Read - 3 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂವಿಧಾನದ ದಾರಿಯೇ ಸರಿಯಾದ ಮತ್ತು ಸಮರ್ಥವಾದ ದಾರಿ ಎಂದು ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಹೆಚ್.ಎನ್. ನಾಗಮೋಹನ್ ದಾಸ್ ಹೇಳಿದರು.
ಅವರು ಇಂದು ಪ್ರೆಸ್ ಟ್ರಸ್ಟ್ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಇಂದು ಸಂವಿಧಾನವೇ ಸರಿಯಾದ ದಾರಿಯಾಗಿದೆ. ಸಂವಿಧಾನದ ಆಶಯಗಳು ಎಲ್ಲಾ ವರ್ಗದ ಎಲ್ಲಾ ಸ್ಥರದ ಜನರನ್ನು ತಲುಪಬೇಕಾಗಿದೆ. ನ್ಯಾಯಾಂಗ ಸೇರಿದಂತೆ ಶಾಸಕಾಂಗ, ಕಾರ್ಯಾಂಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಸಂವಿಧಾನವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ. ಎಚ್ಚರಿಕೆಯಿಂದ ಉಳಿಸಿಕೊಳ್ಳಬೇಕಾಗಿದೆ ಎಂದರು.

ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೂ ತಲುಪಿಸುವ ನಿಟಿನಲ್ಲಿ ತಾವು ಸಂವಿಧಾನ ಓದು ಹೆಸರಿನಲ್ಲಿ ರಾಜ್ಯಾದ್ಯಂತ ಅಭಿಯಾನವನ್ನು ಆರಂಭಿಸಿದ್ದೇನೆ. ಈ ಅಭಿಯಾನ ನನಗೆ ಸಮಾಧಾನ ತಂದಿದೆ. ಕಾಲೇಜು ವಿದ್ಯಾರ್ಥಿಗಳಿಗೆಂದು ಆರಂಭವಾದ ಸಂವಿಧಾನ ಓದು ಇಂದು ವಿದ್ಯಾರ್ಥಿಗಳು ಸೇರಿದಂತೆ ಮಹಿಳೆಯರು, ಮಠಾಧೀಶರು, ಹೀಗೆ ಎಲ್ಲಾ ವರ್ಗದ ಜನರನ್ನು ತಲುಪುತ್ತಿದೆ. ಮತ್ತು ತಲುಪಬೇಕು, ಎಲ್ಲಾ ದಾರಿಗಳ ಮೂಲಕ ಮುಂದುವರಿಯುವುದೇ ಸಂವಿಧಾನ. ಸಂವಿಧಾನದ ದಾರಿಯೇ ಇಂದು ಸಮರ್ಥವಾದ ದಾರಿ ಎಂದರು.
ಸಮಾಜ ಬದಲಾಗುತ್ತಿದೆ. ಸಮಸ್ಯೆ ಮತ್ತು ಸವಾಲುಗಳು ಸಆಗುತ್ತಲೇ ಇವೆ. ಅನಕ್ಷರಸ್ತರು, ಬಡವರು, ನಿರುದ್ಯೋಗಿಗಳು ಹೆಚ್ಚುತ್ತಲೇ ಇರುತ್ತಾರೆ. ಜೊತೆಗೆ ಕೃಷಿ ಕ್ಷೇತ್ರ ಕೃಶವಾಗಿದೆ. ರೈತರು ಆತ್ಮಹತ್ಯೆಯ ದಾರಿ ತುಳಿದಿದ್ದಾರೆ. ಭಯೋತ್ಪಾದನೆ ಭ್ರಷ್ಟಾಚಾರ, ಕೋಮುವಾದ, ಸಾಂಸ್ಕೃತಿಕ ದಿವಾಳಿತನ ಮುಂದುವರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನದ ಆಶಯಗಳು ಹೊಸ ಬೆಳಕನ್ನು ನೀಡುತ್ತವೆ ಎಂದರು.

ಸಂವಿಧಾನದ ತಿದ್ದುಪಡಿ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸಂವಿಧಾನವನ್ನು ಯಾವಾಗ, ಹೇಗೆ ಏಕೆ ತಿದ್ದುಪಡಿ ಮಾಡಬೆಕೆಂಬ ಅಂಶಗಳೂ ಇವೆ. ಅದರ ಮೂಲಭೂತ ಆಶಯಗಳಿಗೆ ಧಕ್ಕೆ ಆಗದಂತೆ ಸಂವಿಧಾನ ತಿದ್ದುಪಡಿ ಆಗಬೇಕು. ತಿದ್ದುಪಡಿಯನ್ನೇ ಮಾನದಂಡವಾಗಿಟ್ಟುಕೊಂಡು ಏನು ಬೇಕಾದರೂ ಮಾಡುವ ಹಾಗಿಲ್ಲ. ಸಂವಿಧಾನಕ್ಕೆ ತಿದ್ದುಪಡಿ ತಂದು ದೇಶವನ್ನು ಅಡವಿಡಲಾಗದು. ಸರ್ವಾಧಿಕಾರಿತನ ತರಲಾಗದು. ಮತಾಂಧತೆಯ ಕಾನೂನುಗಳನ್ನು ರೂಪಿಸಲಾಗದು. ಸಾಮಾಜಿಕ ಸಮಾನತೆಯನ್ನು ಅಳಿಸಲಾಗದು. ಮೂಲತತ್ವಗಳಿಗೆ ಅನುಗುಣವಾಗಿಯೇ ಸಂವಿಧಾನ ತಿದ್ದುಪಡಿಯಾಗಬೇಕು. ಆದರೆ ಹಾಗೆ ಆಗುತ್ತದೆಯೇ ಎಂಬುದು ಒಂದು ಪ್ರಶ್ನೆ ಎಂದರು.
ಮಾಧ್ಯಮ ಇಂದು ಪ್ರಬಲವಾಗಿದೆ. ಆದರೆ ನಿಜವಾದ ಮಾಧ್ಯಮ ಸೃಷ್ಟಿಯಾಗುತ್ತಿಲ್ಲ. ಮಾಲಿಕತ್ವದ ಹಂಗು ಇಲ್ಲಿ ಕಾಣಿಸತೊಡಗಿದೆ. ಗಂಭೀರವಾದ ಸವಾಲುಗಳಿಗೆ ಮಾಧ್ಯಮಗಳು ಉತ್ತರ ಕೊಡಲು ಹೆಣಗುತ್ತಿವೆ. ಮಾಲೀಕರ ಹಿಡಿತಲ್ಲಿರುವುದರಿಂದ ಜನಹಿತ ಕಾಪಾಡುವುದರಲ್ಲೂ ಕೆಲವು ಸಲ ಸೋಲು ಉಂಟಾಗುತ್ತದೆ. ಇಂತಹ ಸಂಕಷ್ಟಗಳನ್ನು ಎದುರಿಸಿಯೂ ಮಾಧ್ಯಮಗಳು ಸರ್ಕಾರದ ಅತಿರೇಕಗಳಿಗೆ ಬುದ್ಧಿ ಹೇಳಬೇಕಾಗುತ್ತದೆ. ಸರ್ಕಾರ ಮತ್ತು ಜನರ ನಡುವಿನ ಸೇತುವೆಯಾಗಬೇಕು. ಮುಗ್ಧ ಜನರ ತಬ್ಬಿಕೊಳ್ಳಬೇಕು. ಜನಸಾಮಾನ್ಯರ ಸಮಸ್ಯೆಗಳಿಗೆ ಉತ್ತರವಾಗಬೇಕು ಎಂದು ಕಿವಿಮಾತು ಹೇಳಿದರು.
ನ್ಯಾಯಾಂಗ ಬಗ್ಗೆಯೂ ಕೆಲವು ಅಪಸ್ವರಗಳು ಬರುತ್ತಿವೆಯಲ್ಲಾ ಎಂ ಪತ್ರಕರ್ತರ ಪ್ರಶ್ನೆಗೆ ಗಂಭೀರವಾಗಿ ಉತ್ತಿರಿಸಿದ ಅವರು, ಇದನ್ನು ಭಾಗಶಃ ಒಪ್ಪಿಕೊಳ್ಳುತ್ತೇನೆ. ಶಾಸಕಾಂಗ ಮತ್ತು ಕಾರ್ಯಾಂಗಗಳು ಈಗಾಗಲೇ ನಂಬಿಕೆಯನ್ನು ಕಳೆದುಕೊಂಡಿವೆ. ಉಳಿದಿರುವುದು ನ್ಯಾಯಾಂಗ. ಈ ನ್ಯಾಯಾಂಗ ಕೂಡ ತಪ್ಪಾಗಿ ನಡೆದುಕೊಂಡರೆ ಕಷ್ಟವಾಗುತ್ತದೆ. ಆದರೆ ನ್ಯಾಯಾಂಗಗಳು ಕೂಡ ತಮ್ಮ ತಪ್ಪುಗಳನ್ನು ತಿದ್ದಿಕೊಂಡ ಉದಾಹರಣೆಗಳಿವೆ. ಮುಖ್ಯವಾಗಿ ನ್ಯಾಯಮೂರ್ತಿಗಳಿಗೆ ನೈತಿಕತೆ ಮುಖ್ಯ ಎಂದರು.

ಮೀಸಲಾತಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕಾದುದು ನ್ಯಾಯವಾಗಿದೆ. ಆದರೆ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಎಂಬುದನ್ನು ಸಂವಿಧಾನದಲ್ಲಿ ಹೇಳಿಲ್ಲ. ಹಾಗಾಗಿಯೇ ಆರ್ಥೀಕವಾಗಿ ಹಿಂದುಳೀದವರಿಗೆ ಶೇ. 10ರಷ್ಟು ಮೀಸಲಾತಿ ನೀಡುವುದನ್ನು ನಾನು ಅಷ್ಟಾಗಿ ಒಪ್ಪುವುದಿಲ್ಲ ಆದರೆ ಸುಪ್ರೀಂ ಕೋರ್ಟ್ ಇದನ್ನು ಎತ್ತಿ ಹಿಡಿದಿದೆ. ಸುಪ್ರೀಂ ಕೋರ್ಟಿಗೆ ಇದನ್ನ ಪುನರ್ ಪರಿಶೀಲನೆ ಮಾಡುವಂತೆ ಅರ್ಜಿ ಹಾಕಲು ಅವಕಾಶವಿದೆ ಎಂದರು.
ನ್ಯಾಯಾಲಯದ ಕೇಸುಗಳು ವಿಳಂಬ ಆಗುತ್ತಿವೆ ಎಂಬ ಪ್ರಶ್ನಗೆ ಉತ್ತರಿಸಿದಿ ಅವರು, ನಿಜ. ಇದಕ್ಕೆ ಹಲವು ಕಾರಣಗಳಿವೆ. ಈಗ ಜನಸಂಖ್ಯೆ ಹೆಚ್ಚಿದೆ. ಜನರು ಬುದ್ಧಿವಂತರಾಗಿದ್ದಾರೆ. ತಮ್ಮ ಸಣ್ಣಪುಟ್ಟ ಸಮಸ್ಯೆಗಳಿಗೂ ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಅಗತ್ಯಕ್ಕೆ ತಕ್ಕಂತೆ ನ್ಯಾಯಾಧೀಶರುಗಳ ನೇಮಕ ಆಗಿಲ್ಲ. ಕೋರ್ಟ್ಗಳ ಸಂಖ್ಯೆಯೂ ಹೆಚ್ಚಿಲ್ಲ. ಸೌಲಭ್ಯಗಳೂ ಇಲ್ಲ. ಜೊತೆಗೆ ಬ್ರಿಟಿಷರ ಕಾಲದ ವ್ಯವಸ್ಥೆಯೇ ನಮ್ಮ ಮುಂದಿದೆ. ಸುಪ್ರೀಂ ಕೋರ್ಟ್ನಲ್ಲಿ ಪ್ರತಿ ವರ್ಷ ಸುಮಾರು 70 ಸಾವಿರ ಕೇಸ್ ಇತ್ಯರ್ಥವಾಗುತ್ತಿವೆ. ಹೈಕೋರ್ಟ್ ಮೂಲಕ ಸುಮಾರು 20 ಲಕ್ಷ ಕೇಸುಗಳು ವಿಲೇವಾರಿಯಾಗುತ್ತಿವೆ. ಸ್ಥಳೀಯ ಕೋರ್ಟುಗಳು ಒಂದು ಕೋಟಿಗೂ ಹೆಚ್ಚು ಕೇಸುಗಳನ್ನು ಬಗೆಹರಿಸುತ್ತದೆ. ಇಷ್ಟಾದರೂ 5ಕೋಟಿ ಕೇಸ್ ಬಾಕಿ ಇದೆ ಎಂದರು.
ವಕೀಲ ಶ್ರೀಪಾಲ್ ಮಾತನಾಡಿ, ನಾಗಮೋಹನ್ ದಾಸ್ ಅವರು 10 ವರ್ಷಗಳಲ್ಲಿ 40ಸಾವಿರ ತೀರ್ಪುನೀಡಿದ್ದಾರೆ. ಇಪ್ಪತ್ತೊಂದಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಸಂವಿಧಾನ ಓದು ಪುಸ್ತಕ ನಾಲ್ಕು ಭಾಷೆಗಳಲ್ಲಿ ಪ್ರಕಟವಾಗಿದ್ದು, ಐದು ವರ್ಷಗಳಲ್ಲಿ 20 ಲಕ್ಷ ಪ್ರತಿಗಳು ಖರ್ಚಾಗಿವೆ. 1000ಕ್ಕೂ ಹೆಚ್ಚು ಸಂವಿಧಾನ ಓದಿನ ಕಾರ್ಯಕ್ರಮ ಮಾಡಿದ್ದಾರೆ. 6 ಆಯೋಗಗಳ ವರದಿ ನೀಡಿದ್ದಾರೆ ಎಂದರು.
ಪತ್ರಿಕಾ ಸಂವಾದದಲ್ಲಿ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಪ್ರಮುಖರಾದ ನಾಗರಾಜ ನೇರಿಗೆ, ಸಂತೋಷ್ ಕಾಚಿನಕಟ್ಟೆ, ರಾಜಶೇಖರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Discussion about this post