ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿಎಸ್’ಸಿ(ಹಾನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವದ ಅಂಗವಾಗಿ ಕಲ್ಮನೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಹನಿ ನೀರಾವರಿಯ ಮಹತ್ವ ಹಾಗೂ ಅದರ ನಿರ್ವಹಣೆ ಎಂಬ ವಿಷಯದ ಕುರಿತು ಗುಂಪು ಚರ್ಚೆ ಕಾರ್ಯಕ್ರಮ ಯಶಸ್ವಿಯಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಕೃಷಿ ಇಂಜಿನಿಯರಿಂಗ್ ವಿಭಾಗದ ಡಾ. ಬಸಮ್ಮ ಆಲದಕಟ್ಟಿ, ಸೂಕ್ಷ್ಮ ನೀರಾವರಿ ಪದ್ಧತಿಯ ವೈಜ್ಞಾನಿಕ ಮಹತ್ವವನ್ನು ರೈತರಿಗೆ ಅತಿ ಸರಳ ರೀತಿಯಲ್ಲಿ ವಿವರಿಸಿದರು.
ತುಂತುರು ಮತ್ತು ಹನಿ ನೀರಾವರಿ ತಂತ್ರಗಳ ತಾರತಮ್ಯ ಹಾಗೂ ಪ್ರತಿ ವಿಧಾನದಲ್ಲಿ ನೀರಿನ ಬಳಕೆ, ಉಳಿತಾಯ ಮತ್ತು ಉತ್ಪಾದನಾ ಫಲಿತಾಂಶಗಳ ಬಗ್ಗೆ ರೈತರಿಗೆ ಆಳವಾದ ಅರಿವು ನೀಡಿದರು.
ರೈತರು ಡ್ರಿಪ್ ಲೈನ್’ನಲ್ಲಿ ಅಡ್ಡಿಯಾಗುವ ತಡೆಗಳನ್ನು ಹೇಗೆ ನಿವಾರಿಸಬಹುದು?, ಫಿಲ್ಟರ್’ಗಳನ್ನು ಎಷ್ಟು ಅವಧಿಯಲ್ಲಿ ಶುದ್ಧಗೊಳಿಸಬೇಕು?, ಪಂಪ್ ಸೆಟ್ ಒತ್ತಡ ಸರಿಯಾದ ಮಟ್ಟದಲ್ಲಿದೆಯೆ ಎಂಬುದನ್ನು ಹೇಗೆ ತಿಳಿಯಬೇಕು? ಮುಂತಾದ ಪ್ರಶ್ನೆಗಳನ್ನು ಕೇಳಿದರು.
ಇದಕ್ಕೆ ಅವರು ಪ್ರತಿ ಪ್ರಶ್ನೆಗೆ ಸ್ಪಷ್ಟ ಉತ್ತರಗಳನ್ನು ನೀಡಿ ರೈತರಿಗೆ ತಾಂತ್ರಿಕ ಸಲಹೆ ನೀಡಿದರು. ನೀರಾವರಿ ವ್ಯವಸ್ಥೆಯ ಸರಿಯಾದ ನಿರ್ವಹಣೆ ಮಾಡಿದರೆ ಉಪಕರಣಗಳ ಆಯುಷ್ಯ ಹೆಚ್ಚುತ್ತದೆ ಮತ್ತು ಬೆಳೆ ಉತ್ಪಾದನೆ ಸ್ಥಿರವಾಗಿರುತ್ತದೆ. ಪ್ರತೀ ಹಂಗಾಮಿನಲ್ಲಿ ಫಿಲ್ಟರ್’ಗಳನ್ನು ಸ್ವಚ್ಛಗೊಳಿಸುವುದು ಹಾಗೂ ಒತ್ತಡದ ಮಟ್ಟವನ್ನು ಪ್ರೆಷರ್ ಗೇಜ್’ನಿಂದ ಪರಿಶೀಲಿಸುವುದು ಅತ್ಯಗತ್ಯ ಎಂದು ತಿಳಿಸಿದರು.
ಡ್ರಿಪ್ ನೀರಾವರಿ ಉಪಕರಣಗಳ ಆಯುಷ್ಯವನ್ನು ಹೆಚ್ಚಿಸಲು ಸರಿಯಾದ ಬಿಇಇ ಸ್ಟಾರ್ ಪಂಪ್ಸೆಟ್ , ಪ್ರೆಷರ್ ಗೇಜ್, ಸ್ಯಾಂಡ್ ಫಿಲ್ಟರ್, ಡಿಸ್ಕ್ ಫಿಲ್ಟರ್ ಅಳವಡಿಸುವುದು ಅತಿ ಮುಖ್ಯ. ಇದು ಉಪಕರಣಗಳ ದೀರ್ಘಾವಧಿ ಕಾರ್ಯಕ್ಷಮತೆಯನ್ನು ಉಳಿಸಿ, ರೈತರ ಹೂಡಿಕೆಯ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಡ್ರಿಪರ್ಗಳ ತಾಂತ್ರಿಕ ವ್ಯತ್ಯಾಸ ಮತ್ತು ಅವುಗಳಿಂದ ದೊರೆಯುವ ಸಮಾನ ನೀರಿನ ಹಂಚಿಕೆ ರೈತರಿಗೆ ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು ವಿವರಿಸಿದರು.
ಈ ತರಬೇತಿಯಲ್ಲಿ ಕಲ್ಮನೆ ಗ್ರಾಮದ ರೈತರಾದ ಸುರೇಶ, ನಾಗರಾಜ್, ಶಿವಮೂರ್ತಿ, ಭೀಮನಗೌಡ, ದೇವೇಂದ್ರಪ್ಪ, ಬಸವನಗೌಡ, ನೇತ್ರಾನಂದ ಹಾಗೂ ಇತರ ಹಲವಾರು ರೈತರು ಭಾಗವಹಿಸಿ ಉಪಯುಕ್ತ ತಾಂತ್ರಿಕ ಜ್ಞಾನವನ್ನು ಪಡೆದುಕೊಂಡರು.
ರೈತರು ಈ ಕಾರ್ಯಕ್ರಮವನ್ನು ಮೆಚ್ಚಿ – ಈ ತರದ ಪ್ರಾಯೋಗಿಕ ಜ್ಞಾನವು ನಮ್ಮ ಬೆಳೆಗಳಲ್ಲಿ ಉತ್ತಮ ಉತ್ಪಾದನೆ ತರುವುದಲ್ಲದೆ, ನೀರಿನ ವ್ಯಯವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















