ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಸಂಸ್ಥೆಗಳು ನಡೆಸುವ ಪರೀಕ್ಷೆಗಳು ಕೇವಲ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿರುವುದರಿಂದ ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಯುವಕರಿಗೆ ಎಂಟು ಲಕ್ಷ ಉದ್ಯೋಗಗಳು ಕೈತಪ್ಪುತ್ತಿವೆ ಎಂದು ಖ್ಯಾತ ನಿರ್ದೇಶಕ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಟಿ. ಎಸ್. ನಾಗಭರಣ ಕಳವಳ ವ್ಯಕ್ತಪಡಿಸಿದರು.
ಕುವೆಂಪು ವಿಶ್ವವಿದ್ಯಾಲಯದ Kuvempu University ಸಿಂಡಿಕೇಟ್ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ ಹಮ್ಮಿಕೊಳ್ಳಲಾಗಿದ್ದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಒಕ್ಕೂಟ ಸರ್ಕಾರದ ಭಾಗವಾದ ಸಂಸ್ಥೆಗಳು ನಡೆಸುವ ಬ್ಯಾಂಕಿಂಗ್, ಎಸ್.ಎಸ್.ಸಿ., ಯು.ಪಿ.ಎಸ್.ಸಿ., ನೀಟ್ ಸೇರಿದಂತೆ ಹತ್ತಾರು ಪರೀಕ್ಷೆಗಳು ಕನ್ನಡ ಅಥವಾ ಮಾತೃಭಾಷೆಯಲ್ಲಿ ನಡೆಯುತ್ತಿಲ್ಲ. ಹಿಂದಿಯೇತರ ರಾಜ್ಯಗಳ ಯುವಕರಿಗೆ ಇದು ಲಕ್ಷಾಂತರ ಉದ್ಯೋಗಗಳಿಗೆ ಸ್ಪರ್ಧಿಸುವ, ಯಶಸ್ವಿಯಾಗುವ ಅವಕಾಶವನ್ನೇ ಕಸಿಯುತ್ತಿದೆ. ಮಾತೃಭಾಷೆಯ ಯತೇಚ್ಛ ಬಳಕೆ, ಅಭಿಮಾನ, ಹೋರಾಟ ಹಾಗೂ ಜ್ಞಾನಮೂಲಗಳ ಸೃಜಿಸುವ ಮೂಲಕ ಮಾತ್ರವೇ ಇದನ್ನು ಪರಿಹರಿಸಬಹುದು ಎಂದು ತಿಳಿಸಿದರು.
ಬಹುಭಾಷಾ ಭಾರತದಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಅವಕಾಶ ಸಿಗುತ್ತಿಲ್ಲ. ಸಂವಿಧಾನದಡಿ ಭಾಷಾವಾರು ರಾಜ್ಯಗಳ ರಚನೆಯಾದ ನಂತರ ಭಾಷೆಗೆ ಸಂಬಂಧ ಪಟ್ಟಂತೆ ಒಂದೂ ತಿದ್ದುಪಡಿ ಆಗಿಲ್ಲ. ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ 22 ಭಾಷೆಗಳಲ್ಲಿಯೂ ಪರೀಕ್ಷೆಗಳು, ಆಡಳಿತದ ಸುತ್ತೋಲೆಗಳು, ಆದೇಶಗಳು, ನಿಯಮಾವಳಿಗಳು, ಮಾಹಿತಿಕೋಶಗಳು ಪ್ರಕಟವಾಗುವಂತೆ ಆಭಿಯಾನ ಮಾಡಬೇಕಿದೆ. ಅದನ್ನು ಪ್ರಚುರಪಡಿಸಲು ಮೊದಲು ಬೇರಿನಲ್ಲಿ ಕನ್ನಡ ಭಾಷೆಯನ್ನು ದೃಢಗೊಳಿಸೋಣ ಮುಂದುವರಿದು ಕೇಂದ್ರದಲ್ಲಿ ಕನ್ನಡದಲ್ಲಿ ಸೇವೆ, ಆಡಳಿತ ನೀಡಲು ಒತ್ತಾಯಿಸೋಣ ಎಂದು ಹೇಳಿದರು.
Also read: ಶಿವಮೊಗ್ಗ : ಭದ್ರಾ ನಾಲೆಗೆ ಬಿದ್ದು ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ!
ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಯುರೋಪ್ ಖಂಡದ ದೇಶಗಳ ವಿವಿಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ಇಂಗ್ಲೀಷ್ ಭಾಷೆ ಬರುವುದಿಲ್ಲ. ಫ್ರೆಂಚ್, ಸ್ಪಾನಿಷ್ ಸೇರಿದಂತೆ ಅವರೆಲ್ಲರೂ ತಮ್ಮ ಮಾತೃಭಾಷೆಗಳಲ್ಲಿ ಅಧ್ಯಯನ, ಸಂಶೋಧನೆ, ಬರಹಗಳನ್ನು ಪ್ರಕಟಿಸುತ್ತಾರೆ, ಮಾತನಾಡುತ್ತಾರೆ. ಮಾತೃಭಾಷೆ ಬಳಸಲು ನಮಗೆ ಕೀಳರಿಮೆ ಬೇಡ, ಕನ್ನಡ ಭಾಷೆಯ ಸಾಹಿತ್ಯದ ಅಗಾಧ ಬೇರುಗಳು ಶಿವಮೊಗ್ಗದಲ್ಲಿವೆ. ಇಲ್ಲಿನ ವಿವಿಯಾದ ನಮ್ಮಲ್ಲಿ ಕನ್ನಡ ಬಳಸಲು, ಬೆಳೆಸಲು ಮತ್ತಷ್ಟು ಸಕರಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಸಭೆಯಲ್ಲಿ ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಜಿ. ಅನುರಾಧ, ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್ ಕುಮಾರ್, ಪ್ರಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಹೇಶ್, ರಕ್ಷಾ, ಕನ್ನಡ ಸಂಸ್ಕೃತಿ ಇಲಾಖೆಯ ಉಮೇಶ್, ಹಣಕಾಸು ಅಧಿಕಾರಿ ರಾಮಕೃಷ್ಣ ಎಸ್., ಪ್ರೊ. ಜಿ. ಪ್ರಶಾಂತ್ನಾಯ್ಕ್, ಸೇರಿದಂತೆ ವಿವಿಯ ಎಲ್ಲ ವಿಭಾಗಗಳ ಅಧ್ಯಕ್ಷರು, ಹಿರಿಯ ಪ್ರಾಧ್ಯಾಪಕರುಗಳು, ಉನ್ನತ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post