ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ ಆನರ್ಸ್ ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಭತ್ತದ ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಗುಂಪು ಚರ್ಚೆಯನ್ನು ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಭತ್ತವು ಭಾರತದ ಪ್ರಮುಖ ಆಹಾರ ಬೆಳೆಯಾಗಿದೆ .ಅರ್ಧಕ್ಕಿಂತ ಹೆಚ್ಚಿನ ಜನರು ಇದನ್ನು ಆಹಾರವಾಗಿ ಉಪಯೋಗಿಸುತ್ತಾರೆ. ಹಸಿರು ಕ್ರಾಂತಿಯ ಸಮಯದಲ್ಲಿ ಅಧಿಕ ಇಳುವರಿಗಾಗಿ ಹೊಸ ತಳಿಗಳನ್ನು ಭಾರತಕ್ಕೆ ಪರಿಚಯಿಸಲಾಯಿತು. ಭತ್ತದಲ್ಲಿ ಅಧಿಕ ಇಳುವರಿಯ ಜೊತೆ ಜೊತೆಗೆ ಹೊಸ ರೋಗ ಮತ್ತು ಕೀಟಗಳ ಹಾವಳಿಯು ಹೆಚ್ಚಾಗಿತ್ತು ಮತ್ತು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಎಷ್ಟೋ ರೈತರ ಬೇರೆ ಬೆಳೆಯ ಮೊರೆ ಹೋಗಿದ್ದಾರೆ.
ಗುಂಪು ಚರ್ಚೆಯಲ್ಲಿ ವಿದ್ಯಾರ್ಥಿಗಳು ಭತ್ತದಲ್ಲಿ ಬರುವ ಪ್ರಮುಖ ಕೀಟ ಮತ್ತು ರೋಗಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಮೊದಲಿಗೆ ಭತ್ತದಲ್ಲಿ ಬರುವ ಕೀಟಗಳಾದ ಹಳದಿ ಕಾಂಡಕೋರಕ , ಕಂದು ಜಿಗಿ ಹುಳ, ತೆನೆ ತೆಗಣಿ ಮತ್ತು ಎಳೆ ಸುರುಳಿ ಹುಳ ಹಾಗೂ ರೋಗಗಳಾದ ಬೆಂಕಿ ರೋಗ ,ಕಾಡಿಗೆ ರೋಗ ಮತ್ತು ದುಂಡಾನು ಅಂಗಮಾರಿ ರೋಗಗಳ ಹಾನಿಯ ವಿಧ, ಲಕ್ಷಣಗಳು ಮತ್ತು ಅದರ ನಿರ್ವಹಣೆಯ ಸಂಪೂರ್ಣ ಮಾಹಿತಿ ನೀಡಿದರು. ಅದರ ಜೊತೆಗೆ ಭತ್ತದಲ್ಲಿ ರೋಗ ಮತ್ತು ಕೀಟಗಳ ಹಾವಳಿಗೆ ತುತ್ತಾದ ಭಾಗಗಳನ್ನು ತಂದು ರೈತರಿಗೆ ತೋರಿಸಲಾಯಿತು.
ಚರ್ಚೆಯ ಅಂತ್ಯದಲ್ಲಿ ರೈತರು ತಮ್ಮ ಬೆಳೆಯ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಪರಿಹಾರ ಕಂಡುಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















