ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ದೇಶದಲ್ಲಿಯೇ ಮೊದಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕ ರಾಜ್ಯವು ಅಳವಡಿಸಿಕೊಂಡಾಗ ವಿವಿಯು ಅದನ್ನು ಮುಂಚೂಣಿಯಲ್ಲಿ ನಿಂತು ಅನುಷ್ಠಾನಗೊಳಿಸಿದ್ದು ಹೆಮ್ಮೆಯ ವಿಷಯ. ಎಲ್ಲ ಸಿಬ್ಬಂದಿಯು ಅವರದೇ ಆದ ಅಧ್ಯಯನ, ಸಂಶೋಧನಾ ಸಾಮರ್ಥ್ಯ, ವಿಶೇಷ ಪ್ರತಿಭೆ, ಸೃಜನಾತ್ಮಕತೆಯಿಂದ ಕಾರ್ಯನಿರ್ವಹಿಸಿದ್ದರಿಂದ ವಿವಿಯು ರಾಜ್ಯ, ರಾಷ್ಟ್ರಮಟ್ಟದ ಕೆಎಸ್ಯುಆರ್ ಎಫ್, ಎನ್ಐಆರ್ಎಫ್ ರ್ಯಾಂಕ್ಗಳಲ್ಲಿ 100ರ ಒಳಗಿನ ಉತ್ತಮ ಸ್ಥಾನ ಪಡೆಯುತ್ತಿದೆ ಎಂದು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯವು Kuvempu University ವಿವಿಯ ಬಸವ ಸಭಾಭವನದಲ್ಲಿ ಶುಕ್ರವಾರ ಅಯೋಜಿಸಿದ್ದ ವಿವಿಯ ಶೈಕ್ಷಣಿಕ ಪ್ರಗತಿಯ ಕುರಿತ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವಿಯಲ್ಲಿನ ಅಧ್ಯಯನ ಗುಣಮಟ್ಟ ವೃದ್ಧಿಸಲು ಎಲ್ಲ ವಿಭಾಗಳಲ್ಲಿ ಸ್ಮಾರ್ಟ್ ಕ್ಲಾಸ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಂಶೋಧನೆಗಾಗಿ ಹೊಸ ಉಪಕರಣಗಳು ಮತ್ತು ಕಂಪ್ಯೂಟರ್ಗಳನ್ನು ತರಿಸಲಾಗಿದೆ. ರಾಜ್ಯದ ಮೊದಲ ತಂಬಾಕು ಮುಕ್ತ ವಿವಿಯಾಗಿ ಬೆಳೆದಿದೆ. ಅಧ್ಯಾಪಕೇತರ ನೌಕರರ ಬಹುದಿನಗಳ ಬೇಡಿಕೆಯಾದ ಬಡ್ತಿ ನೀಡಲಾಗಿರುವುದು ಹಾಗೂ ಎರಡೆರಡು ಘಟಿಕೋತ್ಸವಗಳನ್ನು ಯಶಸ್ವಿಯಾಗಿ ಒಟ್ಟಿಗೆ ನಡೆಸಲಾಗಿದೆ. ಇಂತಹ ಮತ್ತಷ್ಟು ಸವಾಲುಗಳಿಗೆ ನಮ್ಮನ್ನು ನಾವು ತೆರೆದುಕೊಂಡು ವಿವಿಯನ್ನು ಬಲಿಷ್ಠವಾಗಿ ಕಟ್ಟಿ ಮುನ್ನಡೆಸೋಣ ಎಂದು ನುಡಿದರು.
ವಿವಿಯ ಸಿಂಡಿಕೇಟ್ ಸದಸ್ಯ ರಮೇಶ್ ಬಾಬು ಮಾತನಾಡಿ, ಕುಲಪತಿಗಳಂತಹ ಉನ್ನತ ಹುದ್ದೆಗಳು ಚಿನ್ನದ ಮುಳ್ಳಿನಂತಹ ಶ್ರೀಮಂತ ಆದರೆ ಅತಿಸೂಕ್ಷ್ಮ ಹಾಗೂ ಮಹಾನ್ ಜವಬ್ದಾರಿಗಳಿರುವಂತಹ ಸ್ಥಾನವಾಗಿರುತ್ತದೆ. ಕುಲಪತಿಗಳು ತಮಗೆ ಎದುರಾದ ಸವಾಲುಗಳನ್ನು ಈಗಾಗಲೇ ನಿವಾರಿಸಿಕೊಂಡು ಕಾರ್ಯನಿರ್ವಹಿಸುವ ಚಾಕಚಕ್ಯತೆಯನ್ನು ತೋರಿದ್ದಾರೆ. ಇದನ್ನು ಮುಂದುವರೆಸಿ ವಿವಿಯ ಬೆಳವಣಿಗೆಯನ್ನು ಮತ್ತಷ್ಟು ಎತ್ತರಿಸಲಿ ಎಂದು ಹಾಗೂ ನಾವೆಲ್ಲರೂ ಅವರಿಗೆ ಸಹಕರಿಸೋಣ ಎಂದು ತಿಳಿಸಿದರು.
Also read: ಸೆ.26ರಿಂದ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ
ಕುಲಸಚಿವೆ ಅನುರಾಧ ಜಿ ಮಾತನಾಡಿ, ಕರ್ನಾಟಕ ಸರ್ಕಾರವು ಹೊಸ ಏಳು ವಿವಿಗಳನ್ನು ಆರಂಭಿಸಲು ಮುಂದಾಗಿದೆ. ವಿವಿಗಳ ಸಂಖ್ಯೆ ಹೆಚ್ಚುತ್ತಿದೆ, ಅನುದಾನ ಮೊತ್ತಗಳಲ್ಲಿ ಇಳಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶೈಕ್ಷಣಿಕ, ಸಂಶೋಧನಾ ಚಟುವಟಿಕೆಗಳು ಯಾವುದೇ ಕುಂದುಕೊರತೆಯಿಲ್ಲದಂತೆ ನಡೆಸುವ ಸವಾಲುಗಳು ನಮ್ಮಮೇಲಿದೆ. ಬರುವ ದಿನಗಳಲ್ಲಿ ನ್ಯಾಕ್ ಕಮಿಟಿ ವಿವಿಗೆ ಬರಲ್ಲಿದ್ದು, ಅದಕ್ಕೆ ತಯಾರಿ ನಡೆಸಿ ವಿವಿಯ ರ್ಯಾಂಕ್ ಅನ್ನು ಉನ್ನತ ಸ್ಥಾನಗಳಲ್ಲಿ ಮುಂದುವರೆಸುವ ಪ್ರಯತ್ನವನ್ನು ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್ ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕರಾದ ಡಾ. ಪ್ರಶಾಂತ್ನಾಯ್ಕ್ ಜಿ., ವಿವಿಯ ಸಿಂಡಿಕೇಟ್ ಸದಸ್ಯರಾದ ಬಳ್ಳಕೆರೆ ಸಂತೋಶ್, ರಾಮಲಿಂಗಪ್ಪ, ವಿವಿಯ ಡಾ. ಯೋಗೀಶ್, ಡಾ. ರಾಮಚಂದ್ರ, ಶ್ರೀನಿವಾಸ್ ಉಪಸ್ಥಿತರಿದ್ದು ಮಾತನಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post