ಮಂಗಳೂರು: ಬ್ರಿಟಿಷರು, ಮೊಘಲರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಭಾರತದಲ್ಲಿ ನಡೆದರೆ, ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಗೋವಿನ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದ ಕೀರ್ತಿ ಶ್ರೀರಾಘವೇಶ್ವರಭಾರತೀಸ್ವಾಮೀಜಿಯವರಿ
ನಗರದ ಪುರಭವನದಲ್ಲಿ ನಡೆದ ಸ್ವರ್ಗಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗೋಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಶ್ರೀರಾಮಚಂದ್ರಾಪುರಮಠದ ಹೆಸರು ಶಾಶ್ವತವಾಗಿರುತ್ತದೆ ಎಂದರು.
ಹಿಂದೂ ಐಕ್ಯವೇದಿಕೆ ಕೇರಳ ಉಪಾಧ್ಯಕ್ಷ ಕುಂಟಾರು ರವೀಶ್ತಂತ್ರಿ ಮಾತನಾಡಿ, “ಕಟುಕರು ಮನೆಯ ಹಟ್ಟಿಯಿಂದಲೇ ಗೋವನ್ನು ಒಯ್ಯುವುದನ್ನು ನಮಗೆ ತಪ್ಪಿಸಲು ಸಾಧ್ಯವಾಗಿಲ್ಲ. ಆದರೆ ಗೋವಿಗೆ ಪರಿಪೂರ್ಣ ಸ್ವಾತಂತ್ರ್ಯ ನೀಡಿರುವ ಪ್ರೇರಣೆಯಿಂದ ಗೋಪರ ವಾತಾವರಣ ನಿರ್ಮಾಣವಾಗಬಹುದು. ಮುಂದೆ ಸಮಾಜದ ಎಲ್ಲೆಡೆ ಇಂಥ ಗೋಸ್ವರ್ಗಗಳು ತಲೆ ಎತ್ತಬಹುದು. ಶ್ರೀಗಳ ಗೋಸೇವೆಗೆ ಸದಾ ಕೈಜೋಡಿಸುತ್ತೇವೆ” ಎಂದು ಹೇಳಿದರು.
ಗೋಪರ ಚಿಂತನೆ ಇಡೀ ಸಮಾಜದಲ್ಲಿ ಬೆಳೆಯಬೇಕು. ಇದನ್ನು ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬ ಗೋಪ್ರೇಮಿಯೂ ಮಾಡಬೇಕು ಎಂದು ಆಶಿಸಿದರು.
ರಾಜ್ಯ ಗೋಶಾಲೆಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ.ಪುರಾಣಿಕ್ ಮಾತನಾಡಿ, “ಗೋವಿನ ಕ್ರಾಂತಿ ರಾಜ್ಯದಲ್ಲಿ ಆರಂಭವಾಗಲು ಸ್ವಾಮೀಜಿ ಕಾರಣ. ಗೋಸ್ವರ್ಗ ಇಡೀ ವಿಶ್ವಕ್ಕೆ ಒಳ್ಳೆಯ ಸಂದೇಶ ನೀಡುವ ಮಹತ್ವಾಕಾಂಕ್ಷಿ ಯೋಜನೆ” ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, “ಶ್ರೀಗಳು ಸ್ವರ್ಗದಿಂದ ಗೋಸ್ವರ್ಗವನ್ನು ಭೂಮಿಗೆ ತರುವ ಪ್ರಯತ್ನ ಮಾಡಿದ್ದಾರೆ. ಈ ಉದಾತ್ತ ಚಿಂತನೆಗೆ ಇಡೀ ಸಮಾಜ ಬೆಂಬಲಿಸಬೇಕು. ಹಳ್ಳಿಹಳ್ಳಿಗೆ ಗೋಸ್ವರ್ಗ ಒಯ್ಯೋಣ” ಎಂದು ಸಲಹೆ ಮಾಡಿದರು.
ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಹಿಂದೂ ಸಮಾಜವನ್ನು ಒಗ್ಗೂಡಿಸುವಲ್ಲಿ ಗೋವು ಮಹತ್ವದ ಪಾತ್ರ ವಹಿಸುತ್ತದೆ. ಇಂಥ ಗೋವಿನ ಬಗ್ಗೆಯೇ ಸದಾ ಚಿಂತಿಸುವ ಸ್ವಾಮೀಜಿಯವರು ಇಡೀ ಸಮಾಜದ ಹೆಮ್ಮೆ ಎಂದು ಬಣ್ಣಿಸಿದರು.
ಅಪೂರ್ವ ಗೋಸಂವಾದ
ಗೋಸಂತತಿ ಉಳಿದರೆ ಮುಂದೊಂದು ದಿನ ಗೋವು ಪ್ರಕೃತಿಗೆ ಹೊರೆಯಾಗಬಾರದೇ ಎಂಬ ಪ್ರಶ್ನೆಗೆ, “ಗೋವು ಎಂದೂ ಪ್ರಕೃತಿಗೆ ಹೊರೆಯಾಗದು. ನಮ್ಮ ಬಗ್ಗೆಯೂ ಅದೇ ಪ್ರಶ್ನೆಯನ್ನು ಕೇಳಿಕೊಳ್ಳುತ್ತೇವೆಯೇ” ಎಂದು ಸ್ವಾಮೀಜಿ ಪ್ರತಿಕ್ರಿಯಿಸಿದರು. ವಿಶ್ವಕ್ಕೆ ಇಂದು ಅಗತ್ಯವಿರುವ ಶೇಕಡ 10ರಷ್ಟೂ ಗೋವುಗಳಿಲ್ಲ” ಎಂದು ವಿವರಿಸಿದರು.
ಗೋವುಗಳಿಗೆ ಸಂಗೀತ ಇಷ್ಟ ಎಂಬ ಕಾರಣಕ್ಕಾಗಿ ಗೋಸ್ವರ್ಗದಲ್ಲಿ ನಾಲ್ಕು ಗೋಪದಗಳು ಇವೆ. ಗೋವುಗಳ ನಯನ ಸುಖ ಹಾಗೂ ಶ್ರವಣಸುಖಕ್ಕಾಗಿಯೂ ಗೋಸ್ವರ್ಗದಲ್ಲಿ ವಿಶೇಷ ವ್ಯವಸ್ಥೆಯಿದೆ ಎಂದು ಸಂವಾದದಲ್ಲಿ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಗೋವು ಸ್ವಚ್ಛಂದವಾಗಿ ವಿಹರಿಸಲು ಅವಕಾಶ ಕಲ್ಪಿಸಿರುವುದು ಶ್ಲಾಘನೀಯ. ಆದರೆ ಇದು ಗೋಕಳ್ಳತನಕ್ಕೆ ಅವಕಾಶವಾಗುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ, ಗೋಪಾಲಕರ ಪಡೆ ಗೋವಿನ ರಕ್ಷಣೆಗೆ ಇದೆ. ನಾವು ಹಾಗೂ ನಮ್ಮ ಕಾರ್ಯಕರ್ತರು ನಮ್ಮ ಪ್ರಾಣವನ್ನಾದರೂ ನೀಡುತ್ತೇವೆ; ಆದರೆ ಗೋವನ್ನು ಬಿಟ್ಟುಕೊಡುವುದಿಲ್ಲ ಎಂದು ವಿವರಿಸಿದರು. ಗೋಸ್ವರ್ಗ ಗೋಸಾಮರಸ್ಯದ ಕೇಂದ್ರವೂ ಹೌದು ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ಮಿಶ್ರತಳಿಯ ಪರಿಕಲ್ಪನೆಯನ್ನು ಸರ್ಕಾರ ಕೈಬಿಡಬೇಕು. ಅದು ಭಾರತದ ವಾತಾವರಣಕ್ಕೆ ಒಗ್ಗುವಂಥದ್ದಲ್ಲ. ಈ ಮೂರ್ಖತನದಿಂದ ಸರ್ಕಾರ ಹಿಂದೆ ಸರಿದು, ದೇಶಿ ಗೋಸಂರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

















