ಕಲ್ಪ ಮೀಡಿಯಾ ಹೌಸ್ | ರಾಮನಗರ |
ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ (ಜಿಬಿಐಟಿ) ಕೈಬಿಟ್ಟರೆ, ಯೋಜನಾ ಪ್ರದೇಶದಲ್ಲಿರುವ ತಮ್ಮ ಕುಟುಂಬದ 32 ಎಕರೆ ಜಮೀನನ್ನು ಸಾರ್ವಜನಿಕ ಬಳಕೆಗೆ ನೀಡುವುದಾಗಿ ಜೆಡಿಎಸ್ ಯುವ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸವಾಲು ಹಾಕಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿ ಹೋಬಳಿಯಲ್ಲಿ ಜಿಬಿಐಟಿ ಯೋಜನೆಗೆ ವಿರೋಧವಾಗಿ ಹಮ್ಮಿಕೊಳ್ಳಲಾದ ಬೃಹತ್ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಬಿಡದಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಕೈಬಿಟ್ಟರೆ, ತಮ್ಮ ಹೆಸರಿನಲ್ಲಿರುವ ಜಮೀನನ್ನು ಸರ್ಕಾರಿ ಶಾಲೆ ಅಥವಾ ಆಸ್ಪತ್ರೆ ನಿರ್ಮಾಣಕ್ಕೆ ಬಿಟ್ಟುಕೊಡುವುದಾಗಿ ಘೋಷಿಸಿದರು.
ಈ ಭಾಗದಲ್ಲಿ ತಮ್ಮ ಕುಟುಂಬದ ವಿರುದ್ಧ ಕೇಳಿಬರುತ್ತಿರುವ ಬೇನಾಮಿ ಆಸ್ತಿ ಆರೋಪಗಳನ್ನು ತಳ್ಳಿ ಹಾಕಿದ ಅವರು, “ಕೇತಗಾನಹಳ್ಳಿ ಗ್ರಾಮದಲ್ಲಿ 1985ರಲ್ಲಿ ನಮ್ಮ ತಂದೆ ಜಾಗ ಖರೀದಿ ಮಾಡಿದ್ದಾರೆ. ಯಾರನ್ನೂ ಬಲವಂತವಾಗಿ ಜಮೀನು ಕಬಳಿಸಿ ಖರೀದಿ ಮಾಡಿಲ್ಲ. ಸಿನಿಮಾ ವಿತರಣೆಯಿಂದ ಬಂದ ಹಣದಲ್ಲಿ ಈ ಜಮೀನನ್ನು ಖರೀದಿ ಮಾಡಲಾಗಿದೆ,” ಎಂದು ಸ್ಪಷ್ಟಪಡಿಸಿದರು.
Also read: ತೀರ್ಥಹಳ್ಳಿ | ಕೇರಳ ಲಾಟರಿ ಹೆಸರಿನಲ್ಲಿ ಸೈಬರ್ ವಂಚನೆ, ₹1.99 ಲಕ್ಷ ವಂಚನೆ
ಕೋವಿಡ್ ಅವಧಿಯಲ್ಲಿ ತಮ್ಮ ತಾಯಿಯ ಹೆಸರಿನಲ್ಲಿ 27 ಎಕರೆ ಮತ್ತು ತಮ್ಮ ಹೆಸರಿನಲ್ಲಿ 5 ಎಕರೆ ಜಮೀನು ಖರೀದಿ ಮಾಡಿರುವುದಾಗಿ ತಿಳಿಸಿದ ಅವರು, “ಈ ಜಾಗದಲ್ಲಿ ಯಾವುದೇ ಕಮರ್ಷಿಯಲ್ ಕಟ್ಟಡ ನಿರ್ಮಿಸಿಲ್ಲ. ರೈತರಿಗೆ ಅನುಕೂಲವಾಗಲು ಹಾಲು ಉತ್ಪನ್ನಗಳ ಉತ್ಪಾದನೆಗೆ ಬಳಸಲು ಯೋಜಿಸಲಾಗಿದೆ,” ಎಂದರು.
“ಸರ್ಕಾರ ಭೂಸ್ವಾಧೀನವನ್ನು ಕೈಬಿಟ್ಟರೆ, ನನ್ನ ಹೆಸರಿನಲ್ಲಿರುವ ಜಮೀನನ್ನು ಶಾಲೆ ಅಥವಾ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ನೀಡಲು ಸಿದ್ಧನಿದ್ದೇನೆ,” ಎಂದು ಪುನರುಚ್ಚರಿಸಿದರು.
ಇದೇ ವೇಳೆ, ಡಿನೋಟಿಫಿಕೇಷನ್ ವಿಚಾರವಾಗಿ ಸರ್ಕಾರವನ್ನು ಟೀಕಿಸಿದ ಅವರು, “ಕುಮಾರಣ್ಣ ಕಾಲದಲ್ಲಿ ರೆಡ್ ಜೋನ್ ಆಯ್ತು ಎಂದು ಆರೋಪಿಸುತ್ತಾರೆ. ಡಿನೋಟಿಫಿಕೇಷನ್ ಮಾಡಿದರೆ ಜೈಲಿಗೆ ಹೋಗಬೇಕೆಂದು ಸಿಎಂ ಹೇಳುತ್ತಾರೆ. ಆದರೆ ದೇವನಹಳ್ಳಿಯಲ್ಲಿ ನಿಮ್ಮದೇ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿನೋಟಿಫಿಕೇಷನ್ ಮಾಡಲಿಲ್ಲವಾ? ಅವರು ಜೈಲಿಗೆ ಹೋದ್ರಾ?” ಎಂದು ಪ್ರಶ್ನಿಸಿ, ಸಿಎಂ ವಿರುದ್ಧ ಕಿಡಿಕಾರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















