ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿಡಿ ರಾಜಕಾರಣ ಕರ್ನಾಟಕ ರಾಜ್ಯಕ್ಕೆ ದೊಡ್ಡ ಕಳಂಕ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಹಿಂದಿನಿಂದಲೂ ಇದೊಂದು ಕೆಟ್ಟ ಪದ್ದತಿಯಾಗಿದೆ. ರಮೇಶ್ ಜಾರಕಿಹೊಳಿಯವರು ಕೂಡ ಈ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ನಾನು ಕೂಡ ಒತ್ತಾಯಿಸುತ್ತೇನೆ. ಸಿಡಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಈ ದುಷ್ಕ್ರತ್ಯದ ಹಿಂದಿರುವವರ ಮೇಲೆ ಕ್ರಮಕ್ಕೆ ಒತ್ತಾಯಿಸುತ್ತೇನೆ ಎಂದರು.
ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇಶದ ಇತಿಹಾಸದಲ್ಲೇ ಇದೊಂದು ಅಭೂತಪೂರ್ವ ಬಜೆಟ್ ಆಗಿದ್ದು, ವಿರೋಧಿಗಳು ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ. ಬಡ ಮಧ್ಯಮ ವರ್ಗಕ್ಕೆ ತೆರಿಗೆ ಇಳಿಕೆ ಮಾಡಲಾಗಿದೆ. ಅತಿ ಶ್ರೀಮಂತರಿಗೆ ತೆರಿಗೆ ಹೆಚ್ಚಳ ಮಾಡಿ ಅದರ ಲಾಭವನ್ನು ಬಡವರಿಗೆ ಹಂಚಲಾಗಿದೆ. ನಾನು ನೀರಾವರಿ ಮಂತ್ರಿ ಇದ್ದಾಗ ಭದ್ರಾ ಮೇಲ್ದಂಡೆ ಯೋಜನೆ ಕಛೇರಿ ಉದ್ಘಾಟಿಸಿದ್ದೆ ಮತ್ತು ರಾಷ್ಟ್ರೀಯ ಯೋಜನೆಯಾಗಿ ಇದಕ್ಕೆ ಅನುದಾನ ನೀಡಬೇಕೆಂದು ಆಗ್ರಹಿಸಿದ್ದೆ. ಈಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಡಿ ಕೈಗೆತ್ತಿಕೊಂಡು 5300ಕೋಟಿ ರೂ.ಗಳನ್ನು ನಿಗದಿಪಡಿಸಿದ್ದಾರೆ. ಇದರಿಂದ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಒಂದು ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಕುಡಿಯುವ ನೀರಿನ ಸಮಸ್ಯೆಯೂ ಬಗೆಹರಿಯಲಿದೆ ಎಂದರು.
ವಿಐಎಸ್ಎಲ್ ಕಾರ್ಖಾನೆಗೆ ಸಂಬಂಧಿಸಿದಂತೆ ಪ್ರತಿಭಟನೆಯಲ್ಲಿ ಭಾಗವಹಿಸಲು ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ಬರುತ್ತಿರುವುದು ತಪ್ಪಲ್ಲ. ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಈ ಕಾರ್ಖಾನೆ ಉಳಿಸಲು ನಿರಂತರ ಶ್ರಮ ಪಟ್ಟಿದ್ದಾರೆ. ಕಾರ್ಖಾನೆಯ ಕಾರ್ಮಿಕ ಮುಖಂಡರು ಅನೇಕಬಾರಿ ದೆಹಲಿಗೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದ್ದಾರೆ. ಕಾರ್ಖಾನೆ ಉಳಿಸಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಆದರೂ ಕೂಡ ದೇಶದ 80 ರೋಗಗ್ರಸ್ತ ಕಾರ್ಖಾನೆಗಳನ್ನು ಮುಚ್ಚುವ ತೀರ್ಮಾನ ಕೇಂದ್ರ ಸಮಿತಿ ಕೈಗೊಂಡಿರುವುದರಿಂದ ವಿಐಎಸ್ಎಲ್ ಕೂಡ ಅದರಲ್ಲಿ ಸೇರಿದೆ. ಇದು ಭದ್ರಾವತಿಗೆ ಮಾತ್ರ ಸೀಮಿತವಲ್ಲ. ಆದರೂ ಕೂಡ ಉಳಿಸಲು ಆದಷ್ಟು ಪ್ರಯತ್ನವನ್ನು ಇನ್ನು ಮುಂದುವರೆಸಿದ್ದೇವೆ ಎಂದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















