ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪ್ರಮುಖ ದೇವಾಲಯಗಳಾದ ಸೊರಬದ ಚಂದ್ರಗುತ್ತಿ ರೇಣುಕಾಂಬ ದೇವಾಲಯ, ಶಿಕಾರಿಪುರ ಹುಚ್ಚುರಾಯ ಸ್ವಾಮಿ ದೇವಾಲಯ ಹಾಗೂ ತೋಗರ್ಸಿ ಮಲ್ಲಿಕಾರ್ಜುನ ದೇವಾಲಯಗಳಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳ ದಿನಾಂಕವನ್ನು ಷರತ್ತಿಗೊಳಪಟ್ಟು ನಿಗಧಿಪಡಿಸಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

ಮಾರ್ಚ್-2021ರ ಮಾಹೆಯಲ್ಲಿ 5, 8, 15, 26 ಹಾಗೂ 31, ಏಪ್ರಿಲ್-2021ರ ಮಾಹೆಯಲ್ಲಿ 2, 4, 19, 22, 25 ಹಾಗೂ 29. ಮೇ-2021ರ ಮಾಹೆಯಲ್ಲಿ 3, 6, 9, 13, 21 ಹಾಗೂ 30. ಜೂನ್-2021ರ ಮಾಹೆಯಲ್ಲಿ 4, 13, 17 ಹಾಗೂ 27. ಜುಲೈ-2021ರ ಮಾಹೆಯಲ್ಲಿ 1, 4 ಹಾಗೂ 7. ಈ ಎಲ್ಲಾ ದಿನಾಂಕಗಳ ಶುಭ ಮುಹೂರ್ತಗಳನ್ನು ನಿಗಧಿಪಡಿಸಲಾಗಿದೆ.
ಆಗಮ ಪಂಡಿತರು ಈಗ ನೀಡಿರುವ ದಿನಾಂಕದಲ್ಲಿ ಕಾರ್ಯಕ್ರಮ ರೂಪಿಸಲು ಸಾಧ್ಯವಾಗದಿದ್ದಲ್ಲಿ ಬೇರೊಂದು ಸೂಕ್ತ ದಿನಾಂಕವನ್ನು ಜಿಲ್ಲಾ ಧಾರ್ಮಿಕ ಪರಿಷತ್ತಿನ ಆಗಮ ಪಂಡಿತರು ಇತರ ಅನುಕೂಲಕರ ದಿನಾಂದ ಬಯಸಿದ್ದಲ್ಲಿ ಜಿಲ್ಲಾಡಳಿತವು ಸೂಕ್ತ ದಿನಾಂಕ ಮತ್ತು ಮುಹೂರ್ತಗಳನ್ನು ನಿಗಧಿಪಡಿಸಿಕೊಂಡು ಕಾರ್ಯಕ್ರಮ ರೂಪಿಸುವುದು. ವರ್ಷದ ಪ್ರತಿ ತಿಂಗಳು 1ನೇ ತಾರೀಖಿನಿಂದ ತಿಂಗಳ ಕೊನೆಯ ದಿನಾಂಕದವರೆಗೆ ನೋಂದಣಿ ಆದವರನ್ನು ಮುಂದಿನ ತಿಂಗಳ ಮುಹೂರ್ತ ದಿನಾಂಕಗಳಲ್ಲಿ ಯಾವುದಾದರೂ ಒಂದು ದಿನಾಂಕದಂದು ಸಾಮೂಹಿಕ ವಿವಾಹ ನಡೆಸಲಾಗುವುದು ಎಂದಿದ್ದಾರೆ.

ಸಪ್ತಪದಿ ಸಾಮುಹಿಕ ವಿವಾಹಕ್ಕೆ ನೋಂದಾಯಿಸಿಕೊಂಡು ವಿವಾಹವಾಗಲು ಇಚ್ಛಿಸುವ ವಧು-ವರರ ವಿವಾಹಗಳನ್ನು ಸಂಬಂಧಪಟ್ಟ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಆಡಳಿತಾಧಿಕಾರಿಗಳು, ಅನುವಂಶಿಕ ಮೊಕ್ತೇಸರರು, ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಧಾರ್ಮಿಕ ಪರಿಷತ್ತಿನ ಅಧ್ಯಕ್ಷರ ಅನುಮತಿ ಪಡೆದು ಕೋವಿಡ್-19ರ ನಿಬಂಧನೆಗಳನ್ನು ಅನುಸರಿಸಿಕೊಂಡು ಅನುಕೂಲವಾಗುವ ದಿನಾಂಕಗಳಂದು ಸಾಮೂಹಿಕ ವಿವಾಹವನ್ನು ನಡೆಸಲು ನಿಗಧಿಪಡಿಸುವುದು ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















