ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಗೌರವಯುತವಾಗಿ ಸೇವೆ ಸಲ್ಲಿಸುತ್ತಿರುವ ನೌಕರರ ವಿರುದ್ಧ ಸಲ್ಲದ ಮಿಥ್ಯಾರೋಪ ಮಾಡುವ, ಯಾವುದೇ ಸಮಾಜಘಾತಕ ವ್ಯಕ್ತಿ ಅಥವಾ ಶಕ್ತಿಗಳ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ. ಅದಕ್ಕೆ ಸೂಕ್ತ ಉತ್ತರ ನೀಡಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ತಿಳಿಸಿದ್ದಾರೆ.
ಅವರು ಇತ್ತೀಚೆಗೆ ಸಾಗರ ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಶಿಕ್ಷಕರ ವಿರುದ್ಧ ಆಧಾರರಹಿತವಾಗಿರುವ ಸುಳ್ಳು ಆರೋಪ ಮಾಡಿದ್ದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ಹರಿಯಬಿಟ್ಟು ನೌಕರರಿಗೆ ಮಾನಸಿಕವಾಗಿ ನೋವನ್ನುಂಟು ಮಾಡುತ್ತಿರುವ ವ್ಯಕ್ತಿಯ ಚಟುವಟಿಕೆಗಳನ್ನು ಸಂಘಟನೆ ಗಂಭೀರವಾಗಿ ಪರಿಗಣಿಸಿದೆ. ಮಿಥ್ಯಾರೋಪ ಮಾಡುವ ವ್ಯಕ್ತಿಗಳು ಸಂಬಂಧಿಸಿದ ಇಲಾಖೆ ಅಥವಾ ಸಂಬಂಧಿಸಿದ ಮೇಲಾಧಿಕಾರಿಗಳಲ್ಲಿ ದೂರು ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ತಪ್ಪಿದಲ್ಲಿ ಇಂತಹ ಕುತ್ಸಿಕ ಮನಸ್ಥಿತ ಹೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸಂಘಟನೆ ಸಕಾಲಿಕ ನಿರ್ಧಾರ ಕೈಗೊಳ್ಳಲಿದೆ ಎಂದವರು ತಿಳಿಸಿದ್ದಾರೆ.
ಶಿಕ್ಷಕರ ಸೇವೆಗೆ ಸಮಾಜದಲ್ಲಿ ವಿಶೇಷ ಗೌರವಯುತ ಸ್ಥಾನಮಾನವಿದೆ. ಅದರಲ್ಲೂ ವಿಶೇಷವಾಗಿ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಅದರ ಬದಲಾಗಿ ಅವರನ್ನು ನಿಂಧಿಸುವುದು, ಸುಳ್ಳು ಆರೋಪ ಮಾಡಿ, ಅವರ ಮನಸ್ಸಿಗೆ ನೋವುಂಟು ಮಾಡುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗಲಿದೆ. ಆರೋಪ ಮಾಡುವ ಮುನ್ನ ಸಂಭವಿಸಬಹುದಾದ ಘಟನಾವಳಿಗಳು, ಸಾರ್ವಜನಿಕರಲ್ಲಿ ಶಿಕ್ಷಕರ ಬಗ್ಗೆ ಮೂಡುವ ಭಾವನೆಯಿಂದ ಶಿಕ್ಷಕರ ಗೌರವಕ್ಕೆ ಧಕ್ಕೆ ಉಂಟಾಗಲಿದೆ. ಇದು ಸಲ್ಲದು ಎಂದವರು ತಿಳಿಸಿದ್ದಾರೆ.
Also read: ಶಿವಮೊಗ್ಗದಲ್ಲಿ ರಸ್ತೆ ಅಪಘಾತ: ಬೈಕ್ ಸವಾರ ದಾರುಣ ಸಾವು
ಸಾಗರ ತಾಲೂಕಿನಲ್ಲಿ ಶಿಕ್ಷಣ ಇಲಾಖೆಯ ವಿವಿಧ ಕ್ಲಸ್ಟರ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯೋಪಾಧ್ಯಾಯರು, ಅಧಿಕಾರಿ-ಸಿಬ್ಬಂಧಿಗಳ ವಿರುದ್ಧ ಸುಳ್ಳು ಆರೋಪ ಮಾಡಿದ್ದಲ್ಲದೆ ಸಾಮಾಜಿಕ ಸ್ವಾಸ್ಥ್ಯ ಹಾಳುಮಾಡುತ್ತಿರುವ ವ್ಯಕ್ತಿಯೊಬ್ಬನ ವಿರುದ್ಧ ನೊಂದ ನೌಕರರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲು ಈಗಾಗಲೇ ಸೂಚಿಸಲಾಗಿದೆ. ಈ ಬಗ್ಗೆ ಸಕ್ಷಮ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದವರು ತಿಳಿಸಿದ್ದಾರೆ.
ನೌಕರರ ಮೇಲೆ ಸಲ್ಲದ ಆರೋಪ ಮಾಡುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡುವ ವಿಕೃತ ಮನಸ್ಸಿನ ವ್ಯಕ್ತಿಗಳನ್ನು ಪೊಲೀಸ್ ಇಲಾಖೆ ಸೂಕ್ಷö್ಮವಾಗಿ ಗಮನಿಸಿ, ಪರಿಶೀಲಿಸಿ, ಸಾಮಾಜಿಕ ಕಂಟಕಪ್ರಾಯವಾಗುವ ಇಂತಹ ವ್ಯಕ್ತಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಅವರು ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಶಿಕ್ಷಕರು ಸೇರಿದಂತೆ ಸರ್ಕಾರದ ಬೇರೆ ಯಾವುದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಇಂತಹ ಆರೋಪಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳದಿರುವಂತೆ ಹಾಗೂ ಸಂಘಟನೆಯು ತಮ್ಮ ನೆರವಿಗೆ ಸದಾ ಧಾವಿಸಲಿದೆ ಎಂದು ತಿಳಿಸಿರುವ ಅವರು, ತಮ್ಮ ಕಾರ್ಯಕ್ಷೇತ್ರದಲ್ಲಿ ಸೌಲಭ್ಯಗಳಿಗಾಗಿ ಆಗಮಿಸುವ ಸಾರ್ವಜನಿಕರಿಗೆ ಉತ್ತಮ ಹಾಗೂ ತ್ವರಿತಗತಿಯ ಸೇವೆ ನೀಡುವಂತೆ ಅವರು ನೌಕರರಲ್ಲಿ ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post