ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಐಎಸ್’ಎಲ್ ಕಾರ್ಖಾನೆಯನ್ನು ಉಳಿಸುವ ನಿಟ್ಟಿನಲ್ಲಿ ಖಾಸಗಿಗೆ ವಹಿಸಲು ಮತ್ತೊಮ್ಮೆ ಬಿಡ್ ಕರೆಯುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಕಾರ್ಖಾನೆಯನ್ನು ಉಳಿಸಲು ಎಲ್ಲ ರೀತಿಯ ಗರಿಷ್ಟ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮುಚ್ಚುವ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ಕೇಂದ್ರ ಗೃಹ ಸಚಿವರೊಂದಿಗೂ ಸಹ ಮಾತನಾಡಿ ಮನವಿ ಮಾಡಲಾಗಿದೆ. ನಮ್ಮ ಬಾಧ್ಯತೆಯನ್ನು ನಿರ್ವಹಿಸುತ್ತಿದ್ದೇವೆ ಎಂದರು.
ಹಿಂದೆ ಖಾಸಗಿಗೆ ವಹಿಸಲು ಬಿಡ್ ಕರೆದಾಗ ಯಾವುದೇ ಹೂಡಿಕೆದಾರರು ಬರಲಿಲ್ಲ. ಹೀಗಾಗಿ, ಮುಚ್ಚುವ ನಿರ್ಧಾರಕ್ಕೆ ಕೇಂದ್ರ ಬಂದಿದೆ. ಆದರೆ, ಈಗ ಮತ್ತೊಮ್ಮೆ ಬಿಡ್ ಕರೆಯಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಈಗಲೂ ಸಹ ಯಾರೂ ಬಿಡ್ ಮಾಡದೇ ಇದ್ದರೆ, ರಾಜ್ಯ ಸರ್ಕಾರದ ವತಿಯಿಂದಲೇ ಖಾಸಗೀ ಹೂಡಿಕೆದಾರರನ್ನು ಕರೆತರುವ ಪ್ರಯತ್ನ ಮಾಡಲಾಗುವುದು ಎಂದರು.
Also read: ಶಿವಮೊಗ್ಗದಲ್ಲಿ ಲ್ಯಾಂಡ್ ಆಗುವ ಮೊದಲ ವಿಮಾನದಲ್ಲಿ ಯಾರು, ಎಷ್ಟು ಗಂಟೆಗೆ ಬರಲಿದ್ದಾರೆ?
ಕಾಂಗ್ರೆಸ್ ವಿರುದ್ಧ ಕಿಡಿ
ಅಂದಿನ ಸರ್ಕಾರ ಕಾರ್ಖಾನೆಯನ್ನು ಕೇಂದ್ರಕ್ಕೆ ಕೇವಲ ಮ್ಯಾನೇಜ್ಮೆಂಟ್ ಮಾತ್ರ ವಹಿಸಿಕೊಡಬೇಕಿತ್ತು. ಆದರೆ, ಇಡಿಯ ಕಾರ್ಖಾನೆಯ ಆಸ್ತಿ ಸೇರಿ ಸಂಪೂರ್ಣ ಮಾಲೀಕತ್ವವನ್ನು ವಹಿಸಿಕೊಟ್ಟಿತ್ತು. ಹೀಗಾಗಿ, ಈಗ ಕೇಂದ್ರದ ನಿರ್ಧಾರದ ವಿರುದ್ಧ ಅಧಿಕಾರ ಚಲಾಯಿಸುವ ಹಕ್ಕು ನಮಗಿಲ್ಲ ಎಂದರು.
ಆದರೆ, ಕಾರ್ಖಾನೆ ಉಳಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆ. ಹೀಗಾಗಿ, ಮತ್ತೊಮ್ಮೆ ಬಿಡ್ ಕರೆಯಲು ಮನವಿ ಮಾಡಿದ್ದೇವೆ. ರಾಜ್ಯ ಬಜೆಟ್ ಮುಕ್ತಾಯವಾದ ನಂತರ ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತನಾಡಿ, ಇದನ್ನು ಅತ್ಯಂತ ಗಂಭೀರವಾಗಿ ಮುಂದಿನ ದಾರಿಗಳ ಬಗ್ಗೆ ಹೆಜ್ಜೆ ಇಡಲಾಗುವುದು ಎಂದರು.
ಅಲ್ಲದೇ, ಕಾರ್ಖಾನೆಯನ್ನು ಉಳಿಸಿಕೊಳ್ಳಲು ನಾವು ಬದ್ದರಾಗಿದ್ದು, ಎಲ್ಲ ಪ್ರಯತ್ನಗಳನ್ನೂ ಸಹ ಮಾಡುತ್ತಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಸದನದಲ್ಲಿ ಹೇಳಿದ್ದಾರೆ ಎಂದರು.
ಎಂಪಿಎಂ ಕಾರ್ಖಾನೆಯನ್ನು ಮುಚ್ಚಿದ್ದೇ ಕಾಂಗ್ರೆಸ್ ಸರ್ಕಾರ. ಈಗ ಯಾವ ನೈತಿಕತೆ ಇಟ್ಟುಕೊಂಡು ನಮ್ಮ ವಿರುದ್ಧ ಆರೋಪ ಮಾಡುತ್ತಾರೆ ಎಂದು ಸಂಸದರು ಪ್ರಶ್ನಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post