ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಜೋಲಾ ಬಳಕೆ ಮಾಡುವ ಮೂಲಕ ಹಾಲು ಉತ್ಪಾದನೆ ಹೆಚ್ಚಳ, ಪಶುವಿನ ಆರೋಗ್ಯದಲ್ಲಿ ಸುಧಾರಣೆ, ಪೋಷಕಾಂಶ ಕೊರತೆಯ ನಿವಾರಣೆ, ರಾಸಾಯನಿಕ ಪಶು ಆಹಾರದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಎಂದು ಕೃಷಿ ವಿದ್ಯಾರ್ಥಿಗಳು ರೈತರಿಗೆ ತಿಳಿಸಿದರು.
ಕಲ್ಮನೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿಎಸ್ಸಿ (ಹಾನರ್ಸ್) ಕೃಷಿ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಅಜೋಲಾ ತಯಾರಿಕೆ ಹಾಗೂ ಅದರ ಮಹತ್ವ ಎಂಬ ವಿಷಯದ ಕುರಿತು ರೈತರಿಗೆ ಗುಂಪು ಚರ್ಚೆ ಹಾಗೂ ಪ್ರಾತ್ಯಕ್ಷಿಕೆಯಲ್ಲಿ ವಿದ್ಯಾರ್ಥಿಗಳು ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ಅಜೋಲಾ ಎಂಬ ಜಲಸಸ್ಯದ ಪರಿಚಯ, ಅದರ ಕೃಷಿ ಹಾಗೂ ಪಶುಪಾಲನೆಯಲ್ಲಿ ಇರುವ ಮಹತ್ವವನ್ನು ಗ್ರಾಮಸ್ಥ ರೈತರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸಿದರು. ಅಜೋಲಾ 25-30%ವರೆಗೆ ಪ್ರೋಟೀನ್ ಹೊಂದಿರುವ, ಅತಿ ವೇಗವಾಗಿ ಬೆಳೆಯುವ, ಕಡಿಮೆ ವೆಚ್ಚದ ಪಶು ಆಹಾರವಾಗಿದ್ದು, ಹಸು, ಕುರಿ, ಮೇಕೆ, ಕೋಳಿಗಳಿಗೆ ಪೂರಕ ಪೋಷಕಾಂಶ ನೀಡುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ತಿಳಿಸಿದರು.
ವಿಧಾನ ಪ್ರದರ್ಶನ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಜೋಲಾ ತಯಾರಿಕಾ ಹೊಂಡ ನಿರ್ಮಾಣದಲ್ಲಿ ಬರುವ ಖರ್ಚು ವೆಚ್ಚ, ಇದರಲ್ಲಿ ಪ್ಲಾಸ್ಟಿಕ್ ಶೀಟ್ ಅಳವಡಿಸುವುದು,ಮಣ್ಣು-ಸಗಣಿ-ರಸಗೊಬ್ಬರ ಮಿಶ್ರಣ ತಯಾರಿಸುವುದು ಎಲ್ಲವನ್ನೂ ಸಣ್ಣ ಪ್ರಮಾಣದಲ್ಲಿ ಮಾಡಿ ತೋರಿಸಿದರು.
ಅಜೋಲಾ ಬಳಕೆ ಮಾಡುವ ಮೂಲಕ ಹಾಲು ಉತ್ಪಾದನೆ ಹೆಚ್ಚಳ, ಪಶುವಿನ ಆರೋಗ್ಯದಲ್ಲಿ ಸುಧಾರಣೆ, ಪೋಷಕಾಂಶ ಕೊರತೆಯ ನಿವಾರಣೆ, ರಾಸಾಯನಿಕ ಪಶು ಆಹಾರದ ಮೇಲಿನ ಅವಲಂಬನೆ ಕಡಿಮೆಯಾಗುವ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ರೈತರಿಗೆ ಜಾಗೃತಿ ಮೂಡಿಸಿದರು. ಅಲ್ಲದೆ ಅಜೋಲಾವನ್ನು ಹೊಲಗಳಿಗೆ ಜೈವಿಕ ನೈಟ್ರೋಜನ್ ಮೂಲವಾಗಿ, ನೆಲ ಸಸ್ಯವರ್ಧಕವಾಗಿ ಬಳಸುವ ಪ್ರಯೋಜನಗಳನ್ನೂ ವಿವರಿಸಿದರು.
ಕಾರ್ಯಕ್ರಮದಲ್ಲಿ ರೈತರು ಸಕ್ರಿಯವಾಗಿ ಭಾಗವಹಿಸಿ, ಅಜೋಲಾ ತಯಾರಿಕೆ ಹಾಗೂ ಇದರ ವ್ಯವಹಾರಿಕ ಉಪಯೋಗಗಳ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ವಿದ್ಯಾರ್ಥಿಗಳು ಪ್ರತಿಯೊಂದು ಪ್ರಶ್ನೆಗೆ ಶೈಕ್ಷಣಿಕ ದೃಷ್ಟಿಯಿಂದ ಸ್ಪಷ್ಟ ಹಾಗೂ ವೈಜ್ಞಾನಿಕ ಉತ್ತರಗಳನ್ನು ನೀಡಿದರು.
ರೈತರಾದ ಭೀಮನಗೌಡ್ರು, ಶಿವಮಾದಯ್ಯ, ಕುಮಾರಸ್ವಾಮಿ,ಸುರೇಶ್ ಮತ್ತು ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















