ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡಿಗರ ಬದುಕಿಗೆ ಶಾಪವಾದ ಕಾಂಗ್ರೆಸ್ ಸರ್ಕಾರ ನಾಳೆ ಎರಡು ವರ್ಷದ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದು ಯಾವುದೇ ಸಾಧನೆ ಮಾಡದೆ ಅಭಿವೃದ್ಧಿ ಶೂನ್ಯ ಸರ್ಕಾರ ನಗೆಪಾಟಲಿಗೆ ಈಡಾಗಿದೆ ಎಂದು ಶಾಸಕ, ಮಾಜಿ ಗೃಹ ಮಂತ್ರಿ ಅರಗ ಜ್ಞಾನೇಂದ್ರ #Araga Jnanendra ಹೇಳಿದ್ದಾರೆ.
ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಅಪಪ್ರಚಾರ ಮಾಡಿ, ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರನ್ನು ಸುಲಿಗೆ ಮಾಡುತ್ತಿದೆ. ಜನನ ಮರಣ ಪತ್ರ ಪಡೆಯಲೂ ಕೂಡಾ 50ರೂ.ನೀಡಬೇಕಾಗಿದೆ. ನೋಂದಣಿ ಶುಲ್ಕವನ್ನು ಹೆಚ್ಚಿಸಲಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಭಾಗ್ಯ ನೀಡಿ, ಪುರುಷರಿಗೆ ದುಪ್ಪಟ್ಟು ಶುಲ್ಕ ಹೆಚ್ಚಳ ಮಾಡಿದೆ. ಕಾಲೇಜು ಶುಲ್ಕ ಹೆಚ್ಚಿಸಿದೆ. ಹಾಲು, ನೀರು, ವಿದ್ಯುತ್, ಡೀಸೆಲ್ ಎಲ್ಲದ ದರಗಳನ್ನು ಎರಡು ಬಾರಿ ಹೆಚ್ಚಿಸಿ ಜನರ ಬದುಕಿನ ಮೇಲೆ ಬರೆ ಎಳೆದಿದೆ ಎಂದು ಟೀಕಿಸಿದರು.
ಲಿಕ್ಕರ್ ಮೇಲೆ ಸತತವಾಗ ಬೆಲೆ ಏರಿಕೆ ಮಾಡುತ್ತಿದ್ದು ಹೆಂಡತಿಗೆ ಎರಡು ಸಾವಿರ ರೂ.ನೀಡಿ ಗಂಡನಿಂದ 4 ಸಾವಿರ ರೂ.ಯನ್ನು ಹೆಚ್ಚುವರಿಯಾಗಿ ಎಳೆದುಕೊಳ್ಳುತ್ತಿದೆ. ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದರು.
ಮೂಡಾ ಹಗರಣ, ವಾಲ್ಮೀಕಿ ಹಗರಣ ಪ.ಜಾ.ಪ.ಪಂ.ಗಳ ಹಣ ದುರ್ಬಳಕೆ, ರಾಜ್ಯಪಾಲರಿಗೆ ಅಪಮಾನ, ಕ್ಯಾಬಿನೆಟ್ ಸಚಿವರಿಂದಲೇ ಸ್ವತ: ಹನಿ ಟ್ರ್ಯಾಪ್ ಬಗ್ಗೆ ಸದನದಲ್ಲೇ ಹೇಳಿಕೆ ನೀಡಿದ್ದರೂ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟರೂ ಈ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಹೇಳಿದರು.
4.8ಲಕ್ಷ ಕೋಟಿ ರೂ.ಬಜೆಟ್ ಮಂಡಿಸಿದ ಈ ಸರ್ಕಾರ ಕ್ಯಾಪಿಟಲ್ ಇನ್ವೆಸ್ಟ್ ಮೆಂಟಿಗೆ ಹಣ ಹೂಡಿಲ್ಲ. ಬಜೆಟ್ ನಲ್ಲಿ ಘೋಷಿಸಿದ ಯಾವ ಅಭಿವೃದ್ಧಿ ಕಾರ್ಯಗಳಿಗೂ ಹಣ ಬಿಡುಗಡೆಯಾಗಿಲ್ಲ. ಕೆಲಸ ಮಾಡಿದ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗಿಲ್ಲ. ಪರ್ಸೆಂಟೇಜ್ ಇಲ್ಲದೆ ಯಾವ ಬಿಲ್ಲೂ ಪಾಸಾಗುತ್ತಿಲ್ಲ ಎಂದರು.
ಬೇರೆ ಬೇರೆ ರಾಜ್ಯಗಳ ಚುನಾವಣೆಗೆ ಕರ್ನಾಟಕ ಸರ್ಕಾರ ಎಟಿಎಂ ಆಗಿದೆ. ಪೌಷ್ಟಿಕಾಂಶ ಖರೀದಿಯಲ್ಲಿ 75 ಕೋಟಿ ರೂ.ಹಗರಣ, ಮೆಸ್ಕಾಂ, ಬೆಸ್ಕಾಂ ಸ್ಮಾಟ್ ಮೀಟರ್ ಖರೀಧಿಯಲ್ಲಿ 15 ಸಾವಿರ ಕೋ.ರೂ.ಹಗರಣ. ಈ ಗ್ಗೆ ಸದನದಲ್ಲಿ ಗಮನ ಸೆಳೆದರೂ ಸರ್ಕಾರ ಉತ್ತರ ನೀಡಿಲ್ಲ ಎಂದು ತಿಳಿಸಿದರು.
ಎಸ್.ಎಸ್ಸಿ, ಎಸ್ಟಿಗಳಿಗೆ ಮೀಸಲಿಟ್ಟ 26 ಸಾವಿರ ಕೋಟಿ ರೂ.ಗಳನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಲಾಗಿದೆ. ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತ 250 ಉರ್ದು ಶಾಲೆಗಳಿಗೆ, ಮುಸ್ಲಿಂ ಹಾಸ್ಟೇಲ್ ಹಾಗೂ ಮದರಸಾಗಳಿಗೆ ಕೋಟ್ಯಂತರ ರೂ.ಹಣ ಬಿಡುಗಡೆ ಮಾಡಿ ಎಳೆ ವಯಸ್ಸಿನ ಮಕ್ಕಳಲ್ಲಿ ಮತೀಯ ವಿಷ ಬೀಜ ಬಿತ್ತುತ್ತಿದ್ದಾರೆ. ಕನ್ನಡಿಗರ ತೆರಿಗೆ ಹಣ ಉರ್ದು ಶಾಲೆಗಳಿಗೆ ಯಾಕೆ ಎಂದು ಪ್ರಶ್ನಿಸಿದರು.
ಬಾಣಂತಿಯರ ಸಾವು ಹೆಚ್ಚಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲ. ವೈದ್ಯರ ನೇಮಕವಾಗಿಲ್ಲ. ಸುಳ್ಳು ಸಾಧನೆ ಹೇಳಲು ಪ್ರಚಾರಕ್ಕೆ ಕೋಟ್ಯಂತರ ರೂ.ಗಳನ್ನು ನೀಡುತ್ತಿದ್ದು ಖುರ್ಚಿಗಾಗಿ ಸ್ಪರ್ಧೆ ಏರ್ಪಟಿದೆ. ಜನರ ದಿಕ್ಕನ್ನು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಧರ್ಮದ ಆಧಾರದ ಮೇಲೆ ಶೇ.4ರಷ್ಟು ಮೀಸಲಾತಿ, ಹಿಂದೂ ದೇವಾಲಯಗಳ ಆಸ್ತಿ ವಕ್ಫ್ ಬೋರ್ಡ್ ಪಾಲು, ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಪಾಕಿಸ್ತಾನಿ ಧ್ವನಿಯಲ್ಲಿ ಮಾತನಾಡುತ್ತಾ ಇರುವ ಕಾಂಗ್ರೆಸ ನಾಯಕರು. ಪೋಲಿಸರ ಮೇಲೆ ಹಲ್ಲೆ ಮಾಡಿದವರ ವಿರುದ್ಧದ ಕೇಸ್ ಹಿಂಪಡೆಯುತ್ತಾರೆ. ಸ್ವತ: ಮುಖ್ಯ ಮಂತ್ರಿಗಳು ಐಪಿಎಸ್ ಅಧಿಕಾರಿಯ ಮೇಲೆ ಕೈ ಮಾಡುತ್ತಾರೆ. ಯುದ್ಧದ ಸಂದರ್ಭದಲ್ಲಿ ರಾಜ್ಯದ ಸ್ಲೀಪರ್ ಸೆಲ್ ಗಳನ್ನು ಹುಡುಕುವ ಪ್ರಯತ್ನ ಮಾಡಿಲ್ಲ. ಅವರ ಮಟ್ಟ ಹಾಕುವ ಪ್ರಯತ್ನ ಮಾಡಿಲ್ಲ. ಈ ಸರ್ಕಾರ ಆರ್ಥಿಕ ದಿವಾಳಿ ಅಂಚಿನಲ್ಲಿದ್ದು ಜನರ ಬದುಕನ್ನು ಹೈರಾಣ ಮಾಡಿದ್ದೇ ಕಾಂಗ್ರೆಸ್ನ ದೊಡ್ಡ ಸಾಧನೆಯಾಗಿದ್ದು, ಸಾಧನಾ ಸಮಾವೇಶ ಒಂದು ವಿಪರ್ಯಾಸ ಎಂದು ಲೇವಡಿ ಮಾಡಿದರು.
ದುಬಾರಿ ಜೀವನ ಅಭಿವೃದ್ಧಿ ಶೂನ್ಯ. ಇದುವೇ ಕಾಂಗ್ರೆಸ್ ಸರ್ಕಾರದ ಸಾಧನೆ. ಕರ್ನಾಟಕ ಲೂಟಿ ಕಾಂಗ್ರೆಸ್ ಡ್ಯೂಟಿ ಎಂಬ ಭಿತ್ತಿ ಪತ್ರವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್.ಅರುಣ್, ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಹರಿಕೃಷ್ಣ, ಕೆ.ವಿ.ಅಣ್ಣಪ್ಪ, ಸಿ.ಎಚ್.ಮಾಲತೇಶ್, ಚಂದ್ರಶೇಖರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post