ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಧಾನ ಪರಿಷತ್ ವಿಪಕ್ಷನಾಯಕ ಛಲವಾದಿ ನಾರಾಯಣ ಸ್ವಾಮಿ #Chalavadi Narayanaswamy ಅವರ ಮೇಲೆ ಪ್ರಿಯಾಂಕ ಖರ್ಗೆ #Priyanka Kharge ಬೆಂಬಲಿಗರು ಹಲ್ಲೆಯತ್ನ ನಡೆಸಿ, ಬೆದರಿಕೆ ಹಾಕಿರುವುದು ಖಂಡನೀಯವಾಗಿದ್ದು, ಕಾಂಗ್ರೆಸ್ಸಿನ ಗೂಂಡಾ ರಾಜ್ಯಕ್ಕೆ ಮಾದರಿಯಾಗಿದೆ ಎಂದು ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್ #D S Arun ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಕಲ್ಬುರ್ಗಿಯ ಚಿತ್ತಾಪುರ ಭೇಟಿಯ ವೇಳೆಯಲ್ಲಿ ವಿಪಕ್ಷ ನಾಯಕರ ಮೇಲೆ ಗೂಂಡಾಪ್ರವೃತ್ತಿ ತೋರಿಸಿದ ಖರ್ಗೆ ಬೆಂಬಲಿಗರು ಅಡ್ಡಿಪಡಿಸಿದ್ದಾರೆ ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಛಲವಾದಿ ನಾರಾಯಣ ಸ್ವಾಮಿಯವರು ದಲಿತ ನಾಯಕರಾಗಿದ್ದು, ವಿಧಾನ ಪರಿಷತ್ನಲ್ಲಿ ವಿಪಕ್ಷ ನಾಯಕರೂ ಆಗಿದ್ದು, ತಮ್ಮ ಪ್ರಾಮಾಣಿಕ ವರ್ತನೆಯಿಂದ ವಿಪಕ್ಷ ನಾಯಕ ಸ್ಥಾನ ಗಳಿಸಿದವರು. ಅವರು ಖರ್ಗೆ ಕುಟುಂಬದ ಅಕ್ರಮ ಆಸ್ತಿಯ ಬಗ್ಗೆ ಸದನದಲ್ಲಿ ಗಮನಸೆಳೆದು ಹೋರಾಟ ನಡೆಸಿದ್ದರ ಪರಿಣಾಮ ಆಸ್ತಿಯನ್ನು ಹಿಂತಿರುಗಿಸಬೇಕಾಯಿತು. ಆ ಸೇಡನ್ನು ನಿನ್ನೆ ಅವರ ಬೆಂಬಲಿಗರಿಂದ ಹಲ್ಲೆ ಯತ್ನ ನಡೆಸುವುದರ ಮೂಲಕ ಹಾಗೂ ಅವರಿಗೆ ಅಡ್ಡಿಪಡಿಸುವುದರ ಮೂಲಕ ಖರ್ಗೆ ಬೆಂಬಲಿಗರು ತೋರ್ಪಡಿಸಿದ್ದು, ಇದು ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕೂಡಲೇ ದುರ್ವರ್ತನೆ ತೋರಿದ ಖರ್ಗೆ ಬೆಂಬಲಿಗರನ್ನು ಕೂಡಲೇ ಪೊಲೀಸರು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಶಿವಮೊಗ್ಗದಲ್ಲಿ ಯುವ ಕಾಂಗ್ರೆಸ್ನವರು ಮಾಜಿ ಸಂಸದ ಪ್ರತಾಪಸಿಂಹ ಅವರ ಮುಖವಾಡ ಧರಿಸಿ, ಆ್ಯಂಬುಲೆನ್ಸ್ನಲ್ಲಿ ಅವರನ್ನು ಹೊತ್ತೊಯ್ದಿದ್ದು ಹಾಗೂ ಸಾರ್ವಜನಿಕರ ತುರ್ತು ಬಳಕೆಗೆ ಬಳಸುವ ಆ್ಯಂಬುಲೆನ್ಸ್ ವಾಹನವನ್ನು ದುರ್ಬಳಕೆ ಮಾಡಿದ್ದು, ಮತ್ತು ಇದಕ್ಕೆ ಯಾವುದೇ ಅನುಮತಿ ಪಡೆಯದೇ ಇದ್ದದ್ದು ಕಾನೂನುಬಾಹಿರವಾಗಿದ್ದು, ಆ್ಯಂಬುಲೆನ್ಸ್ ದುರ್ಬಳಕೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆ.ವಿ. ಅಣ್ಣಪ್ಪ, ವಿನ್ಸೆಂಟ್ ರೋಡ್ರಿಗಸ್, ದರ್ಶನ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post