ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಆನಂದಪುರ: ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಮುಖ್ಯರಸ್ತೆ ಸಂಫೂರ್ಣವಾಗಿ ಗುಂಡಿ ಗೊಟರುಗಳಿಂದ ಕೂಡಿದ್ದು ಮಳೆಯ ಪರಿಣಾಮ ಮತ್ತಷ್ಟು ಹಾಳಾಗಿ, ಜನ ಹಾಗೂ ವಾಹನ ಸಂಚಾರಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿದೆ.
ಆನಂದಪುರಂನಿಂದ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗ ಇದಾಗಿದ್ದು, ಈ ರಸ್ತೆ ಅಭಿವೃದ್ಧಿ ಕಾಣದೇ ದಶಕಗಳೇ ಕಳೆದಿವೆ. ಈಗ ಮಳೆಯ ಅಬ್ಬರದಿಂದ ರಸ್ತೆಯಲ್ಲಿ ಇನ್ನಷ್ಟು ಗುಂಡಿ ಗೊಟರುಗಳು ಸೃಷ್ಠಿಯಾಗಿದ್ದು, ಅಕ್ಷರಶಃ ಕೆಸರು ಗದ್ದೆಯಂತಾಗಿದೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ಗುರುಪ್ರಸಾದ್, ಎಷ್ಟೋ ವರ್ಷಗಳಿಂದ ನೋಡುತ್ತಿದ್ದೇವೆ. ಈ ರಸ್ತೆ ಹೀಗೆಯೇ ಇದೆ. ಪ್ರತಿ ಮಳೆಗಾಲದಲ್ಲೂ ಇಲ್ಲಿ ಓಡಾಡುವುದು ದುಸ್ತರವಾಗಿದ್ದು, ಬಹಳಷ್ಟು ದ್ವಿಚಕ್ರ ವಾಹನ ಸವಾರರು ಇಲ್ಲಿ ಬಿದ್ದಿದ್ದಾರೆ. ಆದಷ್ಟು ಶೀಘ್ರ ಈ ರಸ್ತೆಯನ್ನು ಅಭಿವೃದ್ಧಿಪಡಿಸಿ, ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬೇಕಾಗಿದೆ ಎನ್ನುತ್ತಾರೆ.
ಮತ್ತೊಬ್ಬ ಸ್ಥಳೀಯ ರವಿ ಮಾತನಾಡಿ, ಈ ರಸ್ತೆ ಡಾಂಬಾರ್ ಕಂಡು ದಶಕಗಳೇ ಕಳೆದಿವೆ. ರೈಲು ಆಗಮಿಸಿದ ವೇಳೆ ಜನ ಓಡಾಟವೂ ಸಹ ಹೆಚ್ಚಾಗಿರುವ ವೇಳೆ ಬಹಳಷ್ಟು ದುಸ್ತರವಾಗುತ್ತದೆ. ಬಹಳಷ್ಟು ವರ್ಷಗಳಿಂದ ರಸ್ತೆಯನ್ನು ಅಭಿವೃದ್ದಿ ಪಡಿಸುವಂತೆ ಮನವಿ ಮಾಡಲಾಗಿದೆ. ಆದರೆ, ಯಾರೂ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದಷ್ಟು ಶೀಘ್ರ ಈ ರಸ್ತೆಯನ್ನು ಸರಿಪಡಿಸಬೇಕಾಗಿ ಆಗ್ರಹಿಸುತ್ತೇವೆ ಎಂದಿದ್ದಾರೆ.
ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ಸಂಚಕಾರವಾಗಿ ಪರಿಣಮಿಸಿರುವ ಈ ರಸ್ತೆಯಲ್ಲಿ ಅಪಾಯ ಸಂಭವಿಸುವುದಕ್ಕಿಂತಲೂ ಮುನ್ನವೇ ಎಚ್ಚೆತ್ತುಕೊಂಡು ದುರಸ್ಥಿ ಮಾಡಬೇಕು ಎಂಬುದು ಒಟ್ಟಾರೆ ಸ್ಥಳೀಯರ ಆಗ್ರಹವಾಗಿದೆ.
Get In Touch With Us info@kalpa.news Whatsapp: 9481252093
Discussion about this post