ಶಿವಮೊಗ್ಗ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಅಭ್ಯರ್ಥಿಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಬಿಜೆಪಿಯಲ್ಲಿ ಒಂದು ರೀತಿಯ ಗುಸುಗುಸು ಮತ್ತು ಗೊಂದಲಗಳು ಮತ್ತಷ್ಟು ಮುಂದುವರೆದಿದೆ.
ಈಗಾಗಲೇ ಬಿಜೆಪಿ ಮುಖಂಡರಾದ ಬಿ.ಎಸ್. ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪರ ನಡುವಿನ ಭಿನ್ನಾಭಿಪ್ರಾಯಗಳಿಗೆ ಮತ್ತಷ್ಟು ತುಪ್ಪ ಸುರಿಸುವಂತೆ ಆಯನೂರು ಮಂಜುನಾಥ್ ಕೂಡ ತಮ್ಮ ಅಸಮಾಧಾನಗಳನ್ನು ಇಂದು ಪತ್ರಿಕಾಗೋಷ್ಟಿಯಲ್ಲಿ ಹೊರಹಾಕಿದ್ದಾರೆ.
ಇತ್ತಿಚೆಗೆ ಪತ್ರಿಕಾಗೋಷ್ಟಿಯಲ್ಲಿ ಕೆ.ಎಸ್. ಈಶ್ವರಪ್ಪನವರು, ಲೋಕಸಭಾ ಅಭ್ಯರ್ಥಿಗೆ ಸಂಬಂಧಿಸಿದಂತೆ ನಾಲ್ವರ ಹೆಸರುಗಳನ್ನು ತೇಲಿಬಿಟ್ಟಿದ್ದರು. ಇದು ಬಿಜೆಪಿ ಪಾಳಯದಲ್ಲಿಯೆ ಒಂದು ರೀತಿಯ ಸಂಚಲನ ಹಾಗೂ ಅಸಮಾಧಾನ ಮತ್ತು ಪಕ್ಷದಲ್ಲಿಯೇ ಇರುವ ಭಿನ್ನಾಭಿಪ್ರಾಯಗಳನ್ನು ಹೊರಹಾಕಿದಂತಿತ್ತು.
ಈಗಾಗಲೇ ಬಿ.ಎಸ್.ಯಡಿಯೂರಪ್ಪರ ಪುತ್ರ ಬಿ.ವೈ.ರಾಘವೇಂದ್ರ ಅವರು ಅಧಿಕೃತ ಅಭ್ಯರ್ಥಿ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ತಡೆಗೋಡೆಯಂತೆ ಕೆ.ಎಸ್.ಈಶ್ವರಪ್ಪನವರು ಸ್ಪರ್ಧಾಕಾಂಕ್ಷಿಗಳು ಇನ್ನು ಇದ್ದಾರೆ ಎಂದು ಎಂ.ಬಿ.ಭಾನುಪ್ರಕಾಶ್, ಎಸ್.ಎನ್.ಚನ್ನಬಸಪ್ಪ, ಎಸ್.ದತ್ತಾತ್ರಿ ಹಾಗೂ ಬಿ.ವೈ.ರಾಘವೇಂದ್ರ ಕೂಡ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಿದ್ದರು.
ಇದಕ್ಕೆ ಒಂದು ರೀತಿಯ ಟಾಂಗ್ ನೀಡಿದಂತೆ ವ್ಯಂಗ್ಯ ಮಿಶ್ರಿತ ಭಾಷೆ ಬಳಸಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಹೌದು, ಈ ನಾಲ್ವರು ಅಷ್ಟೆ ಅಲ್ಲ, ಕೆ.ಎಸ್.ಈಶ್ವರಪ್ಪನವರು ಕೂಡ ಪಟ್ಟಿಯಲ್ಲಿದ್ದಾರೆ. ಅವರು ಸ್ಪರ್ಧೆ ಮಾಡಿದರೂ ಕೂಡ ಆಶ್ಚರ್ಯವೇನಿಲ್ಲ ಎಂದು ಹೊಸ ಬಾಂಬ್ವೊಂದನ್ನು ಸಿಡಿಸಿದ್ದಾರೆ.
ಕೇವಲ ಈಶ್ವರಪ್ಪ ಮಾತ್ರ ಅಲ್ಲ. ಅವರ ಪುತ್ರ ಕೆ.ಇ.ಕಾಂತೇಶ್ ಕೂಡ ಆಕಾಂಕ್ಷಿಯಾಗಬಹುದು. ಹಾಗೆಯೇ ಡಿ.ಎಸ್.ಅರುಣ್ ಇದ್ದಾರೆ. ಎಸ್.ಎನ್.ಚನ್ನಬಸಪ್ಪ ಇದ್ದಾರೆ. ಜ್ಞಾನೇಶ್ವರ್ ಇದ್ದಾರೆ ಎಂದು ಮತ್ತೊಂದು ಪಟ್ಟಿಯನ್ನು ಪತ್ರಿಕಾಗೋಷ್ಟಿಯಲ್ಲಿ ಬಿಚ್ಚಿಟ್ಟರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ನೀಡುವ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಆದರೆ ರಾಘವೇಂದ್ರರಿಗೆ ಟಿಕೆಟ್ ಕೊಡಬಹುದು ಎಂಬ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನೀಡಿರಲಿಲ್ಲ. ಹಾಗಾಗಿ ಬಿ.ವೈ.ರಾಘವೇಂದ್ರ ಸ್ಪರ್ಧೆಗಿಳಿಯುತ್ತಾರೆ ಎಂದು ಅಂದೆಯೇ ತೀರ್ಮಾನಿಸಲಾಗಿತ್ತು ಎಂದರು.
ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಸ್ಪರ್ಧಿಸುವ ಸಾದ್ಯತೆಗಳು ಹೆಚ್ಚಿವೆ. ಹಾಗಾಗಿ ಈ ಪಕ್ಷವನ್ನ ಎದುರಿಸಲು ಬಿಜೆಪಿ ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸಲೇ ಬೇಕಿರುವುದರಿಂದ ಪಕ್ಷದ ವಲಯದಲ್ಲಿ ಬಿ.ವೈ.ರಾಘವೇಂದ್ರ ಮತ್ತು ಶಾಸಕ ಕೆ.ಎಸ್.ಈಶ್ವರಪ್ಪನವರ ಹೆಸರು ಚರ್ಚೆಯಲ್ಲಿದೆ. ಹಾಗಾಗಿ ಬಿಜೆಪಿ ಈ ಲೋಕಸಭಾ ಕ್ಷೇತ್ರವನ್ನ ಉಳಿಸಿಕೊಳ್ಳಬೇಕಾದುದರಿಂದ ಶಿವಮೊಗ್ಗ ಕ್ಷೇತ್ರದ ಶಾಸಕರೇ ಅಭ್ಯರ್ಥಿಯಾಗಿ ಹೊರಹೊಮ್ಮಬಹುದು ಎಂದು ತಿಳಿಸಿದರು.
Discussion about this post