ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂವಿಧಾನ ವಿರೋಧಿ ಹೋರಾಟದಿಂದಾಗಿ ಉದ್ದೇಶಪೂರ್ವಕವಾಗಿ ಅಶಾಂತಿ ಸೃಷ್ಟಿಸಿ ಶಿವಮೊಗ್ಗದ ಸಾರ್ವಜನಿಕರಿಗೆ ತೊಂದರೆ ಕೊಡಲು ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿತು.
ಮಾ.17ರ ಶುಕ್ರವಾರದಂದು ಜಿಹಾದಿ ಮತಾಂದ ಮನಸ್ಥಿತಿ ಇರುವ ಸಂಘಟನೆಯು ಸಂವಿಧಾನ ನೀಡಿರುವ ಹೋರಾಟದ ಹಕ್ಕಿನ ಷರತ್ತುಗಳನ್ನು ಉಲ್ಲಂಘಿಸಿದೆ. ಸಂವಿಧಾನ ವಿರೋಧಿ ಹೋರಾಟವನ್ನು ಮಾಡಿ ಸಮಾಜದ ಶಾಂತಿಯನ್ನು ಕೆಡಿಸಲು ಸಂಚು ರೂಪಿಸುವ ಉದ್ದೇಶದಿಂದ ಅಸಂವಿಧಾನಿಕವಾದ ಮಾರ್ಗವಾಗಿ ಹಾಗೂ ಅಧರ್ಮಿಯವಾಗಿ ಜಿಲ್ಲಾ ಕೇಂದ್ರವಾಗಿರುವ ಜಿಲ್ಲಾಧಿಕಾರಿಯ ಕಚೇರಿ ಆವರಣದಲ್ಲೇ ಆಜಾನ್ ಕೂಗಿರುವುದು ಅಕ್ಷಮ್ಯ ಅಪರಾಧವಾಗಿದೆ.
ಈ ಮನಸ್ಥಿತಿ ಇರುವ ಸಂಘಟನೆಯವರು ಪದೇ ಪದೇ ಈ ರೀತಿಯ ಘಟನೆಗಳನ್ನು ಉದ್ದೇಶಪೂರ್ವಕವಾಗಿ ಮಾಡಿ ಮಲೆನಾಡಿನಲ್ಲಿ ಅಶಾಂತಿ ಸೃಷ್ಟಿಸಲು ಈ ರೀತಿಯ ವರ್ತನೆ ಮಾಡುತ್ತಿದ್ದು, ಜಿಲ್ಲಾಡಳಿತ ಸೂಕ್ಷ್ಮವಾಗಿ ಗಮನಿಸಿ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು.
ಸದರಿ ಘಟನೆಗೆ ಸಂಬಂಧಿಸಿದಂತೆ ಅಧರ್ಮೀಯವಾಗಿ ನಡೆದ ಮತ್ತು ಈ ಘಟನೆಗೆ ಕುಮ್ಮಕ್ಕು ನೀಡಿದ ವ್ಯಕ್ತಿಗಳನ್ನು ಹಾಗೂ ಜಿಲ್ಲೆಯ ಶಕ್ತಿಕೇಂದ್ರವಾದ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಅಸಂವಿಧಾನಿಕವಾಗಿ ಆಜಾನ್ ಕೂಗಿದ ವ್ಯಕ್ತಿಯನ್ನು ಮತ್ತು ಕೂಗಿಸಿದ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಮತ್ತು ಸಂವಿಧಾನಕ್ಕೆ ಹಾಗೂ ಕಾನೂನಿಗೆ ಬೆಲೆ ಕೊಡದ ಗೌರವ ನೀಡದ ದೇಶ ವಿರೋಧಿಗಳನ್ನು ಕೂಡಲೇ ಜಿಲ್ಲಾಡಳಿತ ಗಡಿಪಾರು ಮಾಡಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕೆಂದು ಆಗ್ರಹ ಪಡಿಸಿದರು.
ಇದೇ ಸಂದರ್ಭದಲ್ಲಿ ಆಜಾನ್ ಕೂಗಿದ ಜಿಲ್ಲಾಡಳಿತದ ಆವರಣದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಗೋಮೂತ್ರ ಹಾಕಿ ಶುದ್ಧೀಕರಿಸಲು ಪ್ರಯತ್ನಿಸಿದರು. ಪೊಲೀಸರು ತಡೆಯಲು ಯತ್ನಿಸಿದ ಘಟನೆಯೂ ನಡೆಯಿತು.
ಈ ಸಂದರ್ಭದಲ್ಲಿ ಬಜರಂಗದಳದ ವಿಭಾಗ ಸಂಚಾಲಕ ರಾಜೇಶ್ಗೌಡ, ದೀನ್ದಯಾಳ್, ವಿಹೆಚ್ಪಿ ಜಿಲ್ಲಾಧ್ಯಕ್ಷ ವಾಸುದೇವ್, ಕಾರ್ಯದರ್ಶಿ ನಾರಾಯಣ್ ವರ್ಣೇಕರ್, ಪ್ರಮುಖರಾದ ರಮೇಶ್ಬಾಬು, ಅಂಕೂಶ್, ನಾಗೇಶ್, ಸುರೇಶ್ಬಾಬು, ನಟರಾಜ್, ಸಚಿನ್ರಾಯ್ಕರ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post