ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶೀಘ್ರದಲ್ಲೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿರುವ ಆಯನೂರು ಮಂಜುನಾಥ್, ಕೆ.ಎಸ್. ಈಶ್ವರಪ್ಪ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶೀಘ್ರದಲ್ಲೇ ವಿಧಾನ ಷರಿಷತ್’ಗೆ ರಾಜೀನಾಮೆ ನೀಡಲಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ.
ಕೆ.ಎಸ್. ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸೊಳ್ಳೆ ಓಡಿಸಲು ಸಾಧ್ಯವಾಗದ ನೀವು ಸೊಳ್ಳೆ ಪರದೆ ನೀಡುತ್ತೀರಾ ಎಂದು ವ್ಯಂಗ್ಯವಾಗಿದ್ದು, ನಿಮ್ಮ ವಿರುದ್ಧ ಅಕಾಡಕ್ಕೆ ನಾನು ನಿಲ್ಲಲಿದ್ದೇನೆ. ಅಲ್ಲದೇ, ಈಶ್ವರಪ್ಪ ಕ್ಷಮೆ ಕೇಳಿ, ಅಖಾಡಕ್ಕೆ ಇಳಿಯದಿದ್ದರೆ ಮಾತ್ರ ಪಕ್ಷದಲ್ಲಿ ಉಳಿಯುತ್ತೇನೆ ಎಂದಿದ್ದಾರೆ.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲೇಬೇಕು ಎಂಬ ಇಚ್ಚೆ ಹೊಂದಿದ್ದೇನೆ. ಈಗಾಗಲೇ ನನ್ನ ನಿಲುವು, ಭಾವನೆ ಪ್ರಕಟ ಮಾಡಿದ್ದೇನೆ. ಪಕ್ಷದ ವೇದಿಕೆಯಲ್ಲು ನನ್ನ ವಿನಂತಿ ಸಲ್ಲಿಸಿದ್ದೇನೆ. ನನ್ನ ಆಸೆಗೆ ಪೂರಕವಾಗಿ ಬಿಜೆಪಿಯಿಂದ ಟಿಕೇಟ್ ಸಿಗುವ ಲಕ್ಷಣ ಕಂಡು ಬಂದಿಲ್ಲ. ಕೆಲವರ ಅವರವರ ಮಕ್ಕಳ ಹೆಸರು ಓಡಾಡುತ್ತಿದೆ. ನಮ್ಮ ಸ್ನೇಹಿತರು, ವಿಶ್ವಾಸಿಗರ ಜೊತೆ ಸಮಾಲೋಚನೆ ನಡೆಸಿದ್ದೇನೆ ಎಂದಿದ್ದಾರೆ.
ಈಶ್ವರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ನಿನ್ನನ್ನೇ ಕೇರ್ ಮಾಡಿಲ್ಲ, ಅವನು ಯಾವ ಲೆಕ್ಕ ಅಂದಿದ್ದಾರೆ. ಅವರ ಶಿಕ್ಷಣದ ಮಟ್ಟ ಅದು, ಅವರು ಬಹುವಚನ ಕಲಿತಿಲ್ಲ. ಬಹುವಚನ ಮಾತನಾದರೆ ರಾಜ್ಯಕ್ಕೆ ಆಶ್ಚರ್ಯ ಆಗಿದೆ. ಅವರ ಮಾತನ್ನು ಸವಾಲಾಗಿ ಸ್ವೀಕರಿಸಿದ್ದು, ನನ್ನ ಬಗ್ಗೆ ಯಕಶ್ಚಿತ್ ಮಾತನಾಡಿದ ಈಶ್ವರಪ್ಪ, ಅವರಾಗಲಿ, ಅವರ ಮಗನಾಗಲಿ ಸ್ಪರ್ಧೆ ಮಾಡಲಿ. ಈ ಬಾರಿ ಅವರು ಚುನಾವಣಾ ಅಖಾಡಕ್ಕೆ ಬರಬೇಕು. ಪಕ್ಷ ಟಿಕೇಟ್ ಕೊಡಲಿಲ್ಲ ಎಂದು ಪಲಾಯನ ಮಾಡಬಾರದು ಎಂದರು.
ನಿಮಗೆ ರಾಜಕೀಯ ಲೆಕ್ಕ ಕೊಡುತ್ತೇನೆ ಎಂದ ಅವರು, ನಿಮ್ಮ ಗೋಡೌನ್’ನಲ್ಲಿ ಇರುವ ಎಲ್ಲಾ ಮಿಷಿನ್ ತೆಗೆದುಕೊಂಡು ಬನ್ನಿ, ಉತ್ತರ ಕೊಡುತ್ತೀನಿ. ಬಹಳ ಪ್ರಭಾವಿ ಈಶ್ವರಪ್ಪ ಅವರು ರಾಜ್ಯದಲ್ಲಿ ಶಿವಮೊಗ್ಗ ಬಿಟ್ಟು ಬೇರೆ ಎಲ್ಲೂ ಸ್ಪರ್ಧಿಸುವ ಮನಸ್ಸಿಲ್ಲ. ನಿಮಗೆ ಅಷ್ಟೊಂದು ಪ್ರಭಾವ ಇದ್ದರೆ ನಿಮ್ಮ ಮಗನನ್ನು ನಿಲ್ಲಿಸಿಕೊಂಡು ಗೆಲ್ಲಿಸಿ ನಿಮ್ಮ ಪ್ರಭಾವ ತೋರಿಸಿ. ಎಲ್ಲಿಯೂ ನೀವು ಗೌರವದಿಂದ ನಡೆದುಕೊಂಡಿಲ್ಲ. ನೀವು ಮಂತ್ರಿ ಸ್ಥಾನಕ್ಕೆ ಸ್ಪರ್ಧೆ ಮಾಡುವವರು. ಹೀಗಾಗಿ ಪಾಪ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲ್ಲ. ಅಧಿಕಾರದ ಹಪಾಹಪಿ ಇದೆ ನಿಮಗೆ ಎಂದು ವಾಗ್ದಾಳಿ ನಡೆಸಿದ ಅವರು, ಮಂತ್ರಿ ಸ್ಥಾನಕ್ಕಾಗಿ ಸದನಕ್ಕೆ ಹೋಗಲಿಲ್ಲ. ಜಿಲ್ಲಾ ಮಂತ್ರಿಯಾಗಿದ್ದವರು ನೀವು ಅದಕ್ಕೆ ತಕ್ಕ ಗೌರವ ಉಳಿಸಿಕೊಂಡಿದ್ದೀರಾ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಜಿಲ್ಲೆಗೆ ಬಂದಾಗ ಸ್ವಾಗತ ಮಾಡಿದ್ದೀರಾ. ಯಡಿಯೂರಪ್ಪ ಅವರಿಗೆ ಸದಾ ಅಪಮಾನ ಮಾಡಿ, ತಾವು ಅರ್ಹತೆ ಕಳೆದುಕೊಂಡಿದ್ದೀರಾ. ತಮಗೆ ಅರ್ಹತೆ, ಶಕ್ತಿ ಇದ್ದರೆ ತಮ್ಮ ಮಗನನ್ನು ಗೆಲ್ಲಿಸಿಕೊಳ್ಳಿ. ನಿಮ್ಮ ಗೋಡೌನ್’ನಲ್ಲಿರುವ ಎಣಿಕೆ ಮೆಷಿನ್ ಸೀಜ್ ಆಗಿದ್ದರೆ ಹೊಸ ಮೆಷಿನ್ ತರಿಸಿಕೊಳ್ಳಿ. ಕಾರ್ಪೋರೇಟರ್’ಗಳು ನಿಮ್ಮ ಕುಟುಂಬದ ಹಿಡಿತದಲ್ಲಿ ನರಳುತ್ತಿದ್ದಾರೆ. ಕಾರ್ಯಕರ್ತರು ನೀವೊಬ್ಬರಾದರೂ ಅವರ ವಿರುದ್ದ ಧ್ವನಿ ಎತ್ತಿದ್ದೀರಾ ನೀವು ಸ್ಪರ್ಧೆ ಮಾಡಿ ನಾವು ನಿಮ್ಮ ಜೊತೆ ಇರುತ್ತೇವೆ ಎಂದಿದ್ದಾರೆ. ಶಿವಮೊಗ್ಗದಲ್ಲಿ ನಾಲ್ಕೂವರೆ ಕೋಟಿ ರೂಪಾಯಿ ಸೀರೆ ಸಿಕ್ಕಿದೆ. ಒಂದೂವರೆ ಕೋಟಿ ಹಣ ಸಿಕ್ಕಿದೆ. ಇಷ್ಟೊಂದು ಹಣ, ಇಷ್ಟೊಂದು ಸೀರೆ ತರಿಸುವಂತಹ ವ್ಯಾಪಾರಿ ಶಿವಮೊಗ್ಗದಲ್ಲಿ ಯಾರು ಇಲ್ಲ. ಈಗಾಗಲೇ ವಾರ್ಡ್ ಗಳಲ್ಲಿ ಹಣ ಡಿಪಾಸಿಟ್ ಮಾಡಿದ್ದಾರೆ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಅಭಿವೃದ್ಧಿ ಆಗಿರುವುದು ಯಡಿಯೂರಪ್ಪ, ರಾಘವೇಂದ್ರ ಅವರಿಂದ. ನೀವೇನು ಮಾಡಿದ್ದೀರಾ ಹೇಳಿ, 32 ವರ್ಷದ ರಾಜಕಾರಣದಲ್ಲಿ ನೀವು ಮಾಡಿದ್ದು ಏನಿಲ್ಲ. ನೀವು ಪ್ರಚೋದನೆಯಿಂದ ಮಾತನಾಡಿದ್ದು ಅಷ್ಟೇ. ಈ ಬಾರಿ ಇಂತಹ ಶೈಲಿ ನಡೆಯಲು ಬಿಡುವುದಿಲ್ಲ. ನೀವು ಶಾಸಕರಾಗಿದ್ದಾಗ ಕ್ಷೇತ್ರದ ಜನರ ಬಗ್ಗೆ ಮಾತನಾಡಿದ್ದು ಇದ್ದರೆ ತೋರಿಸಿ. ಕ್ಷೇತ್ರದಲ್ಲಿ ಸಂಘಟನೆ ಪ್ರಬಲವಾಗಿದ್ದು, ಕಾರ್ಯಕರ್ತರ ಹೆಗಲ ಮೇಲೆ ಕೈಯಿಟ್ಟು ಅಧಿಕಾರ ಮಾಡಿದ್ದೀರಾ. ಈಗ ನಾನು ಅಖಾಡಕ್ಕೆ ಸಿದ್ದನಿದ್ದೇನೆ. ರಾಜೀನಾಮೆ ಕೊಟ್ಟು ಸ್ಪರ್ಧೆ ಮಾಡ್ತೇನೆ ಎಂದರು.
ಯಾವುದೇ ಪ್ರಚೋದನೆ ಮಾಡದೇ, ಗಲಾಟೆ ಎಬ್ಬಿಸದೇ ಚುನಾವಣೆಗೆ ಬನ್ನಿ. ಹಿಂದು ಮುಸ್ಲಿಂ ಭಾಂಧವರಲ್ಲಿ ಮನವಿ ಮಾಡ್ತೇನೆ, ದಯವಿಟ್ಟು ಶಾಂತ ರೀತಿಯಿಂದ ಇರಿ. ಕೆಲವೇ ದಿನದಲ್ಲಿ ದೇವಸ್ಥಾನ ಮಲಿನವಾಗಬಹುದು. ಶಾಂತಿಪ್ರಿಯನಾದ ನನ್ನನ್ನು ಎಲ್ಲರೂ ಬೆಂಬಲಿಸುತ್ತಾರೆ. ಪೊಲೀಸರು ಮೈಮರೆಯಬಾರದು. ಸದ್ಯದಲ್ಲೇ ಕೆಲವು ಘಟನೆ ಮರುಕಳಿಸುವುದಿದೆ. ಚುನಾವಣೆ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಿ ಎಂದರು.
ಯಡಿಯೂರಪ್ಪ ಅವರು ತಮ್ಮ ಪುತ್ರನನ್ನು ರಾಜಕಾರಣಕ್ಕೆ ತರಲು ಹೊರಟಾಗ ವೀರಾವೇಷ ತೋರಿಸಿದ್ದರು. ಈಗ ಬೇರೆ ಬೇರೆಯವರ ಮಕ್ಕಳನ್ನು ರಾಜಕಾರಣಕ್ಕೆ ತರಲು ಹೊರಟ್ಟಿದ್ದಾರೆ ಈಗ ಏನು ಮಾಡುತ್ತಾರೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















