ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಐಎಸ್ಎಲ್ ಕಾರ್ಖಾನೆ ಉಳಿವಿಗೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ನಗರ ಘಟಕದ ವತಿಯಿಂದ ಇಂದು ಬೆಳಿಗ್ಗೆ ಶಿವಮೊಗ್ಗದಿಂದ ಭದ್ರಾವತಿಯ ವಿಐಎಸ್ಎಲ್ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಸೇವಾಕಾಂಕ್ಷಿ ನೇತ್ರಾವತಿ ಟಿ. ಅವರ ನೇತೃತ್ವದಲ್ಲಿ ಮೈನ್ ಮಿಡ್ಲ್ ಸ್ಕೂಲ್ ಆವರಣದಲ್ಲಿರುವ ವಿಶ್ವೇಶ್ವರಯ್ಯ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಪಾದಯಾತ್ರೆ ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹೆಮ್ಮೆಯ ಕೈಗಾರಿಕೆಯಾಗಿದ್ದ ವಿಐಎಸ್ಎಲ್ ಕಾರ್ಖಾನೆಯನ್ನು ಸರ್ಕಾರ ಮುಚ್ಚುವ ಹುನ್ನಾರ ನಡೆಸಿದ್ದು, ಕಾರ್ಮಿಕರು ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರದ ಈ ನಿರ್ಧಾರವನ್ನು ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ಖಂಡಿಸುತ್ತಿದ್ದು, ಸಾವಿರಾರು ಕಾರ್ಮಿಕರು ಕಾರ್ಖಾನೆ ಮುಚ್ಚುವುದರಿಂದ ಬೀದಿಗೆ ಬೀಳಲಿದ್ದು, ಜಿಲ್ಲೆಯ ಆರ್ಥಿಕ ಚಟುವಟಿಕೆಗಳು ಇನ್ನಷ್ಟು ಕುಂಠಿತಗೊಳ್ಳಲಿದೆ ಎಂದರು.
Also read: ಶ್ರೀ ನಿಮಿಷಾಂಭ ದೇಗುಲದಲ್ಲಿ ಮಾಘ ಶುದ್ಧ ಹುಣ್ಣಿಮೆ ಹಿನ್ನೆಲೆ ಡಿಸಿ ಭೇಟಿ, ಸಿದ್ಧತೆ ಪರಿಶೀಲನೆ
ವರ್ಷಕ್ಕೆ 2ಲಕ್ಷ ಉದ್ಯೋಗ ಸೃಷ್ಟಿಮಾಡುತ್ತೇವೆಂದು ಅಧಿಕಾರಕ್ಕೆ ಬಂದ ಬಿಜೆಪಿ, ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಮುಚ್ಚುವ ಮೂಲಕ ಖಾಸಗಿ ಲಾಬಿಗೆ ಮಣಿಯುತ್ತಿದೆ. ಆದ್ದರಿಂದ ವಿಐಎಸ್ಎಲ್ ಕಾರ್ಮಿಕರ ಹೋರಾಟವನ್ನು ಬೆಂಬಲಿಸಿ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.
ಭದ್ರಾವತಿಯಲ್ಲಿ ನಮ್ಮ ಜೊತೆಗೆ ವಿಐಎಸ್ಎಲ್ ಕಾರ್ಮಿಕರು ಮತ್ತು ಸ್ಥಳೀಯ ನಾಗರೀಕರು ಹಾಗೂ ವಿದ್ಯಾರ್ಥಿಗಳು ಜೊತೆಯಾಗಲಿದ್ದು, ಪಾದಯಾತ್ರೆ ಮೂಲಕ ತಹಸಿಲ್ದಾರ್ ಕಚೇರಿಗೆ ತೆರಳಿ ಪ್ರಧಾನಿ ಮಂತ್ರಿಗಳಿಗೆ ವಿಐಎಸ್ಎಲ್ ಪುನರುಜ್ಜೀವನಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಾದಯಾತ್ರೆಯಲ್ಲಿ ಸುರೇಶ್ ಕೋಟೆಕಾರ್, ಕಿರಣ್ಕುಮಾರ್, ಮುಕ್ಬುಲ್ ಅಹಮ್ಮದ್, ಪುಷ್ಪಲತಾ, ಪ್ರದೀಪ್, ಪ್ರವೀಣ್ಕುಮಾರ್, ಕಲಾಂದರ್, ಹಾಲಸ್ವಾಮಿ, ಇರ್ಫಾನ್ ಮೊದಲಾದವರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















