ಅಹ್ಮದಾಬಾದ್: ದೇಶ ಕಂಡ ಅಪ್ರತಿಮೆ ನೇತಾರ, ಭಾರತೀಯರ ಹೆಮ್ಮೆಯ ನಾಯಕ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಹೆಸರನ್ನು ಚಿರಸ್ಥಾಯಿಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಕನಸು ಇಂದು ನನಸಾಗುತ್ತಿದೆ.
ನರ್ಮದಾ ನದಿ ದಡದಲ್ಲಿ ನಿರ್ಮಿಸಲಾಗಿರುವ ಪಟೇಲ್ ಜೀ ಅವರ ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯನ್ನು ಪ್ರಧಾನಿ ಮೋದಿ ಇಂದು 11.30ಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ.
ಏಕೀಕರಣಕ್ಕಾಗಿ ಶ್ರಮಿಸಿದ, ಅಪ್ರತಿಮ ಹೋರಾಟಗಾದ ಪಟೇಲ್ ಜೀ ಅವರ 142ನೆಯ ಜನ್ಮ ದಿನವಾದ ಇಂದೇ ಅವರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಬೇಕು ಎಂದು ಮೋದಿ ಕನಸು ಕಂಡಿದ್ದರು. ಅದರಂತೆ ಇಂದು ಗಣರಾಜ್ಯೋತ್ಸವ ಮಾದರಿಯಲ್ಲಿ ಅದ್ದೂರಿ ಕಾರ್ಯಕ್ರಮದೊಂದಿಗೆ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆಯನ್ನು ದೇಶಕ್ಕೆ ಸಮರ್ಪಿಸಲಿದ್ದು, ದೇಶವನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ.
ನಂತರ ವಾಯು ಸೇನೆಯ ಮೂರು ವಿಮಾನಗಳು ಹಾರಾಟ ನಡೆಸಿ, ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳನ್ನು ಹೊರಸೂಸುವ ಮೂಲಕ ಆಕಾಶದಲ್ಲಿ ತ್ರಿವರ್ಣ ಧ್ವಜದ ಮಾದರಿ ರಚಿಸಲಿವೆ.
ಇನ್ನು, ಪ್ರತಿಮೆಯ ಹತ್ತಿರವೇ ನಿರ್ಮಿಸಿರುವ ಭಾರತದ ಏಕತೆಯನ್ನು ಸಾರುವ ಸ್ಮಾರಕ ‘ಏಕತಾ ಗೋಡೆ’ಯ ಉದ್ಘಾಟನೆ ಸಹ ಇದೇ ಸಂದರ್ಭದಲ್ಲಿ ನಡೆಯಲಿದ್ದು, ಈ ಸಮಯದಲ್ಲಿ, ಮೂರು ಜಾಗ್ವಾರ್ ಯುದ್ಧ ವಿಮಾನಗಳು ಗೋಡೆಯ ಮೇಲೆ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಲಿವೆ. ಎಂಐ 17 ಹೆಲಿಕಾಪ್ಟರ್ ಮೂಲಕ ಪ್ರತಿಮೆ ಪುಷ್ಪವೃಷ್ಠಿ ನಡೆಸಲಿದ್ದು, ಆನಂತರ ವಿವಿಧ ರೀತಿಯ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಪ್ರತಿಮೆಯ ವಿಶೇಷತೆಯೇನು?
ಎತ್ತರ: 182 ಮೀಟರ್
ಕಂಚು: 1850 ಟನ್
ಉಕ್ಕು: 24,200 ಟನ್
ಸಿಮೆಂಟ್: 22,500 ಟನ್
ಯೋಜನಾ ವೆಚ್ಚ: 2989 ಕೋಟಿ ರೂ.
ಇಂಜಿನೀಯರ್ ಗಳು: 300
ನಿರ್ಮಾಣದ ಕಾರ್ಮಿಕರು: 3000
ನಿರ್ವಹಣೆ: ಎಲ್ ಅಂಡ್ ಟಿ ಕಂಪೆನಿ
ಪ್ರತಿಮೆಯ ಸ್ಥಳ:
ಗುಜರಾತ್ ನ ನರ್ಮದಾ ಜಿಲ್ಲೆಯ ಸರ್ದಾರ್ ಸರೋವರ ಅಣೆಕಟ್ಟೆಯ ಸಾಧು ಬೇಟ್ ನಡುಗಡ್ಡೆ
400 ಅಡಿ ಎತ್ತರದಲ್ಲಿ ನಿಂತು ಪ್ರತಿಮೆ ವೀಕ್ಷಿಸಬಹುದು
7 ಕಿ ಮೀ ದೂರದಿಂದಲೇ ಪ್ರತಿಮೆ ಬರಿಗಣ್ಣಿಗೆ ಕಾಣುತ್ತದೆ
ಇನ್ನೇನು ವಿಶೇಷತೆ?
ಶ್ರೇಷ್ಠ ಭಾರತ ಭವನ
ತ್ರಿ ಸ್ಟಾರ್ ಹೋಟೆಲ್ನ ಸೌಲಭ್ಯ
ಆಟದ ಮೈದಾನ
ಪಟೇಲರಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ
ಪ್ರವಾಸಿಗರಿಗೆ ಪ್ರತಿಮೆ ಬಳಿ ತೆರಳಲು ಫೆರ್ರಿ ಸೇವೆ
ಬೋಟಿಂಗ್ ಸೌಲಭ್ಯ
ಎಂದಿನಿಂದ ಸಾರ್ವಜನಿಕರಿಗೆ ಪ್ರವೇಶ?
ವಿಶ್ವದ ಮುಂದೆ ಹೆಮ್ಮೆಯ ಪ್ರತಿಮೆಯಾಗಿರುವ ಪಟೇಲರ ದಿವ್ಯ ಮೂರ್ತಿಯನ್ನು ಸಾರ್ವಜನಿಕರು ನವೆಂಬರ್ 3ರಿಂದ ಕಣ್ತುಂಬಿಕೊಳ್ಳಬಹುದು.
ಇಲ್ಲಿ ಪ್ರವೇಶ ಶುಲ್ಕವಾಗಿ ವಯಸ್ಕರಿಗೆ 120 ರೂ ಹಾಗೂ ಮಕ್ಕಳಿಗೆ 60 ರೂ. ನಿಗದಿಪಡಿಸಲಾಗಿದೆ.
Discussion about this post