ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದು ಎಂಬ ಹೆಸರು ಪಡೆದುಕೊಂಡಿರುವ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಮೆಗ್ಗಾನ್ ಆಸ್ಪತ್ರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಹಳಷ್ಟು ಸೌಲಭ್ಯಗಳನ್ನು ಪಡೆದುಕೊಂಡಿತು. ಆದರೆ, ಇದರ ಸಂಪೂರ್ಣ ಉಪಯೋಗ ಸಾರ್ವಜನಿಕರ ಪಾಲಿಗೆ ಇಂದಿಗೂ ದೊರೆಯದಾಗಿರುವುದು ಶೋಚನೀಯ ಸಂಗತಿ.
ಮೆಗ್ಗಾನ್ ಆಸ್ಪತ್ರೆಯ ಸಮಸ್ಯೆಗಳ ಕುರಿತಾಗಿ ಎಷ್ಟು ಬರೆದರೂ ಅದು ಕಡಿಮೆಯೇ ಎಂಬಂತಾಗಿದೆ. ಇಂತಹುದ್ದೇ ಸಾಲಿಗೆ ಈಗ ಸೇರ್ಪಡೆಗೊಂಡಿರುವುದು ಪ್ರಮುಖ ರಕ್ತ ಪರೀಕ್ಷೆಗಳ ಘಟಕ.
ಇಲ್ಲಿನ ಪ್ರಯೋಗಾಲಯದಲ್ಲಿ ರೋಗಿಗಳಿಗಾಗಿ ಸರ್ಕಾರ ಒದಗಿಸಿರುವ ಆರ್ಎಫ್ಟಿ(Renal Function Tests) ಹಾಗೂ ಎಲ್ಎಫ್ಟಿ (Liver Function Tests) ರಕ್ತ ಪರೀಕ್ಷೆಗಳ ಪ್ರಕ್ರಿಯೆ ಸ್ಥಗಿತಗೊಂಡು ಸುಮಾರು 15 ದಿನಗಳಿಗೂ ಹೆಚ್ಚು ಕಾಲ ಕಳೆದಿದೆ. ಇದರಿಂದಾಗಿ, ಇಲ್ಲಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ.
ರೋಗಿಗಳ ಆರೋಪವೇನು?
ಕಳೆದ ಹಲವು ದಿನಗಳಿಂದ ಈ ಎರಡೂ ರಕ್ತ ಪರೀಕ್ಷೆಗಳ ಸ್ಥಗಿತಗೊಂಡಿದ್ದು, ಇದನ್ನು ಖಾಸಗಿ ಲ್ಯಾಬ್ಗಳು ಬಂಡವಾಳ ಮಾಡಿಕೊಂಡಿವೆ ಎಂಬ ಆರೋಪ ರೋಗಿಗಳಿಂದ ಕೇಳಿಬಂದಿದೆ. ಖಾಸಗಿ ಲ್ಯಾಬ್ಗಳೊಂದಿಗೆ ಇಲ್ಲಿನ ವೈದ್ಯರ ಸಹಕಾರದಿಂದ ಹಗಲು ದರೋಡೆ ನಡೆಸುತ್ತಿದ್ದು, ಇದಕ್ಕಾಗಿಯೇ ಉದ್ದೇಶಪೂರ್ವಕವಾಗಿ ಇಲ್ಲಿ ಸೌಲಭ್ಯ ದೊರೆಯದಂತೆ ಮಾಡಲಾಗುತ್ತಿದೆ ಎಂದು ರೋಗಿಗಳು ಆರೋಪಿಸುತ್ತಾರೆ.
ಇನ್ನು, ಇಲ್ಲಿನ ಹಲವು ವೈದ್ಯರು ಪರೀಕ್ಷೆಗಳಿಗಾಗಿ ರೋಗಿಗಳನ್ನು ಖಾಸಗಿ ಲ್ಯಾಬ್ಗಳಿಗೆ ಕಳುಹಿಸುತ್ತಾರೆ ಎಂಬ ಆರೋಪವೂ ಇದ್ದು, ಇದರ ಹಿಂದೆ ದೊಡ್ಡ ಜಾಲವೇ ಇದೆ ಎನ್ನಲಾಗಿದೆ.
ಈ ಸಮಸ್ಯೆ ಕುರಿತಂತೆ ರೋಗಿಗಳು ಹಾಗೂ ಅವರ ಸಂಬಂಧಿಕರು ಎಷ್ಟೇ ಮನವಿ ಮಾಡಿದರೂ ಇದನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ಈ ವಿಭಾಗದ ಮುಖ್ಯಸ್ಥರು ತಮಗೂ ಇದಕ್ಕೂ ಸಂಬಂಧಿವಿಲ್ಲದಂತಿರುತ್ತಾರೆ ಎಂಬ ಆರೋಪ ಕೇಳಿಬಂದಿದೆ.
ಇದೆ. ಆದರೆ, ಇಲ್ಲ ಸ್ಕ್ಯಾನಿಂಗ್ ವಿಭಾಗ:
ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳ ಸಹಾಯಕ್ಕಾಗಿ ಸರ್ಕಾರ ಅತ್ಯಾಧುನಿಕ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸಿದೆ. ಆದರೆ, ಇಲ್ಲಿ ಸ್ಕ್ಯಾನಿಂಗ್ ಮಾಡಿಸುವುದಿರಲಿ ಇಲ್ಲಿ ಕೆಲಸ ಮಾಡುವ ನರ್ಸ್ ಹಾಗೂ ಸಿಬ್ಬಂದಿಗಳನ್ನು ಮಾತನಾಡಿಸುವುದೇ ಒಂದು ಸಾಹಸ..
ಇಲ್ಲಿ, ಯಾವುದೇ ಸ್ಕ್ಯಾನಿಂಗ್ ಮಾಡಿಸುವುದಾದರೂ ಸರಿ, ಈಗ ಆಗುವುದಿಲ್ಲ. 15 ದಿನ ಬಿಟ್ಟು ಬನ್ನಿ, ಒಂದು ತಿಂಗಳು ಬಿಟ್ಟು ಬನ್ನಿ ಎಂದು ಸಾಗಹಾಕುತ್ತಾರೆ ಎಂದು ರೋಗಿಗಳ ಅಳಲು ತೋಡಿಕೊಳ್ಳುತ್ತಾರೆ.
ಇದೇ ಸಮಸ್ಯೆ ಪ್ರಸೂತಿ ವಿಭಾಗದಲ್ಲೂ ಸಹ ಕಾಡುತ್ತಿದ್ದು, ಗರ್ಭಿಣಿಯವರ ಗೋಳು ಕೇಳುವವರೇ ಇಲ್ಲ.
ಇದರೊಂದಿಗೆ ಮೆಗ್ಗಾನ್ನಲ್ಲಿ ಯಾವುದೇ ಪರೀಕ್ಷೆ ಮಾಡಿಸಲು, ಕೆಲಸವಾಗಬೇಕಾದರೆ ಲಂಚ ಕೊಡದೇ ಆಗದು ಎಂಬಂತಹ ಪರಿಸ್ಥಿತಿ ಗುಪ್ತವಾಗಿ ಬೇರೂರಿದೆ.
ಮೆಗ್ಗಾನ್ ಆಸ್ಪತ್ರೆಗೆ ಸರ್ಕಾರದಿಂದ ಬರುವ ಅನುದಾನಗಳಿಗೇನೂ ಕೊರೆತೆಯಿಲ್ಲ ಹಾಗೂ ಸರ್ಕಾರ ಸುಸಜ್ಜಿತ ಕಟ್ಟಡ ಹಾಗೂ ಅಗತ್ಯವಾದ ಎಲ್ಲ ಯಂತ್ರಗಳನ್ನೂ ಸಹ ಮಂಜೂರು ಮಾಡಿದೆ. ಆದರೆ, ಇಲ್ಲಿನ ಆಡಳಿತ ಯಂತ್ರವೇ ಹಳಿತಪ್ಪಿದ್ದು ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಭ್ರಷ್ಟಾಚಾರ ಹಾಗೂ ಸಮಸ್ಯೆಗಳ ಎನ್ನುವುದು ಇಲ್ಲಿ ಎಂದಿಗೂ ಬಗೆ ಹರಿಯದ ವಿಚಾರಗಳು ಎಂಬಂತಾಗಿವೆ.
ಇನ್ನು, ಈಗಿನ ನಿರ್ದೇಶಕರೂ ಸಹ ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಾರೆ. ಇದಲ್ಲದರ ಲಾಭ ಮಾತ್ರ ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್ಗಳು ಪಡೆದುಕೊಳ್ಳುತ್ತಿವೆ.
ಜಿಲ್ಲಾಧಿಕಾರಿ ದಯಾನಂದ್ ಅವರು ಜಿಲ್ಲೆಗೆ ಆಗಮಿಸಿದ ನಂತರ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುತ್ತಾ, ಒಂದೊಂದೇ ಇಲಾಖೆಯನ್ನು ಸರಿಪಡಿಸುತ್ತಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ವರವಾಗಬೇಕಾದ ಮೆಗ್ಗಾನ್ ಆಸ್ಪತ್ರೆಯ ಈ ಹಿಡನ್ ಪ್ರಾಬ್ಲಮ್ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಗಮನಹರಿಸಿ, ಸರಿಪಡಿಸಬೇಕಿದೆ.
Discussion about this post