ಶಿವಮೊಗ್ಗ ನಾಗರಿಕ ಅಭಿನಂದನಾ ಸಮಿತಿ, ಶ್ರೀಗಂಧ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಸಾಂಸ್ಕೃತಿಕ ರಾಯಭಾರಿ ಹಿರಿಯ ಮುತ್ಸದ್ಧಿ ರಾಜಕಾರಣಿ ಕೆ.ಎಸ್. ಈಶ್ವರಪ್ಪನವರ 75ನೇ ಜನ್ಮ ದಿನಾಚರಣೆಯನ್ನು ಜೂ. 10 ರಂದು ಸಂಜೆ 5.30 ಕ್ಕೆ ಕುವೆಂಪು ರಂಗಮಂದಿರದಲ್ಲಿ ಅಮೃತ ಸಂಭ್ರಮದ ಹೆಸರಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆ.ಎಸ್. ಈಶ್ವರಪ್ಪ ಅವರು ಕೇವಲ ವ್ಯಕ್ತಿ ಮಾತ್ರವಲ್ಲ, ಅವರೊಂದು ಶಕ್ತಿ. ಮುಖ್ಯವಾಗಿ ಸಾಂಸ್ಕೃತಿ ರಾಯಭಾರಿಯಾಗಿದ್ದಾರೆ. ಬಿಜೆಪಿಯನ್ನು ಕಟ್ಟಿ ಬೆಳೆಸಿ ಉಪಮುಖ್ಯಮಂತ್ರಿಯಾಗಿದ್ದವರು. 75 ವರ್ಷದ ಈ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಗುವುದು ಎಂದರು.
ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಏಳು ಬೀಳುಗಳ ನಡುವೆಯೂ ಪ್ರಖರ ಹಿಂದುತ್ವವಾದದಿಂದ ಹಿಂದೆ ಸರಿಯದೇ ಪ್ರಭಾವಿಯಾಗಿ ಪ್ರಮುಖ ವ್ಯಕ್ತಿಯಾಗಿ ರಾಜಕೀಯ ಜೀವನವನ್ನು ರೂಪಿಸಿಕೊಂಡವರು. ಅಷ್ಟೇ ಅಲ್ಲ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಶ್ರೀಗಂಧ ಸಂಸ್ಥೆಯ ಮೂಲಕ ಸದ್ಭಾವ, ಸದ್ವಿಚಾರ, ಸದಭಿರುಚಿ ಮತ್ತು ಸತ್ಕಾರಗಳನ್ನು ಮಾಡಿದ್ದಾರೆ. ಹೀಗಾಗಿ ಅವರ ಅಮೃತ ಸಂಭ್ರಮಕ್ಕೆ ನಾವೆಲ್ಲರೂ ಸಾಕ್ಷಿಯಾಗೋಣ ಎಂದರು.
ಈಶ್ವರಪ್ಪ ಅವರ ಜನ್ಮ ದಿನಾಚರಣೆಯ ಅಮೃತ ಸಂಭ್ರಮದ ಈ ಕಾರ್ಯಕ್ರಮ ಇಲ್ಲಿಗೆ ಮುಗಿಯುವುದಿಲ್ಲ. ಅಕ್ಟೋಬರ್ ಕೊನೆಯವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಬಹುದೊಡ್ಡದಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದು ಪಕ್ಷಾತೀತವಾಗಿರುತ್ತದೆ. ಅವರ ಅಭಿಮಾನಿಗಳು ಮತ್ತು ವಿವಿಧ ಸಮಾಜದವರು, ಆತ್ಮೀಯರು, ರಾಜಕೀಯ ವ್ಯಕ್ತಿಗಳು, ಸಾಂಸ್ಕೃತಿಕ ರಾಯಭಾರಿಗಳು, ಸ್ವಾಮೀಜಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಎಸ್.ಎನ್. ಚನ್ನಬಸಪ್ಪ, ಶಾಸಕರು
ಬಿ.ಆರ್. ಮಧುಸೂದನ್ ಮಾತನಾಡಿ, ಅಂದು ಸಂಜೆ 5.30 ಕ್ಕೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ವಹಿಸಲಿದ್ದು, ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ನಾಡಿನ ಹೆಸರಾಂತ ಕಲಾವಿದ ಶಂಕರ ಶಾನಭಾಗ್ ತಂಡದವರಿಂದ ಸಾತ್ವಿಕ ಎಂಬ ದಾಸ ಪರಂಪರೆಯ ಮಹೋನ್ನತ ಕೃತಿಗಳ ಗಾಯನವಿರುತ್ತದೆ ಎಂದರು.
ಪಾಲಿಕೆ ಸದಸ್ಯ ವಿಶ್ವಾಸ್ ಮಾತನಾಡಿ, ಜನ್ಮ ದಿನಾಚರಣೆ ಅಂಗವಾಗಿ ಅಂದು ಬೆಳಗ್ಗೆ 8 ಗಂಟೆಗೆ ಶುಭಮಂಗಳ ಸಮುದಾಯ ಭವನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಮತ್ತು ಬೆಳಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಮಾರಿಕಾಂಬ ಫೈನಾನ್ಸ್ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಸಾನಿಧ್ಯವನ್ನು ಬೆಕ್ಕಿನ ಕಲ್ಮಠ ಶ್ರೀಗಳಾದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ವಹಿಸಲಿದ್ದಾರೆ ಎಂದರು.
ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ತೆಗೆದುಕೊಳ್ಳುವುದು ಅಷ್ಟು ಸಲುಭವಲ್ಲ, ಇದು ಸರ್ಕಾರಕ್ಕೆ ಶೋಭೆಯನ್ನೂ ತರುವುದಿಲ್ಲ. ಕಾಯ್ದೆಯಲ್ಲಿರುವ ಕೆಲವು ಅಂಶಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 12 ವರ್ಷದ ಹಸುಗಳನ್ನು ಕಟುಕರಿಗೆ ಕೊಡಬಹುದು ಎಂಬ ಹೇಳಿಕೆ ಸರಿಯಲ್ಲ. ಹಾಗೆಯೇ ಒಂದು ವಿದ್ಯುತ್ ಬಿಲ್ ಹೆಚ್ಚಿಸಿ ಮತ್ತೊಂದು ಕಡೆ ಉಚಿತ ವಿದ್ಯುತ್ ಎನ್ನುವುದು ಸರ್ಕಾರದ ದ್ವಂದ್ವ ನಿಲುವಾಗಿದೆ. ಇದು ಕೂಡ ಅಸಂಬದ್ಧ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಬಡ ಜನರನ್ನು ಕಡೆಗಣಿಸುತ್ತಿದೆ. ಕಾಂಗ್ರೆಸ್ ನ ಈ ಅವಿರೋಧಗಳನ್ನು ಮುಂದಿನ ದಿನಗಳಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ಖಂಡಿಸುತ್ತದೆಯಲ್ಲದೇ ಹೋರಾಟ ಮುಂದುವರೆಸುತ್ತದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ನಟರಾಜ್ ಭಾಗವತ್, ಏಳುಮಲೈ, ವೆಂಕಟೇಶ್, ವಿದ್ವಾನ್ ಹೆಚ್.ಎಸ್. ನಾಗರಾಜ್, ಸ.ನ. ಮೂರ್ತಿ, ಹೆಚ್.ಎಸ್. ಕೇಶವಮೂರ್ತಿ, ಪ್ರಭಾಕರ್, ರಘುನಾಥ್, ನಾಗೇಶ್, ನಾಗರಾಜ್ ಮೊದಲಾದವರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















