ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿವಿಯಿಂದ #Kuvempu University ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ತಕ್ಷಣ ಬಗರಹರಿಸಬೇಕೆಂದು ಒತ್ತಾಯಿಸಿ ಎನ್ಎಸ್ಯುಐ ವತಿಯಿಂದ ಇಂದು ಕುವೆಂಪು ವಿವಿ ಉಪಕುಲಪತಿ ಪ್ರೊ. ಶರತ್ ಅನಂತಮೂರ್ತಿ #Prof. Sharath Ananthamurthy ಅವರಿಗೆ ಮನವಿ ಸಲ್ಲಿಸಲಾಯಿತು.
ವಿಶ್ವವಿದ್ಯಾಲಯಕ್ಕೆ ರಾಜ್ಯದಲ್ಲಿ ಒಳ್ಳೆಯ ಹೆಸರಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ಉತ್ತಮ ರೀತಿಯ ಶಿಕ್ಷಣ ಕೊಡುವಲ್ಲಿ ವಿಫಲವಾಗುತ್ತಿದೆ ಪದೇ ಪದೇ ವಿವಿಯಲ್ಲಿ ಅವ್ಯವಾರ, ಭ್ರಷ್ಟಾಚಾರ, ವಿದ್ಯಾರ್ಥಿಗಳ ಬಳಿ ಹಣ ಸುಲಿಗೆ ಮಾಡುತ್ತಿದ್ದಾರೆ ಎಂಬ ಅಪಸ್ವರ ಕೇಳಿಬರುತ್ತಿದೆ ಎಂದು ದೂರಲಾಗಿದೆ.
ಕುವೆಂಪು ವಿಶ್ವವಿದ್ಯಾಲಯದ ರಂಭಾಪುರಿ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಕೊಠಡಿಗಳ ಛಾವಣಿ ಮಳೆನೀರಿನಿಂದ ಸೋರುತ್ತಿದೆ. ಕಳೆದ ಎರಡು ವರ್ಷಗಳಿಂದಲೂ ಹಲವು ಬಾರಿ ಮನವಿ ಸಲ್ಲಿಸಿದರೂ ಕುಲಪತಿಯಾಗಲಿ ಕುಲ ಸಚಿವರಾಗಲಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ರಂಭಾಪುರಿ ಕಾಲೇಜಿನಲ್ಲಿ ಬಿಸಿಎ ಓದುವ ಕನಸು ಹೊತ್ತ ವಿದ್ಯಾರ್ಥಿಗಳಿಗೆ ತಮ್ಮ ಕನಸುಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಕುವೆಂಪು ವಿವಿ ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳಲ್ಲೂ ಬಿಸಿಎ ಪದವಿಗೆ ನಿಗದಿತ ಸರ್ಕಾರಿ ಸೀಟುಗಳಿದ್ದು ಅದಕ್ಕೆ ತಕ್ಕಂತೆ ಸರ್ಕಾರಿ ಪ್ರವೇಶ ಶುಲ್ಕ ಕೂಡ ಇದೆ. ಆದರೆ ಕುವೆಂಪು ವಿವಿಯ ಕ್ಯಾಂಪಸ್ ನಲ್ಲಿರುವ ರಂಭಾಪುರಿ ಕಾಲೇಜಿನಲ್ಲಿ ಸರ್ಕಾರಿ ಸೇಟುಗಳಿದ್ದರೂ ಮನಬಂದಂತೆ ಪ್ರವೇಶ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಇದರಿಂದ ವಿದ್ಯಾರ್ಥಿಗಳಿಗೆ ಅವರ ಕನಸಿಗೆ ಧಕ್ಕೆ ಆಗುತ್ತಿದೆ ಎಂದರು.
ರಂಭಾಪುರಿ ಕಾಲೇಜಿನಲ್ಲಿ ಯಾವುದೇ ರಾಷ್ಟ್ರೀಯ ಹಬ್ಬಗಳನ್ನು ಮತ್ತು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ವಿದ್ಯಾರ್ಥಿಗಳು ಇದರ ವಿಚಾರವಾಗಿ ಪ್ರಶ್ನಿಸಿದರೆ ವಿವಿಯಿಂದ ನಮಗೆ ಯಾವುದೇ ಸಹಕಾರ ದೊರೆಯುತ್ತಿಲ್ಲ ಎಂದು ಪ್ರಾಂಶುಪಾಲರು ಹೇಳುತ್ತಿದ್ದಾರೆ. ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳಿಂದಲೇ ಹಣ ಸುಲಿಗೆ ಮಾಡಿ ಕಾರ್ಯಕ್ರಮ ಮಾಡುವ ಸ್ಥಿತಿಗೆ ಕುವೆಂಪು ವಿವಿ ಬಂದಿದೆ. ಇದನ್ನು ಶಿಮೊಗ್ಗ ಜಿಲ್ಲಾ ಎನ್ಎಸ್ಯುಐ ತೀವ್ರವಾಗಿ ಖಂಡಿಸುತ್ತದೆ ಎಂದರು.
ಕುವೆಂಪು ವಿವಿ ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳಲ್ಲೂ ಫಲಿತಾಂಶ ನಿಗದಿತ ಸಮಯಕ್ಕೆ ಪ್ರಕಟವಾಗುತ್ತಿಲ್ಲ. ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳು ಬ್ಯಾಕ್ ಆಗಿರುವ ವಿಷಯಗಳನ್ನು 6ನೇ ಸೆಮಿಸ್ಟರ್ ನಲ್ಲಿ ಬರೆದಿದ್ದು ಅದರ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಎಂಸಿಎ ಹಾಗೂ ಎಂಕಾಂ ಪ್ರವೇಶಕ್ಕೆ ಬಹಳ ತೊಂದರೆಯಾಗುತ್ತಿದೆ. ಫಲಿತಾಂಶ ಪ್ರಕಟವಾಗುವ ಸಂದರ್ಭದಲ್ಲಿ ಒಮ್ಮೆ ಎಲ್ಲಾ ಪಾಸ್ ಎಂದು ಪ್ರಕಟವಾಗಿ ನಂತರ ಕೊನೆಯಲ್ಲಿ ಫೇಲ್ ಎಂದು ತೋರಿಸುತ್ತಿದೆ. ಇದನ್ನು ಪ್ರಶ್ನಿಸಿದಾಗ ಕುವೆಂಪು ವಿವಿಗೆ ಹೋಗಿ ಸರಿಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದಾರೆ. ಪದೇಪದೇ ವಿದ್ಯಾರ್ಥಿಗಳು ಯಾರದ್ದೋ ತಪ್ಪಿನಿಂದಾಗಿ ತಮ್ಮ ಸ್ವಂತ ಖರ್ಚಿನಲ್ಲಿ ವಿವಿ ಬಂದು ಸರಿಪಡಿಸಿಕೊಳ್ಳಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುವೆಂಪು ವಿವಿಯ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಸರಿಯಾಗಿಲ್ಲ. ಇವೆಲ್ಲಾ ಸಮಸ್ಯೆಗಳನ್ನು 15 ದಿನಗಳ ಕಾಲಾವಕಾಶದೊಳಗೆ ಬಗೆಹರಿಸದೆ ಇದ್ದಲ್ಲಿ ಶಿವಮೊಗ್ಗ ಜಿಲ್ಲಾ ಎನ್ಎಸ್ಯುಐ ವತಿಯಿಂದ ಕುವೆಂಪು ವಿವಿ ಬಂದ್ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ(ಆಡಳಿತ) ಮಂಜುನಾಥ ಇದ್ದರು. ಎನ್ಎಸ್ಯುಐ ಕುವೆಂಪು ವಿವಿ ಘಟಕದ ಅಧ್ಯಕ್ಷ ಮುರುಗೇಶ್, ಜಿಲ್ಲಾ ಕಾರ್ಯಧ್ಯಕ್ಷ ರವಿಕಾಟಿಕೆರೆ, ನಗರ ಅಧ್ಯಕ್ಷ ರವಿ, ಚಂದ್ರೋಜಿರಾವ್, ವರುಣ್ ವಿ. ಪಂಡಿತ್, ಸುಭಾನ್, ಫರಾದ್, ಆದಿತ್ಯ, ಶ್ರೀಕಾಂತ್, ಕೀರ್ತಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















