ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕೃತಕ ಬುದ್ಧಿಮತ್ತೆ, #Artificial Intelligence ಎಆರ್, ವಿಆರ್ ತಂತ್ರಜ್ಞಾನ, ಕಲಿಕೆಯನ್ನು ಅಥವಾ ಅಧ್ಯಾಪಕರ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ಈ ತಂತ್ರಜ್ಞಾನಗಳು #Technology ಶಿಕ್ಷಣಕ್ಕೆ ಪೂರಕವಾದ ಸಾಧನಗಳಷ್ಟೆ. ಆದರೆ ಶಿಕ್ಷಕರು ಇವುಗಳನ್ನು ಅಳವಡಿಸಿಕೊಳ್ಳುವುದು ಅಷ್ಟೇ ಮುಖ್ಯ ಎಂದು ನಿಟ್ಟೆ ವಿಶ್ವವಿದ್ಯಾಲಯದ ರೊಬೊಟಿಕ್ಸ್ ಮತ್ತು ಎಐ ವಿಭಾಗದ ಪ್ರೊ. ರಶ್ಮಿ. ಪಿ. ಶೆಟ್ಟಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ #Kuvempu University ರೂಸಾ ಘಟಕ, ಪಿಎಂ- ಉಷಾ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಜಂಟಿ ಸಹಯೋಗದಲ್ಲಿ ಗುರುವಾರ ಜ್ಞಾನಸಹ್ಯಾದ್ರಿಯ ಬಸವ ಸಭಾಭವನದಲ್ಲಿ “ಶಿಕ್ಷಣದಲ್ಲಿ ಕಾಲ್ಪನಿಕ ವಾಸ್ತವತೆ ಮತ್ತು ವೃದ್ಧಿತ ವಾಸ್ತವತೆ (Virtual reality and augmented reality)ಯ ಬಳಕೆ” ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜಾಗತಿಕ ವಲಯದಲ್ಲಿ ವಿವಿಧ ಕ್ಷೇತ್ರಗಳ ಮೇಲೆ ಎಐ ತಂತ್ರಜ್ಞಾನದ ಪ್ರಭಾವ ಕುರಿತು ಗಂಭೀರವಾದ ಚರ್ಚೆಗಳು ನಡೆಯುತ್ತಿದ್ದು, ಮಾಹಿತಿ ತಂತ್ರಜ್ಞಾನ, ಸೇವಾ ವಲಯದ ಉದ್ಯೋಗಾವಕಾಶಗಳು ಕ್ಷೀಣಗೊಳ್ಳುವ ಆತಂಕ ಮೂಡಿದೆ. ತಂತ್ರಜ್ಞಾನ ಪರಿಣತರು, ವಿಜ್ಞಾನಿಗಳು ಎಲ್ಲ ಕ್ಷೇತ್ರಗಳು ಮತ್ತು ಅನ್ವಯಿಕ ಶಾಖೆಗಳು ಹೇಗೆ ಬದಲಾಗಲಿವೆ ಎಂಬುದರ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಲಿದ್ದಾರೆ. ಆದರೆ ಈ ಎಲ್ಲ ತಂತ್ರಜ್ಞಾನಗಳನ್ನು ಸ್ವೀಕರಿಸಿ ಅವುಗಳನ್ನು ಬಳಸುವ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಅಷ್ಟು ಕ್ಷಮತೆ ಮಾನವಿಕ ಬುದ್ಧಿಮತ್ತೆಗಿದೆ ಎಂದರು.
ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಭರದಲ್ಲಿ ಅನೈತಿಕ ಮಾರ್ಗಗಳನ್ನು ಅಳವಡಿಸಿಕೊಂಡರೆ ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೀಡಾಗುವುದು ಖಚಿತ. ಇತ್ತೀಚಿಗೆ ಗಲ್ಗೋತಿಯಾಸ್ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆ ಇದಕ್ಕೆ ಜೀವಂತ ನಿದರ್ಶನ.
ಡೆನ್ಮಾರ್ಕ್ ನಂತಹ ದೇಶಗಳು ಎಐ ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲು ನಿರಾಕರಿಸಿದ್ದು, ಮಾನವಿಕ ಬುದ್ಧಿಮತ್ತೆಗೆ ಮಹತ್ವ ನೀಡಿವೆ. ಆದರೆ, ಯಾವುದೇ ತಂತ್ರಜ್ಞಾನವನ್ನು ಸಂಪೂರ್ಣವಾಗಿ ನಿರಾಕರಿಸದೆ, ಕ್ರಿಯಾತ್ಮಕವಾಗಿ ಬಳಸುವ ಸಾಧ್ಯತೆಗಳನ್ನು ಸೃಷ್ಟಿಸಬೇಕಿದೆ ಎಂದರು.
ರೂಸಾ ಘಟಕದ ಸಂಯೋಜಕ ಪ್ರೊ. ಜಿ. ಜೆ. ಸತೀಶ್, ಇಂಟ್ಯೂಟಿವ್ ಡೆಟಾ ಸಲ್ಯೂಷನ್ ಸಂಸ್ಥೆಯ ರಾಘವೇಂದ್ರ ಪ್ರಸಾದಿ, ವಿವಿಧ ವಿಭಾಗಗಳ ಅಧ್ಯಾಪಕರು, ಸಂಯೋಜಿತ ಕಾಲೇಜುಗಳ ಅಧ್ಯಾಪಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















