ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ಸಾಹಿತ್ಯದ ವಿವಿಧ ಪ್ರಕಾರಗಳು, ಹಲವು ಅಧ್ಯಯನಶಾಸ್ತ್ರಗಳು ಹಾಗೂ ಆಧ್ಯಾತ್ಮಿಕ ದೃಷ್ಟಿಕೋನದಿಂದ ವಿಚಾರಗಳನ್ನು ಪರಿಷ್ಕರಿಸುವ ಬೇಂದ್ರೆಯವರದು ವಿಶಿಷ್ಠ ಸ್ವರೂಪದ ಪ್ರತಿಭೆ ಎಂದು ಖ್ಯಾತ ವಿದ್ವಾಂಸ, ಸಂಸ್ಕೃತ ವಿಶ್ವವಿದ್ಯಾಲದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅಭಿಪ್ರಾಯಪಟ್ಟರು.
ವಿವಿಯ ಕನ್ನಡ ಭಾರತಿ ಮತ್ತು ಧಾರವಾಡದ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ಗಳು ಜಂಟಿಯಾಗಿ ವಿವಿಯ ಬಸವ ಸಭಾಭವನದಲ್ಲಿ ಇಂದು ಆಯೋಜಿಸಿದ್ದ ಬೇಂದ್ರೆ ಕಾವ್ಯಗಳಲ್ಲಿ ರಾಷ್ಟ್ರೀಯತೆ ಮತ್ತು ಮಾನವತಾವಾದ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೇಂದ್ರೆ ಅವರನ್ನು ಅರ್ಥೈಸಿಕೊಳ್ಳಲು ಅವರ ಮೂರು ಮುಖಗಳಾದ ಸಾಹಿತ್ಯ, ಶಾಸ್ತ್ರ ಮತ್ತು ಆಧ್ಯಾತ್ಮಿಕ ದೃಷ್ಟಿಕೋನಗಳನ್ನು ಮೊದಲು ಗಮನಿಸಬೇಕು. ಅವುಗಳ ಚಲನೆಯಲ್ಲಿ ಬೇಂದ್ರೆ ಅವರ ಆಭಿವ್ಯಕ್ತಿ ಬೆಳೆಯುತ್ತಾ ಬಂದಿದೆ ಎಂದರು.
ನಾಟಕ, ಕಾವ್ಯ, ಕವಿತೆ, ಅನ್ಯಭಾಷೆಗಳ ಅಧ್ಯಯನ, ಸಂಶೋಧನೆ, ಸಂಸ್ಕೃತ ಓದುಗಳೆಲ್ಲವನ್ನೂ ಸಾಹಿತ್ಯದ ಭಾಗವಾಗಿ ಬೇಂದ್ರೆ ಕೈಗೊಂಡಿದ್ದರು. ಶಾಸ್ತ್ರಗಳ ಭಾಗವಾಗಿ ಸಂಖ್ಯಾಶಾಸ್ತ್ರ ಅಧ್ಯಯನದಲ್ಲಿ ಬೇಂದ್ರೆ ಅಪಾರ ಒಲವು ಹೊಂದಿದ್ದರು. ಅವರ ಕವಿತೆಗಳಲ್ಲಿ ನಾಕುತಂತಿ ಸೇರಿದಂತೆ ಅನೇಕ ಅಂಕಿಸಂಖ್ಯೆಗಳ ಉಲ್ಲೇಖಗಳನ್ನು ಗಮನಿಸಿದಲ್ಲಿ ಅವರು ಬದುಕು ಮತ್ತು ಸಾಹಿತ್ಯವನ್ನು ಅಂಕಿಗಳ ಹಿನ್ನೆಲೆಯಲ್ಲಿ ಕಂಡಿರುವುದು ತಿಳಿದು ಬರುತ್ತದೆ ಎಂದರು.
ಆಧ್ಯಾತ್ಮದ ಆಸಕ್ತಿಯ ಭಾಗವಾಗಿ ಅವರ ವೇದ-ವೇದಾಂತ ಸಾಹಿತ್ಯದ ಅಧ್ಯಯನ, ಅವರ ಮೇಲೆ ಅರವಿಂದರ ಪ್ರಭಾವಗಳನ್ನು ಕಾಣಬಹುದು. ಲಕ್ಷೀಶ, ಸರ್ವಜ್ಞ, ಠ್ಯಾಗೋರ್ ಸೇರಿದಂತೆ ಎಲ್ಲರ ಸಾಹಿತ್ಯ ಕೃತಿಗಳನ್ನು ಅರ್ಥೈಸಿ, ಅರಗಿಸಿಕೊಂಡು ಆ ಸ್ವಾದವನ್ನು ಕನ್ನಡದಲ್ಲಿಯೂ ಕಟ್ಟಿಕೊಟ್ಟ ವಿಶಿಷ್ಠ, ವಿರಾಟ್ ಸ್ವರೂಪದ ಪ್ರತಿಭೆ ಬೇಂದ್ರೆ ಮಾತ್ರ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುವೆಂಪು ಎಲ್ಲ ಮಾನವರು ವಿಶ್ವಮಾನವರಾಗಿ ಎಂದರೆ, ಬೇಂದ್ರೆ ತಮ್ಮ ಎಲ್ಲ ಸಾಹಿತ್ಯದಲ್ಲಿ ಮಾನವೀಯತೆ ಮೈಗೂಡಿಸಿಕೊಳ್ಳಲು ಕರೆಕೊಟ್ಟರು. ಬಡತನ, ಅಮಾನತೆಗಳನ್ನು ಮಾನವೀಯ ಪರಿಭಾಷೆಯಲ್ಲಿ ಸೂಕ್ಷ್ಮವಾಗಿ ಓದುಗನಿಗೆ ದಾಟಿಸಿದವರು ಬೇಂದ್ರೆ. ಇಂದಿನ ಸಾಮಾಜಿಕ, ಆರ್ಥಿಕ ಅಸಮಾನತೆಗಳನ್ನು ನೀಗಿಸಲು, ಇಲ್ಲದವರೆಡೆಗೆ ನಾವು ಹೊಂದಬೇಕಾದ ಮಾನವೀಯ ದೃಷ್ಟಿಕೋನವನ್ನು ಬೇಂದ್ರೆ ತಮ್ಮ ಎಲ್ಲ ಸಾಹಿತ್ಯ ಕೃತಿಗಳಲ್ಲಿ ವ್ಯಕ್ತಪಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಭಾಗದ ಪ್ರೊ. ಶಿವಾನಂದ ಕೆಳಗಿನಮನಿ, ಪ್ರೊ. ಪ್ರಶಾಂತನಾಯಕ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಹಾಜರಿದ್ದರು.
ಎರಡು ದಿನದ ವಿಚಾರ ಸಂಕಿರಣ:
ಉದ್ಘಾಟನಾ ಸಮಾರಂಭದ ನಂತರ ಎರಡು ದಿನಗಳಲ್ಲಿ ೬ ಗೋಷ್ಠಿಗಳು ನಡೆಯಲಿವೆ. ಕನ್ನಡ ವಿವಿಯ ಡಾ. ರಾಜ್ಕುಮಾರ್ ಅಧ್ಯಯನದ ಕೇಂದ್ರದ ನಿರ್ದೇಶಕ ಪ್ರೊ. ಕೆ.ಸಿ.ರೆಡ್ಡಿ, ಸಹ್ಯಾದ್ರಿ ಕಲಾ ಕಾಲೇಜಿನ ಡಾ. ಮೇಟಿ ಮಲ್ಲಿಕಾರ್ಜುನ್, ಡಾ. ಎಂ.ಜಿ. ಹೆಗಡೆ, ಶ್ರೀನಿವಾಸ ವಾಡಪ್ಪಿ ಸೇರಿದಂತೆ ೧೦ಕ್ಕೂ ಹೆಚ್ಚು ವಿಷಯ ತಜ್ಞರುಗಳು ವಿವಿಧ ವಿಷಯಗಳ ಮೇಲೆ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಬೇರೆ-ಬೇರೆ ಕಾಲೇಜುಗಳಿಂದ ಆಗಮಿಸಿರುವ ಆಯ್ದ ವಿದ್ಯಾರ್ಥಿಗಳು ಲೇಖನಗಳನ್ನು ಮಂಡಿಸಲಿದ್ದಾರೆ ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post