ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ದೇಶ ವಿಶ್ವದ ಬಲಿಷ್ಠ ರಾಷ್ಟ್ರವಾಗಲಿದೆ. ಭಾರತ ದೇಶದ ಶಕ್ತಿ ಎಂದರೆ ಅದು ಯುವಶಕ್ತಿ. ಯುವಕರಿಂದ ಕೂಡಿದ ಭಾರತ ತನ್ನ ಪ್ರಗತಿಯ ಪಥದಲ್ಲಿ ಸಾಧನೆಗೆ ಮುನ್ನುಡಿ ಬರೆದಿದೆ ಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿಯ ಪ್ರತಿನಿಧಿಗಳಾದ ಜಿ.ಎಸ್. ಶಿವಕುಮಾರ್ ಅಭಿಪ್ರಾಯಪಟ್ಟರು.
ಕುಮದ್ವತಿ ಕೇಂದ್ರೀಯ ವಸತಿ ಶಾಲೆಯಲ್ಲಿ ನಡೆದ ವಿದ್ಯಾರ್ಥಿ ಸಂಘ ನಾಯಕರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಇಂದಿನ ಯುವ ಜನಾಂಗವು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಬುದ್ದಿವಂತಿಕೆ, ಸಾಮರ್ಥ್ಯ, ಜ್ಞಾನ ಹಾಗೂ ಸೃಜನಾತ್ಮಕತೆಯಿಂದ ಸಾಧನೆ ಮಾಡಿ ಸಾಧಕರಾಗಿದ್ದಾರೆ. ಹಾಗೆಯೇ ದೇಶದ ನಾಯಕನಾಗುವ ಅರ್ಹತೆ ಹಾಗೂ ನಾಯಕತ್ವ ಗುಣಗಳು ವಿದ್ಯಾರ್ಥಿ ಜೀವನದಲ್ಲಿ ಮೂಡಿರುತ್ತವೆ. ಇಂತಹ ಅವಕಾಶಗಳು ಶಾಲೆಯಲ್ಲಿ ಮಾತ್ರ ಕೊಡಲು ಸಾಧ್ಯ. ಈ ಮೂಲಕ ಭವಿಷ್ಯತ್ತಿನ ಕಾಲದಲ್ಲಿ ಸಮಾಜದ ಸೇವೆ ಹಾಗೂ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡು ಹಲವಾರು ವಿದ್ಯಾರ್ಥಿಗಳು ನಾಯಕರಾಗಿದ್ದಾರೆ ಎಂದರು.
ನಾಯಕನಾದವನು ಆತ್ಮವಿಶ್ವಾಸ, ನಂಬಿಕೆ, ಸಮಾನತೆ, ಶಿಸ್ತು, ಸಮಯಪಾಲನೆ, ಸಹಕಾರ ಮನೋಭಾವ ಇತ್ಯಾದಿ ಗುಣಗಳನ್ನು ಹೊಂದಿರಬೇಕು ಎಂದರು.
ಶಾಲೆಯ ಉಪಪ್ರಾಚಾರ್ಯರಾದ ಪ್ರಶಾಂತ್ ಮಾತನಾಡಿ, ಚುನಾಯಿತ ನಾಯಕರುಗಳಿಗೆ ಶುಭಕೋರಿ ವಿದ್ಯಾರ್ಥಿ ಜೀವನ ಬಂಗಾರ ಎಂದು ಹೇಳುತ್ತಾರೆ. ನೀವು ಇತರರಿಗೆ ಮಾದರಿಗಳಾಗಿ ನಡೆದುಕೊಳ್ಳಬೇಕು. ನಿಮ್ಮ ಜವಬ್ದಾರಿ ಹಾಗೂ ಕರ್ತವ್ಯ ಅರಿತು ಕಾರ್ಯ ನಿರ್ವಹಿಸಿ ಭವಿಷ್ಯತ್ತಿನ ನಾಯಕರಾಗಿ ಹೊರಹೊಮ್ಮಿ ಎಂದರು.
ಸಹ ಶಿಕ್ಷಕರಾದ ಜಿಯಾವುಲ್ಲಾರವರು ಚುನಾಯಿತ ವಿದ್ಯಾರ್ಥಿಗಳನ್ನು ವೇದಿಕೆಗೆ ಆಹ್ವಾನಿಸಿ ಗಣ್ಯರಿಂದ ಧ್ವಜ ನೀಡಿಸಿ ಕರ್ತವ್ಯ ಹಾಗೂ ನೀತಿಗಳನ್ನು ತಿಳಿಸಿದರು. ಸಹ ಶಿಕ್ಷಕಿ ಭಾಗ್ಯಲಕ್ಷ್ಮಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಿ.ಎಂ. ಶಿವಕುಮಾರ್, ಶಾಲೆಯ ಪ್ರಾಚಾರ್ಯರಾದ ಎಸ್. ಸಿದ್ದೇಶ್ವರ್ ಉಪಸ್ಥಿತರಿದ್ದರು.
ಕೋ-ಅರ್ಡಿನೇಟರ್ ಪ್ರಭು, ಶಿಕ್ಷಕ ವೃಂದದವರು, ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿನಿಯರಾದ ನಮಿತಾ ಮತ್ತು ಸಂಗಡಿಗರು ಪ್ರಾರ್ಥನೆ ಹೇಳುವ ಮೂಲಕ ಪ್ರಾರಂಭಿಸಿದರು. ಭುವನ್ ಸ್ವಾಗತಿಸಿ, ಮಿಥುನ್ ವಂದಿಸಿದರು. ನಿರೀಕ್ಷಾ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















