ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುಡಿಯಬೇಡ ಎಂದು ಬುದ್ದಿ ಹೇಳಲು ಹೋದ ಸಂಬಂಧಿಯ ಮೇಲೆಯೇ ಹಲ್ಲೆ ನಡೆಸಲು ಮುಂದಾದ ವೇಳೆ ಆಕಸ್ಮಿಕವಾಗಿ ಚಾಕು ತಾಗಿ ಗಾಯ ಗೊಂಡಿದ್ದ ವ್ಯಕ್ತಿಯೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಸೊರಬ ತಾಲೂಕು ಆನವಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯ ಜಡೆ ಗ್ರಾಮದಲ್ಲಿ ನಡೆದಿದೆ.
ಜಡೆ ಗ್ರಾಮದ ನಿವಾಸಿ ರವೀಂದ್ರ ಎಂಬಾತನೆ ಸಾವು ಕಂಡ ವ್ಯಕ್ತಿಯಾಗಿದ್ದು, ಈತ ತನ್ನ ಸಂಬಂಧಿ ಉಮೇಶ ಎಂಬುವವರೊಂದಿಗೆ ಜಗಳಕ್ಕಿಳಿದು ಹಲ್ಲೆ ಮಾಡಲು ಮುಂದಾದ ವೇಳೆ ಆತ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ, ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಹಿನ್ನೆಲೆ :
ಜಡೆ ಗ್ರಾಮದ ನಿವಾಸಿ ರವೀಂದ್ರ ವಿವಾಹಿತನಾಗಿದ್ದು, ಆತನ ವಿಪರೀತ ಕುಡಿತಕ್ಕೆ ದಾಸನಾಗಿದ್ದ. ಈ ಹಿನ್ನೆಲೆಯಲ್ಲಿ ಆತನ ಪತ್ನಿಯ ಸಹೋದರ ಸಾಲಿಗೆ ಗ್ರಾಮದ ಉಮೇಶ್ ಎಂಬುವವರು ನಿನ್ನೆ ಊರಿಗೆ ಬಂದು ಕುಡಿಯಬೇಡ, ಅದನ್ನು ನಿಲ್ಲಿಸಿಬಿಡು, ಮನೆ ಕಡೆ ಗಮನಹರಿಸು ಎಂದು ಬುದ್ದಿ ಹೇಳಿದ್ದ. ಈ ವೇಳೆ ಆತನ ಅದೇ ಗ್ರಾಮದ ಹೋಟೆಲ್ ನಲ್ಲಿದ್ದರು.
ಇದರಿಂದ ಸಿಟ್ಟಾದ ರವೀಂದ್ರ, ನನಗೆ ಬುದ್ದಿ ಹೇಳುವುದಕ್ಕೆ ನೀನು ಯಾರು, ನನಗೆ ಗೊತ್ತಿಲ್ಲವೇ ಎಂದು ಜಗಳಕ್ಕಿ ಇಳಿದಿದ್ದಾನೆ. ಈ ವೇಳೆ ಉಮೇಶ್, ಸಿಟ್ಟಾಗಿ ಆತನಿಗೆ ಎರಡು ಬಾರಿಸಲು ಮುಂದಾಗಿದ್ಧಾನೆ. ಈ ಹಂತದಲ್ಲಿ ಅಲ್ಲಿಯೇ ಟೇಬಲ್ ನಲ್ಲಿದ್ದ ಕತ್ತರಿಯನ್ನು ತೆಗೆದುಕೊಂಡು ಉಮೇಶ್ ಮೇಲೆ ದಾಳಿ ನಡೆಸಲು ಮುಂದಾಗಿದ್ದಾನೆ. ಅದರಿಂದ ತಪ್ಪಿಸಿಕೊಳ್ಳುವ ಹಂತದಲ್ಲಿ ರವೀಂದ್ರ ಕೈಯಲ್ಲಿದ್ದ ಹರಿತವಾದ ಕತ್ತರಿಯ ಮೂತಿ ಆತನ ಎದೆ ಭಾಗಕ್ಕೆ ತಾಗಿ ಆತ ಗಂಬೀರವಾಗಿ ಗಾಯಗೊಂಡಿದ್ದ ಎನ್ನಲಾಗಿದೆ.
ತಕ್ಷಣವೇ ಆತನನ್ನು ಆನವಟ್ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು . ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದ ಆತನ ಮೃತಪಟ್ಟಿದ್ದಾನೆಂದು ಹೇಳಲಾಗಿದೆ. ಈ ಕುರಿತು ಆನವಟ್ಟಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ಧಾರೆ. ಘಟನೆಗೆ ಯಾವುದೇ ದ್ವೇಷದ ಕಾರಣವಿಲ್ಲ, ಕುಡಿಯುವ ವಿಚಾರದಲ್ಲಿ ಘರ್ಷಣೆ ಆಗಿದೆ, ಈ ಹಂತದಲ್ಲಿ ಆತನ ಕೈಯಲ್ಲಿದ್ದ ಚಾಕು ಎದೆಗೆ ತಾಗಿ ಗಾಯಗೊಂಡಿದ್ದ, ಈಗ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆಂದು ಪಿಎಸ್ ಐ ರಾಜು ರೆಡ್ಡಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post