ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
“ರಸಾಯನಶಾಸ್ತ್ರವು ವಸ್ತುವಿನ ಅಧ್ಯಯನವಾಗಿದ್ದು, ಅದರ ರಚನೆ, ಗುಣಲಕ್ಷಣಗಳು ಮತ್ತು ನಡವಳಿಕೆಯನ್ನು ವಿಶ್ಲೇಷಿಸಿ ರಾಸಾಯನಿಕ ಕ್ರಿಯೆಗಳಲ್ಲಿ ಅವು ಬದಲಾದಾಗ ಏನಾಗುತ್ತದೆ ಎಂಬುದನ್ನು ನೋಡುತ್ತದೆ. ಇದೊಂದು ವಿಜ್ಞಾನದ ಒಂದು ಪ್ರಮುಖ ಶಾಖೆಯಾಗಿದ್ದು ಇಂದು ಅಗಾಧವಾಗಿ ಬೆಳೆದಿದೆ. ರಸಾಯನಶಾಸ್ತ್ರವಿಲ್ಲದೆ ಆಧುನಿಕ ಜೀವನ ಕಲ್ಪಿಸಿಕೊಳ್ಳುವುದು ಅಸಾಧ್ಯ” ಎಂದು ಪ್ರಾಚಾರ್ಯರಾದ ಡಾ. ರವೀಂದ್ರ ಕೆಸಿ ಹೇಳಿದರು.
ಪಟ್ಟಣದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ “ದಿನನಿತ್ಯ ಜೀವನದಲ್ಲಿ ರಸಾಯನಶಾಸ್ತ್ರ” ಎಂಬ ವಿಷಯದ ಕುರಿತ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು “ಇಂದು ಜಗತ್ತಿನಲ್ಲಿ ಅತೀ ಹೆಚ್ಚು ಸಂಶೋಧನೆಗಳು ರಾಸಾಯನ ಶಾಸ್ತ್ರದ ಮೇಲೆ ನಡೆಯುತ್ತವೆ. ವಿದ್ಯಾರ್ಥಿಗಳು ಈಗಿನಿಂದಲೇ ಸಂಶೋಧನೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಮಾತಾಡಿದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಕೋಟೋಜಿರಾವ್ ಆರ್ “ನಿತ್ಯ ಜೀವನದಲ್ಲಿ ರಸಾಯನಶಾಸ್ತ್ರವು ಆಹಾರ, ಆರೋಗ್ಯ, ಶುಚಿತ್ವ ಮತ್ತು ಸೌಕರ್ಯಗಳ ಮೂಲಕ ಹಾಸುಹೊಕ್ಕಾಗಿದೆ. ಅಡುಗೆಯಲ್ಲಿನ ರಾಸಾಯನಿಕ ಕ್ರಿಯೆಗಳಿಂದ ಹಿಡಿದು, ದೇಹದ ಜೀರ್ಣಕ್ರಿಯೆ, ಔಷಧಗಳು, ಸಾಬೂನು, ಪ್ಲಾಸ್ಟಿಕ್, ಮತ್ತು ಕೃಷಿ ಗೊಬ್ಬರಗಳವರೆಗೆ ಎಲ್ಲವೂ ರಸಾಯನಶಾಸ್ತ್ರದ ಅನ್ವಯಗಳಾಗಿವೆ. ಪ್ರಾಚೀನ ಭಾರತೀಯರಿಗೆ ರಾಸಾಯನಿಕ ಶಾಸ್ತ್ರದ ಜ್ಞಾನ ಅಗಾಧವಾಗಿತ್ತು” ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀಮತಿ ಅಶ್ವಿನಿಯವರು ಮಾತನಾಡಿ “ನಿತ್ಯ ಜೀವನದಲ್ಲಿ ರಾಸಾಯನಿಕ ಪದಾರ್ಥಗಳ ಪಾತ್ರ ಹಾಸುಹೊಕ್ಕಾಗಿದೆ. ರಸಾಯನಶಾಸ್ತ್ರವಿಲ್ಲದೆ ಜೀವನವಿಲ್ಲ. ಮನೆಯಲ್ಲಿ ನಿತ್ಯ ಬಳಸುವ ವಸ್ತುಗಳಿಂದ ಉಸಿರಾಟದಂತಹ ಪ್ರಕ್ರಿಯೆಗಳೆಲ್ಲವೂ ರಾಸಾಯನಿಕ ಕ್ರಿಯೆಗಳೇ ಆಗಿವೆ” ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ರಾಸಾಯನ ಶಾಸ್ತ್ರದ ವಿಭಾಗದ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ಕಾರ್ಯಕ್ರಮದ ಸಂಚಾಲಕರು ಹಾಗೂ ರಾಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಉಪನ್ಯಾಸಕಿ ಕು. ಪುಷ್ಪಾವತಿ, ಧಾನೇಶ್ವರಿ, ವೀಣಾ, ಅಭಿಲಾಷ್ , ಶ್ರೀನಿವಾಸ್ ಹಾಗೂ ಬೋಧಕೇತ ಸಿಬ್ಬಂದಿ ನಿರ್ಮಲಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ರೇಖಾ ಸ್ವಾಗತಿಸಿ, ವಾಣಿಶ್ರೀ ಪ್ರಾರ್ಥಿಸಿ, ಸುಮಯ್ಯಬಾನು ನಿರೂಪಿಸಿ, ಕೀರ್ತನಾ ಎಂಎಸ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















