಡದ ದ್ವಾದಶ ಲಿಂಗಗಳನ್ನು ಪ್ರತ್ಯೇಕವಾದ ಗರ್ಭಗುಡಿಗಳಲ್ಲಿ ಪ್ರತಿಷ್ಠಾಪಿಸಲಾಗಿದೆ.
ಮತ್ಸ್ಯನಾರಾಯಣ ದೇವಸ್ಥಾನ:
ಭಗವಾನ್ ಮಹಾವಿಷ್ಣುವಿನ ಮೊದಲ ಅವತಾರವಾದ ಮತ್ಸ್ಯನಾರಾಯಣ ಸ್ವಾಮಿ ಆರಾಧನೆಗೆ ಓಂಕಾರ ಆಶ್ರಮದಲ್ಲಿ ಮತ್ಸ್ಯನಾರಾಯಣಸ್ವಾಮಿ ದೇವಸ್ಥಾನ ನಿರ್ಮಿಸಲಾಗಿದೆ. ಭಾರತದ ಎರಡನೇ ಹಾಗೂ ರಾಜ್ಯದ ಮೊಟ್ಟಮೊದಲ ಬಹು ಸುಂದರವಾದ ಮತ್ಸ್ಯನಾರಾಯಣ ಸ್ವಾಮಿ ದೇಗುಲವು ಭಕ್ತಿ ಸುಧೆಯನ್ನೇ ಹರಿಸುತ್ತದೆ. ಬಹು ಆಕರ್ಷಣೀಯವಾಗಿರುವ ಆಳೆತ್ತರದ ಮತ್ಸ್ಯನಾರಾಯಣ ಮೂರ್ತಿಯ ಚೆಲುವನ್ನು ಕಣ್ತುಂಬಿಕೊಳ್ಳಲು ಎರಡೂ ಕಣ್ಣು ಸಾಲದು. ರಾಜ್ಯದಲ್ಲಿನ ಏಕೈಕ ಮತ್ಸ್ಯನಾರಾಯಣ ದೇವಸ್ಥಾನ ಆರಾಧನೆಯಿಂದಾಗಿ ಸರ್ವದೋಷಗಳು ನಿವಾರಣೆಯಾಗುತ್ತವೆ. ನಿವಾಸ, ವ್ಯಾಪಾರ ಕ್ಷೇತ್ರಳಲ್ಲಿನ ವಾಸ್ತು ದೋಷ ನಿವಾರಣೆ ಮಾಡಲು ಸರ್ವದೋಷ ನಿವಾರಕ ಮತ್ಸ್ಯಯಂತ್ರವನ್ನು ನೀಡಲಾಗುತ್ತದೆ.
‘ಮಹಾ’ ಶಿವರಾತ್ರಿ
ಓಂಕಾರ ಆಶ್ರಮದಲ್ಲಿ ಶಿವರಾತ್ರಿಯನ್ನು ವಿಶೇಷವಾಗಿ ಮತ್ತು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಅಂದು ಮುಂಜಾನೆ 6ರಿಂದ 24 ಗಂಟೆಗಳ ಕಾಲ ನಿರಂತರ ಧಾರ್ಮಿಕ ಕಾರ್ಯಗಳು ನೆರವೇರುತ್ತವೆ, ರಥೋತ್ಸವ, ಪಲ್ಲಕ್ಕಿ ಉತ್ಸವ, ನಾಲ್ಕು ಯಾಮ ಪೂಜೆ. ಗಂಗಾಜಲ ಅಭಿಷೇಕ ,ಭಜನೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇನ್ನೊಂದು ವಿಶೇಷ ಎಂದರೆ, ಶಿವರಾತ್ರಿಯಂದು ಭಕ್ತಾದಿಗಳಿಗೆ ಓಂಕಾರೇಶ್ವರ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ದೇವಪ್ರಯಾಗದಿಂದ ಗಂಗಾಜಲವನ್ನು ತರಿಸಲಾಗುತ್ತದೆ. ಆ ಜಲದಿಂದ ಶಿವನಿಗೆ ಅಭಿಷೇಕ ಮಾಡುವ ಸೌಭಾಗ್ಯವನ್ನು ಭಕ್ತರಿಗೆ ನೀಡಲಾಗುತ್ತದೆ. ಶಿವನಿಗೆ ಗಂಗಾಜಲ ಅಭಿಷೇಕ ಮಾಡುವುದರಿಂದ ಸರ್ವ ಪಾಪಗಳು ನಿವಾರಣೆಯಾಗುತ್ತವೆ.
ಸರ್ವಧರ್ಮಗಳ ಸಮನ್ವಯ ಕೇಂದ್ರ – ಈ ಓಂಕಾರ ಪರಿಸರ
ನಿಜಕ್ಕೂ ಇದು ಸರ್ವಧರ್ಮಗಳ ಸಮನ್ವಯ ಕೇಂದ್ರವೇ ಹೌದು. ಜಗತ್ತಿನ ದೊಡ್ಡ ಗಡಿಯಾರವನ್ನು ಹೊಂದಿರುವ ಗುಡ್ಡದ ಪರಿಸರದಲ್ಲಿ ಓಂಕಾರೇಶ್ವರ, ವನದುರ್ಗೆಯ ಮಡಿಲನ್ನು ಆವರಿಸಿಕೊಂಡಿರುವ ಹಿಂದು, ಕ್ರೈಸ್ತ, ಮುಸಲ್ಮಾನ, ಬೌದ್ಧ, ಜೈನ ಹೀಗೆ ಎಲ್ಲಾ ಧರ್ಮಗಳು ಇಲ್ಲಿ ಪ್ರತಿಷ್ಠಾಪಿತಗೊಂಡಿದೆ.
ಮೊದಲ ನೋಟದಲ್ಲೇ ಮನಸೂರೆಗೊಳ್ಳುವಂತಹ ಲಂಡನ್ನಿನ ಬಿಗ್ಬೆನ್ ಗೋಪುರ ಗಡಿಯಾರಕ್ಕಿಂತಲೂ ದೊಡ್ಡದಾದ ಬೆಂಗಳೂರಿನ ಅತಿ ದೊಡ್ಡದಾದ 40 ಅಡಿ ಎತ್ತರದ ವಿಶ್ವದ ಬೃಹತ್ ಗಡಿಯಾರವು ತನ್ನ ಭವ್ಯತೆಯಿಂದ, ಭಿನ್ನತೆಯಿಂದ ಇಡೀ ದೈವಿಕ ಪರಿಸರಕ್ಕೆ ತನ್ನದೇ ಆದ ಶೋಭೆ ತಂದಿದೆ.
ಹೆಚ್.ಎಮ್.ಟಿ.ಯವರ ಬೃಹತ್ ಗಡಿಯಾರವನ್ನು ಕಣ್ತುಂಬಿಕೊಂಡು ಸುಮಾರು 50 ಮೆಟ್ಟಿಲುಗಳನ್ನೇರಿ ನಿಂತಲ್ಲಿ ಎದುರಾಗುತ್ತದೆ ಸರ್ವಧರ್ಮಗಳ ಬೀಡು. ಬೃಹತ್ ಆಲದ ಮರದ ಸಮುಚ್ಚಯದಲ್ಲಿನ ಆವರಣದಲ್ಲಿ ಓಂಕಾರೇಶ್ವರ ಹಾಗೂ ವನದುರ್ಗೆಯರನ್ನು ಸುತ್ತುವರೆದಿರುವ ಬುದ್ಧರ ಗೌತಮಬುದ್ಧ, ಜೈನರ ಮಹಾವೀರ, ಕ್ರಿಸ್ತರ ಯೇಸು, ಮುಸಲ್ಮಾನರ ಮೊಹಮದ್ ಪೈಗಂಬರ್, ಹಿಂದೂ ಧರ್ಮದ ಪ್ರತಿಪಾದಕರಾದ ಜಗದ್ಗುರುಗಳಾದ ಶಂಕರಾಚಾರ್ಯ, ಮಧ್ವಾಚಾರ್ಯ ಹಾಗೂ ರಾಮಾನುಜಾಚಾರ್ಯರ, ಸಿಖ್ಖರ ಗುರುಗ್ರಂಥ ಹೀಗೆ ಜಗತ್ತಿನ ಎಲ್ಲಾ ಧರ್ಮಗಳ ಪ್ರತೀಕವೆಂಬಂತೆ ಈ ಎಲ್ಲಾ ಪುಣ್ಯ ಪುರುಷರ ಸುಂದರ ಮೂರ್ತಿಗಳು ಆಸ್ತಿಕರನ್ನಲ್ಲದೆ ಅರಸಿ ಬರುವ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ. ಪ್ರತಿಯೊಂದು ಮೂರ್ತಿಗಳನ್ನೂ ಒಂದೊಂದು ಪ್ರತ್ಯೇಕ ಮಂಟಪಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಏಕಕಾಲದಲ್ಲಿ ಜಗತ್ತಿನ ಎಲ್ಲಾ ಧರ್ಮಗಳ ಪ್ರತೀಕದಂತಿರುವ ಈ ಮಹನೀಯರನ್ನು ಕಣ್ತುಂಬಿಕೊಳ್ಳುವುದೇ ಒಂದು ಭಾಗ್ಯ. ಇನ್ನೂ ಇಲ್ಲಿಂದ ಕಾಣುವ ಪರಿಸರದ ರಮಣೀಯತೆ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.
ದ್ವಾದಶಲಿಂಗ ದೇಗುಲದ ದರ್ಶನ ಮಾಡಿಕೊಂಡು ಕೆಳಗೆ ಬಂದಲ್ಲಿ ಶ್ರೀ ಶಿವಪುರ ಸ್ವಾಮಿಗಳು ಸಮಾಧಿ ಸ್ಥಳದ ಎದುರಿಗೆ 1200 ಕೆ.ಜಿ. ಭಾರವಿರುವ ಪಂಚಲೋಹದ ಅತಿದೊಡ್ಡ ಗಂಟೆ ಗಮನ ಸೆಳೆಯುತ್ತದೆ. ಮುಂದೆ ಕಲ್ಲಿನಲ್ಲಿ ಕಡೆದ ಕೇವಲ ತನ್ನ ಕೊಕ್ಕಿನ ಬ್ಯಾಲೆನ್ಸ್ನಿಂದ ಹಾರುವ ರೀತಿಯಲ್ಲಿ ಕೆತ್ತಲ್ಪಟ್ಟಿರುವ ಗರುಡ, ಗರುಡನ ಎದುರಿನ ಶಿಲ್ಪಕಲಾಕೃತಿಗಳು ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತದೆ.
ಮೆಜೆಸ್ಟಿಕ್ನಿಂದ ಪದ್ಮನಾಭನಗರ, ಉತ್ತರಹಳ್ಳಿ, ಚನ್ನಸಂದ್ರ ಮಾರ್ಗದಲ್ಲಿ ಕೇಂಗೇರಿಗೆ ಹೋಗುವ ಮಾರ್ಗದಲ್ಲಿ ಕೇವಲ 20ಕಿ.ಮೀ. ದೂರದಲ್ಲಿದೆ ಈ ರಮಣೀಯ ಪರಿಸರ.
ವಿವರಗಳಿಗೆ: 8880296663, 9141920920, 9141930930
ಲೇಖನ: ಡಾ.ಗುರುರಾಜ ಪೋಶೆಟ್ಟಿಹಳ್ಳಿ
Discussion about this post