ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿರುವ ಮುಳ್ಳುಕೆರೆ, ಚಾನಲ್ ಪಕ್ಕದಲ್ಲಿರುವ ಜಾಗ, ಲಗಾನ್ ಎದುರಿಗಿರುವ ಸಿಟಿ ಕ್ಲಬ್ ಜಾಗ, ಆಟೋ ಕಾಂಪ್ಲೆಕ್ಸ್ ಗಳಲ್ಲಿ ಕೆಲವರು ಕಬಳಿಸಿರುವ ಕೆರೆಜಾಗಗಳನ್ನು ರಕ್ಷಿಸಬೇಕು ಎಂದು ಪರಿಸರಾಸಕ್ತ ಕೆ.ವಿ. ವಸಂತಕುಮಾರ್ ಆಗ್ರಹಿಸಿದ್ದಾರೆ.
ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ನಡೆದ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒತ್ತುವರಿಯಾಗಿರುವ ಕೆರೆ ಪ್ರದೇಶವನ್ನು ಕೂಡಲೇ ಸರ್ವೆ ನಡೆಸಿ ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಳ್ಳಬೇಕು. ಅಲ್ಲಿ ಉದ್ಯಾನ ನಿರ್ಮಿಸಬೇಕು, ಸಾಧ್ಯವಾದಲ್ಲಿ ಕೆರೆ ಸಂರಕ್ಷಿಸಿ ಸಮಗ್ರ ಅಭಿವೃದ್ಧಿ ಮಾಡಬೇಕು. ಸೋಮಿನಕೊಪ್ಪ ಒಂದೇ ಕೆರೆಗೆ 10 ಕೋಟಿ ರೂ. ಸ್ಪೂಡಾ ಖರ್ಚುಮಾಡಿ ಅಭಿವೃದ್ಧಿ ಪಡಿಸುವುದು ಸರಿಯಲ್ಲ. ಬೇರೆ ಬೇರೆ ಕೆರೆಗಳಿಗೂ ಈ ಹಣವನ್ನು ಬಳಸಿಕೊಳ್ಳಬೇಕು ಎಂದರು.
ಜಾಥಾದಲ್ಲಿ ಪಾಲ್ಗೊಂಡಿದ್ದ ಪ್ರಮುಖರು, ನಗರ ಮತ್ತು ಸುತ್ತಮುತ್ತಲು ಇರುವ ಎಲ್ಲಾ ಕೆರೆಗಳನ್ನು ಸಂರಕ್ಷಿಸಿ ಅಭಿವೃದ್ಧಿಗೆ ಒಳಪಡಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಸುತ್ತಮುತ್ತ ಇರುವ ಕೆರೆಗಳ ಬಗ್ಗೆ ಒಂದು ತಿಂಗಳ ಒಳಗೆ ಶ್ವೇತ ಪತ್ರ ಹೊರಡಿಸಬೇಕು. ಕೆರೆಗಳ ಸಮಗ್ರಮಾಹಿತಿ ಒತ್ತುವರಿ ಮಾಹಿತಿ, ಒತ್ತುವರಿ ತೆರವಿಗೆ ಕೈಗೊಂಡ ಕ್ರಮ, ಕೆರೆ ಅಭಿವೃದ್ಧಿಗೆ ಕೈಗೊಂಡ ಕ್ರಮ, ಒತ್ತುವರಿ ಮಾಡಿದವರ ಮೇಲೆ ಹೂಡಿರುವ ಕ್ರಿಮಿನಲ್ ಮೊಕದ್ದಮೆಗಳ ವಿವರ, ಜಿಲ್ಲಾ ಸರೋವರ ಸಂರಕ್ಷಣಾ ಸಮಿತಿ ನಡೆಸಿರುವ ಸಭೆ ಮತ್ತು ಅದರ ತೀರ್ಮಾನ, ಅನುಷ್ಠಾನ ಮೊದಲಾದವುಗಳ ಬಗ್ಗೆ ವಿವರಣೆ ನೀಡಬೇಕೆಂದು ಆಗ್ರಹಿಸಿದರು.
ನವುಲೆ ಕರೆ, ಪುರಲೆ ಕೆರೆ, ಚೆನ್ನಮುಂಬಾಪುರ ಕೆರೆ ಸಹಿತ ಪ್ರಮುಖ ಕೆರೆಗಳ ಸರ್ವೆಯನ್ನು ಮೂರು ತಿಂಗಳ ಒಳಗೆ ನಡೆಸಬೇಕು. ಇವುಗಳ ರಕ್ಷಣೆ ಮತ್ತು ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು. ನವುಲೆ ಕೆರೆಯಲ್ಲಿ ಹಾಕಲಾಗಿರುವ ಮಣ್ಣುಗಳನ್ನು ತೆಗೆಸಿ ಹೂಳೆತ್ತಿಸಿ ಸ್ವಚ್ಛಗೊಳಿಸಿ ಮಳೆ ನೀರು ಸಂಗ್ರಹಕ್ಕೆ ಸಂಪರ್ಕ ಕಾಲುವೆ ನಿರ್ಮಿಸಿ ತೂಬುಗಳನ್ನು ಮುಚ್ಚಿಸಿ ನೀರು ನಿಲ್ಲಲ್ಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಗರದಲ್ಲಿರುವ ಎಲ್ಲಾ ಕೆರೆಗಳನ್ನು ಸ್ಮಾರ್ಟ್ ಕೆರೆಗಳನ್ನಾಗಿ ಮಾಡಬೇಕು. ಕೆರೆಗಳ ಸುತ್ತಾ ದಂಡೆ ನಿರ್ಮಿಸಿ ವಾಕಿಂಗ್ ಪಾತ್ ನಿರ್ಮಿಸಿ, ಗಿಡ-ಮರ ಬೆಳೆಸಿ, ವಿಶ್ರಾಂತಿಗಾಗಿ ಆಸನ ವ್ಯವಸ್ಥೆ ಮಾಡಿ, ಪ್ರವಾಸಿ ತಾಣವನ್ನಾಗಿ ಮಾಡುವ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಲಾಯಿತು.
ಎಸ್.ಬಿ. ಅಶೋಕ್ ಕುಮಾರ್, ಜಿ.ವಿಜಯ್ ಕುಮಾರ್, ಪ್ರೊ.ಎಲ್.ಕೆ. ಶ್ರೀಪತಿ ಇದ್ದರು.
Discussion about this post