ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹರಿಹರ: ಗಿಡ ನೆಡುವುದು ಕೇವಲ ಪರಿಸರ ದಿನದ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು, ನಾವೆಲ್ಲರೂ ಉತ್ತಮ ರೀತಿಯಲ್ಲಿ ಬದುಕಿ ಆರೋಗ್ಯವಂತರಾಗಿ ಇರಬೇಕಾದರೆ, ಪರಿಸರದ ಉಳಿವು ಅಷ್ಟೇ ಪ್ರಮುಖವಾಗಿದೆ ಎಂದು ಡಿವೈಎಸ್’ಪಿ ನರಸಿಂಹ ತಾಮ್ರಧ್ವಜ ಕರೆ ನೀಡಿದರು.
ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಹರಿಹರದ ಪೊಲೀಸ್ ಇಲಾಖೆಯಿಂದ ನಗರದ ಪೊಲೀಸ್ ವಸತಿ ಗೃಹ ಆವರಣದಲ್ಲಿ ಗಿಡ ನೆಟ್ಟು ಅವರು ಮಾತನಾಡಿದರು.
ನಾವು ನಮ್ಮ ಮಕ್ಕಳ ಬಗ್ಗೆ ಹೇಗೆ ಕಾಳಜಿ ಬಯಸುತ್ತೇವೆಯೋ ಹಾಗೆಯೇ ನಾವು ನೆಟ್ಟ ಗಿಡಗಳನ್ನು ನಮ್ಮ ಮಕ್ಕಳಂತೆ ಕಾಳಜಿ ವಹಿಸಿ ಪಾಲನೆ ಮಾಡಿ ಪೋಷಿಸಿ ಬೆಳೆಸಿಕೊಂಡು ಹೋಗಬೇಕು. ಗಿಡ ನೆಡುವುದು ಮುಖ್ಯವಲ್ಲ. ಬದಲಾಗಿ ಗಿಡಗಳನ್ನು ಪೋಷಣೆ ಮಾಡುವುದು ಮುಖ್ಯವಾದದ್ದು, ನಾಗರಿಕರು ಗಿಡ ಬೆಳೆಸುವುದರ ಮೂಲಕ ಮುಂದಿನ ಪೀಳಿಗೆಗೆ ಅನುಕೂಲ ಮಾಡಿಕೊಡಬೇಕು ಎಂದರು.
ಸಿಪಿಐ ಎಂ. ಶಿವಪ್ರಸಾದ್ ಮಾತನಾಡಿ, ಪರಿಸರ ಉಳಿವಿಗೆ ನೆಟ್ಟ ಗಿಡಗಳ ಸಂರಕ್ಷಣೆ ಮಾಡುವುದು ಮುಖ್ಯವಾಗಿದೆ. ವಾರದಲ್ಲಿ ಎರಡು ದಿನವಾದರೂ ನಾವು ನೆಟ್ಟಿರುವ ಗಿಡಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಪರಿಸರ ಉಳಿವಿನ ಜವಾಬ್ದಾರಿ ಪ್ರತಿ ನಾಗರಿಕನ ಮೇಲೆ ಅವಲಂಬಿತವಾಗಿದೆ, ಅದು ಅವರ ಕರ್ತವ್ಯವೂ ಹೌದು. ಉತ್ತಮ ಪರಿಸರ ನಿರ್ಮಾಣದಿಂದಾಗಿ ತಾಲೂಕು ಉತ್ತಮ ನಗರ ಎನಿಸಿಕೊಳ್ಳಬೇಕು ಆ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಸಾಗೋಣ ಎಂದರು.
ನಗರ ಪೊಲೀಸ್ ಠಾಣೆಯ ಪಿಎಸ್’ಐ ಶೈಲಶ್ರೀ, ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ರವಿಕುಮಾರ್ ಹಾಗೂ ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
(ವರದಿ: ಪ್ರಕಾಶ್ ಮಂದಾರ, ಹರಿಹರ)
Get In Touch With Us info@kalpa.news Whatsapp: 9481252093
Discussion about this post