ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೂರು ತಿಂಗಳ ಲೇಖಾನುದಾನಕ್ಕೆ ಕಾಂಗ್ರೆಸ್ ಪಕ್ಷ ಆರೋಪಗಳ ಸುರಿಮಳೆಗೈದು ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮಾಡಿದ್ದಾರೆ. ಇದು ಪೂರ್ವನಿಯೋಜಿತ ನಾಟಕ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದ್ದಾರೆ.
ಅವರು ಇಂದು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ನೂತನ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರದಲ್ಲಿ ಮೋದಿ ಸರ್ಕಾರ ಪಾರದರ್ಶಕ ಆಡಳಿತ ನೀಡಿದ್ದು, ಇದೇ ಮೊದಲ ಬಾರಿಗೆ 10 ವರ್ಷಗಳ ಶ್ವೇತ ಪತ್ರವನ್ನು ಸದನದಲ್ಲಿ ಮಂಡಿಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಹುಳುಕನ್ನು ಹುಡುಕುತ್ತಿದೆ. ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೈ ಡ್ರಾಮಾ ಮಾಡುತ್ತಿದ್ದಾರೆ. ಸಂಸದ ಸುರೇಶ್, ದೇಶ ವಿಭಜನೆಯ ಮಾತನಾಡಿದರೆ, ಅಣ್ಣ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡ ಶ್ವೇತ ಪತ್ರ ಹೊರಡಿಸಲಿ , ರಾಜ್ಯದ ಜನರಿಗೆ ನಿಜಸ್ಥಿತಿ ಗೊತ್ತಾಗಲಿ. ಭಾಗ್ಯದ ಹೆಸರಿನಲ್ಲಿ ಸರ್ಕಾರ ಖಜಾನೆ ಖಾಲಿ ಮಾಡಿ ಕುಳಿತಿದ್ದು, ಜನರ ಗಮನ ಬೇರೆಗಡೆ ಸೆಳೆಯಲು ಆರೋಪಿಸುತ್ತಿದ್ದಾರೆ ಎಂದರು.
Also read: ಶಿಕ್ಷಣ ಸಂಸ್ಥೆಗಳ ಸಮೀಪ ಗಾಂಜಾ ಮಾರಾಟ; ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ
ಪುರುಷ ಪ್ರಧಾನ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರಿಗೆ 34% ಮೀಸಲಾತಿ ನೀಡಿ, ಮಹಿಳೆಯರಿಗೆ ಅವಕಾಶ ನೀಡಿದವರು ಪ್ರಧಾನಿ ಮೋದಿಯವರು, ಅಬ್ದುಲ್ ಕಲಾಂ ಅವರಿಗೆ ಭಾರತ ರತ್ನ ನೀಡಿದವರು, ಓರ್ವ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದ್ದು ನಮ್ಮ ಬಿಜೆಪಿ. ಹಿಂದಿನಿಂದಲೂ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಗೌರವವನ್ನು ನೀಡುತ್ತಾ ಬಂದಿದೆ. ತಮ್ಮ ಮಾತೃ ಹೃದಯದ ಮೂಲಕ ಎಲ್ಲಾರ ವಿಶ್ವಾಸವನ್ನು ಗಳಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು, ಪಕ್ಷದ ಬೆಳವಣಿಗೆಗೆ ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು ಎಂದರು.
ಪ್ರಪಂಚದ ದೊಡ್ಡ ಪ್ರಜಾಪ್ರಭುತ್ವದ ಭಾರತದಲ್ಲಿ ನಾನು ಮೊದಲ ಬಾರಿಗೆ ಸಂಸದರಾದಾಗ ಪಾರ್ಲಿಮೆಂಟ್ನ ಅಧ್ಯಕ್ಷರಾಗಿ ಮೀರಾ ಕುಮಾರಿ, ವಿಪಕ್ಷೀಯ ನಾಯಕನಾಗಿ ಸುಷ್ಮಾ ಸ್ವರಾಜ್, ಆಡಳಿತ ಪಕ್ಷದ ನಾಯಕಿಯಾಗಿ ಸೋನಿಯಾ ಗಾಂಧಿ ಇದ್ದರು. ಮಹಿಳೆಯರು ಈ ದೇಶದಲ್ಲಿ ಎಲ್ಲಾ ರಂಗಗಳಲ್ಲಿ ಪ್ರಮುಖ ಪಾತ್ರ ವಹಿಸಿ ಆದರ್ಶ ಪ್ರಾಯರಾಗಿದ್ದಾರೆ ಎಂದರು.
ಈ ಬಾರಿ ಲೋಕಸಭೆಯಲ್ಲಿ ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನ ಸಿಗಲಿದೆ ಎಂದು ಈಗಾಗಲೇ ಪ್ರಧಾನಿಯವರು,ಈ ದೇಶದ ಜನರು ಆತ್ಮವಿಶ್ವಾಸ ಹೊಂದಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಭಾಗ್ಯ ಕೊಡಲಿ, ಆದರೆ ಭಾಗ್ಯಲಕ್ಷ್ಮೀ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ತೆರಿಗೆ ವಿನಾಯಿತಿ, ಗರ್ಭೀಣಿ ಮಹಿಳೆಯರಿಗೆ 6 ತಿಂಗಳ ರಜೆ, ಮಹಿಳಾ ಸ್ವಾವಲಂಬನೆಗೆ ಆರ್ಥಿಕ ನೆರವು ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದ್ದು, ಬಿಜೆಪಿ ಸರ್ಕಾರ ಎಂಬುವುದನ್ನು ಬಿಜೆಪಿ ಮಹಿಳಾ ಬಿಜೆಪಿ ಮೋರ್ಚಾ ಮನೆ ಮನೆಗೆ ತಲುಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಗಾಯಿತ್ರಿ ಮಲ್ಲಪ್ಪವರಿಗೆ ಅಧಿಕೃತವಾಗಿ ಘೋಷಿಸಲಾಯಿತು. ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಕು. ಮಂಜುಳಾ ಅವರು ಅವರಿಗೆ ಶಾಲು ಹೊದಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕರಾದ ಎಸ್.ಎನ್.ಚೆನ್ನಬಸಪ್ಪ, ಡಿ.ಎಸ್.ಅರುಣ್, ಪ್ರಮುಖರಾದ ಎಸ್.ದತ್ತಾತ್ರಿ, ಎಂ.ಬಿ.ಹರಿಕೃಷ್ಣ, ಮಾಲತೇಶ್, ಎಂ. ಶಂಕರ್,ಮಂಗಳಾ ನಾಗೇಂದ್ರ, ಜ್ಯೋತಿ ರಘು, ಶಿವರಾಜ್ ಹಾಗೂ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















