ಕಲ್ಪ ಮೀಡಿಯಾ ಹೌಸ್ | ರಾಯಚೂರು |
ರಾಜ್ಯದ ಪಠ್ಯ ಪುಸ್ತಕಗಳಲ್ಲಿ ವಾಲ್ಮೀಕಿ ನಾಯಕ ಸಮಾಜಕ್ಕೆ ಸೂಕ್ತವಾದ ಸ್ಥಾನಮಾನ ನೀಡಬೇಕು. ಈ ಸಮಾಜದ ಮಹಾತ್ಮರ ಇತಿಹಾಸವನ್ನು ತಿಳಿಸುವ ಕೆಲಸವಾಗಬೇಕೆಂದು ರಾಯಚೂರು ಜಿಲ್ಲೆ ದೇವದುರ್ಗ ಮೂಲದ ವಾಲ್ಮೀಕಿ ನಾಯಕ ಸಮಾಜದ ಯುವತಿ ದೇವಿಕಾ ನಾಯಕ ದೊರೆ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಪಠ್ಯ ಪುಸ್ತಕ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುರಪುರದ ನಾಯಕರ ಇತಿಹಾಸವನ್ನು ಪಠ್ಯ ಪುಸ್ತಕದಿಂದ ಕೈಬಿಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಅನೇಕ ಮಹತ್ತರ ಇತಿಹಾಸ ಹೊಂದಿರುವ ಈ ಸಮಾಜದಲ್ಲಿ ಅನೇಕ ಮಹಾತ್ಮರು ಜನಿಸಿ, ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ. ಅಂತವರ ಇತಿಹಾಸವನ್ನು ಪಠ್ಯದಲ್ಲಿ ಸೇರಿಸುವ ಕೆಲಸ ಮಾಡಬೇಕಾಗಿದ್ದ ಸರ್ಕಾರ ಈ ಸಮಾಜದ ಮಹಾತ್ಮರ ಇತಿಹಾಸವನ್ನು ಪಠ್ಯದಿಂದ ಕೈಬಿಡುತ್ತಿರುವುದು ಗಂಭೀರವಾದ ಅಪರಾಧವಾಗಿದೆ.
ಮಂತ್ರಿ ಸ್ಥಾನಗಳ ವಿಷಯದಲ್ಲಿ, ಮೀಸಲಾತಿ ವಿಷಯದಲ್ಲಿ, ಸಮಾಜದ ಬೇಡಿಕೆಗಳ ವಿಷಯದಲ್ಲಿ ಈ ಸಮಾಜಕ್ಕೆ ಸದಾಕಾಲವೂ ಅನ್ಯಾಯ ಮಾಡಿಕೊಂಡು ಬಂದಿರುವ ಬಿಜೆಪಿ ಸರ್ಕಾರ ಪಠ್ಯದಲ್ಲಿ ಕೂಡ ಅನ್ಯಾಯ ಮಾಡಿದರೆ ಮುಂದಿನ ದಿನಗಳಲ್ಲಿ ಅದರ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ಸಮಾಜದ ಕೆಲ ಸ್ವಾರ್ಥಿ ರಾಜಕಾರಣಿಗಳನ್ನು ಬಳಸಿಕೊಂಡು ಈ ಸಮಾಜಕ್ಕೆ ಅನ್ಯಾಯ ಮಾಡುತ್ತಿರುವ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಪಾಠ ಕಲಿಸುವ ಕೆಲಸವನ್ನು ನಾವು ಮಾಡುತ್ತೇವೆ.
Also read: ಕುವೆಂಪು ವಿವಿ ಪದವಿ ಪರೀಕ್ಷೆ: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಅಣ್ಣಯ್ಯಗೆ ಆರನೇ ರ್ಯಾಂಕ್
ನಾಯಕ ಸಮಾಜದ ಶಕ್ತಿ ಏನು ಎಂಬುದನ್ನು ಪ್ರತಿಯೊಂದು ರಾಜಕೀಯ ಪಕ್ಷಗಳಿಗೂ, ಈ ಸಮಾಜದ ಮುಂಚೂಣಿ ರಾಜಕೀಯ ನಾಯಕರಿಗೂ ತೋರಿಸುವ ಕೆಲಸವನ್ನು ಮಾಡುತ್ತೇವೆ. ನೂರ ಇಪ್ಪತ್ತಕ್ಕೂ ಹೆಚ್ಚು ದಿನಗಳಿಂದ ಸಮಾಜದ ಶ್ರೀಗಳು ಹಗಲು ರಾತ್ರಿ ಧರಣಿ ನಡೆಸುತ್ತಿದ್ದರು ಕೂಡ ಮೀಸಲಾತಿ ಹೆಚ್ಚಳ ಮಾಡದ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ, ಮುಂಬರುವ ಚುನಾವಣೆಯಲ್ಲಿ ದೊಡ್ಡ ಪಾಠ ಕಲಿಸುತ್ತೇವೆ.
ರಾಜ್ಯದಲ್ಲಿ ಆಡಳಿತ ನಡೆಸಿದ ಪ್ರತಿಯೊಂದು ಸರ್ಕಾರಗಳು ವಾಲ್ಮೀಕಿ ನಾಯಕ ಸಮಾಜವನ್ನು ಕೇವಲ ವೋಟ್ ಬ್ಯಾಂಕ್ ರೀತಿಯಲ್ಲಿ ಬಳಸಿಕೊಂಡು ಸಾಗುತ್ತಿದ್ದು, ಪ್ರತಿನಿತ್ಯ ನಾಯಕ ಸಮಾಜಕ್ಕೆ ದ್ರೋಹ ಮಾಡುತ್ತಾ ಸಾಗುತ್ತಿವೆ. ಪ್ರತಿಯೊಂದು ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಸ್ವಾರ್ಥಕ್ಕಾಗಿ ಈ ಸಮಾಜವನ್ನು ಬಳಸಿಕೊಂಡಿವೆ. ಮುಂದಿನ ದಿನಗಳಲ್ಲಿ ಎಲ್ಲಾ ಪಕ್ಷಗಳು ಅದರ ಪರಿಣಾಮವನ್ನು ಎದುರಿಸಲು ಸಿದ್ದವಾಗಬೇಕು ಎಂದು ದೇವಿಕಾ ನಾಯಕ ದೊರೆ ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post