ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಪಶ್ಚಿಮ ಘಟ್ಟದ ಅಪರೂಪದ ದೇವರ ಕಾನು ಸಾಗರ ತಾಲೂಕಿನ ಆನಂದಪುರದ ಬಳಿಯ ಗಂಟಿನಕೊಪ್ಪದಲ್ಲಿ ಪತ್ತೆಯಾಗಿದೆ.
ಇಲ್ಲಿನ ಸರ್ವೆ ನಂ. 8, 9 ರಲ್ಲಿ 70 ಎಕರೆ ಪ್ರದೇಶದಲ್ಲಿ ಇರುವ ಈ ದೇವರಕಾಡು ಭಾರೀ ಗಾತ್ರದ ಎತ್ತರದ ಸಾವಿರಾರು ಮರಗಳನ್ನು ಹೊಂದಿದೆ. ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನೇತೃತ್ವದ ತಂಡ ಈಚೆಗೆ ಗಂಟಿನಕೊಪ್ಪ ಯಡೇಹಳ್ಳಿ, ಆಡೂರು, ಇರುವಕ್ಕಿ ಪ್ರದೇಶಕ್ಕೆ ಭೇಟಿ ನೀಡಿದಾಗ ವೃಕ್ಷ ವೈವಿಧ್ಯ ಕಂಡು ಬೆರಗಾಗಿದ್ದಾರೆ. ವೀಕ್ಷಣೆಯ ಬಳಿಕ ಇದೀಗ ರಾಜ್ಯ ಜೀವ ವೈವಿಧ್ಯ ಮಂಡಳಿ ತಂಡ ಪಾರಂಪರಿಕ ಜೈವಿಕ ದೇವರಕಾನು ಇದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಗಂಟಿಕೊಪ್ಪ ಜನರಿಗೆ ದೇವರಕಾಡು ಎಂದು ಗೊತ್ತಿರಲಿಲ್ಲ. ಇದೀಗ ಜನಜಾಗೃತರಾಗಿದ್ದಾರೆ. ಗ್ರಾಮ ಜನರ, ಸ್ಥಳೀಯ ಜನಪ್ರತಿನಿಧಿಗಳ ಕಾಡಿನ ಕಾಳಜಿ ನೋಡಿ ತಜ್ಞರ ತಂಡ ಶ್ಲಾಘಿಸಿದ್ದು, ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಇರುವಕ್ಕಿ ಕ್ಯಾಂಪಸ್ ಪಕ್ಕದಲ್ಲಿ ಇರುವ ಈ ದೇವರ ಕಾಡನ್ನು ಕೃಷಿ ವಿಶ್ವವಿದ್ಯಾಲಯದ ಅರಣ್ಯ ವಿಜ್ಞಾನಿಗಳು ಸಮಗ್ರ ದಾಖಲಾತಿ ನಡೆಸಬೇಕು. ದೇವರಕಾಡನ್ನು ಕೃಷಿ ವಿಶ್ವವಿದ್ಯಾಲಯ ದತ್ತು ತೆಗೆದುಕೊಳ್ಳಬೇಕು. ಈ ದೇವರ ಕಾಡು ಡೀಮ್ಡ್ ಅರಣ್ಯ ಪಟ್ಟಿಯಲ್ಲಿ ಇದೆ.
ಸಾಗರ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳು ಗಂಟಿನಕೊಪ್ಪ ದೇವರಕಾಡು ರಕ್ಷಣೆಗೆ ಮುಂದಾಗಬೇಕು. ಗ್ರಾಮದ ರೈತರ ಸಹಭಾಗಿತ್ವ ಪಡೆಯಬೇಕು ಎಂದು ಜಿಲ್ಲಾಡಳಿತಕ್ಕೆ, ಅರಣ್ಯ ಇಲಾಖೆಗೆ ದೇವರಕಾಡು ರಕ್ಷಣೆಗೆ ಕ್ರಮ ಕೈಗೊಳ್ಳಲು, ದೇವರ ಕಾನು ಉತ್ಸವವನ್ನು ಜೀವ ವೈವಿಧ್ಯ ಸಮಿತಿ ಏರ್ಪಡಿಸುವಂತೆ ತಜ್ಞರ ತಂಡ ಸೂಚಿಸಿದೆ. ಪ್ರಸ್ತುತ ಯಡೇಹಳ್ಳಿ ಗ್ರಾಮ ಪಂಚಾಯತಿ ಜೀವ ವೈವಿಧ್ಯ ಸಮಿತಿ ತನ್ನ ಸಭೆಯಲ್ಲಿ ಸರ್ವಾನುಮತದಿಂದ ಗಂಟಿನಕೊಪ್ಪ ಪಾರಂಪರಿಕ ಕಾನು ಎಂದು ಮಾನ್ಯತೆ ನೀಡಿದೆ.
ತಂಡದಲ್ಲಿದ್ದ ರಾಜ್ಯ ಜೀವವೈವಿಧ್ಯ ಮಂಡಳಿ ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ಗಂಟಿನಕೊಪ್ಪ ದೇವರ ಕಾನು ಅಧ್ಯಯನ ಇನ್ನಷ್ಟು ಸಮಗ್ರವಾಗಿ ಆಗಬೇಕು. ಇಲ್ಲಿ ಗಗನ ಚುಂಬಿ ವೃಕ್ಷಗಳೊಂದಿಗೆ ಅಧಿಕ ವೈವಿಧ್ಯಮಯ ಸಂಕುಲಗಳಿವೆ. ಇಲ್ಲಿನ ವೃಕ್ಷಗಳು 300 ವರ್ಷಕ್ಕಿಂತ ಹಳೆಯದಾಗಿದ್ದು, ಪರಿಸರ ಪೂರಕ ಜೇನು ವೃಕ್ಷಗಳು, ಹಲವು ಪ್ರಾಣಿ, ಪಕ್ಷಿಗಳು, ಔಷಧೀಯ ಸಸ್ಯಗಳ ಇರುವು ಗೋಚರಿಸಿದೆ. ರಾಜ್ಯದಲ್ಲಿ ದೇವರಕಾಡುಗಳು ಅಪಾರಜೀವ ಸಂಕುಲ ಹೊಂದಿರುವ ತಾಣಗಳಾಗಿದ್ದು, ಸರ್ಕಾರ ಇವುಗಳ ಪುನಶ್ಚೇತನಕ್ಕೆ ಯೋಜನೆ ರೂಪಿಸಿದೆ. ಕೊಡಗು, ಉ.ಕ. ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ದೇವರಕಾಡುಗಳು ಕಂಡು ಬರುತ್ತಿದ್ದು, ಇದೀಗ ಗಂಟಿನಕೊಪ್ಪ, ಹಳೇಸೊರಬ, ಹೊಸಗುಂದ ದೇವರಕಾಡುಗಳು ನಾಡಿನ ಗಮನ ಸೆಳೆದಿವೆ ಎಂದಿದ್ದಾರೆ.
ವರದಿ: ಮಧುರಾಮ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post