ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದೂಗಳ ಧಾರ್ಮಿಕ ಕ್ಷೇತ್ರದ ಬಗ್ಗೆ ಹಾಗೂ ಪುಣ್ಯಕ್ಷೇತ್ರ ಧರ್ಮಸ್ಥಳದ ಬಗ್ಗೆ ನಿರಂತರ ಅಪಪ್ರಚಾರ ಮಾಡುತ್ತಾ, ವೀರೇಂದ್ರ ಹೆಗ್ಗಡೆ #Virendra Heggade ಅವರಿಗೆ ಕೆಟ್ಟ ಹೆಸರು ತರುವ ಹುನ್ನಾರ ನಡೆಯುತ್ತಿದ್ದು, ಅದರ ವಿರುದ್ಧ ರಾಷ್ಟ್ರಭಕ್ತರ ಬಳಗದಿಂದ ಧರ್ಮಸ್ಥಳಕ್ಕೆ ಶಿವಮೊಗ್ಗದಿಂದ ಧರ್ಮರಕ್ಷಾ ಜಾಥಾ ಹಮ್ಮಿಕೊಂಡಿದ್ದೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದ್ದಾರೆ.
ಅವರು ಇಂದು ತಮ್ಮ ಸ್ವಗೃಹದಿಂದ ಧರ್ಮಸ್ಥಳಕ್ಕೆ ಧರ್ಮರಕ್ಷಾ ಜಾಥಾಕ್ಕೆ ಚಾಲನೆ ನೀಡಿ, ಸುದ್ಧಿಗಾರರೊಂದಿಗೆ ಮಾತನಾಡಿದರು.
ಧರ್ಮಸ್ಥಳ ದೇವಾಲಯವನ್ನು #Dharmasthala Temple ನಾವು ಪ್ರಾಣಕೊಟ್ಟಾದರೂ ಉಳಿಸಿಕೊಳ್ಳುತ್ತೇವೆ. ಹಿಂದೂಗಳಿಗೆ ಅದು ಪವಿತ್ರ ಪುಣ್ಯಕ್ಷೇತ್ರವಾಗಿದೆ. ಇದರ ವಿರುದ್ಧ ಷಡ್ಯಂತ್ರ ಮಾಡಿದವರಿಗೆ ದೇಶ-ವಿದೇಶಗಳಿಂದ ಹಣ ಹರಿದು ಬರುತ್ತಿದೆ. ಇದರ ಮೂಲ ಕಂಡುಹಿಡಿದು ಅಪಪ್ರಚಾರ ಮಾಡುವವರಿಗೆ ತಕ್ಕಪಾಠ ಕಲಿಸಲು ಎಸ್ಐಟಿ ತನಿಖೆ ಸಾಕಾಗುವುದಿಲ್ಲ. ಇದನ್ನು ಎನ್ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು.
ಸುಮಾರು 250ಕ್ಕೂ ಹೆಚ್ಚು ಕಾರುಗಳಲ್ಲಿ ಮತ್ತು 5 ಟಿಟಿ ವಾಹನಗಳಲ್ಲಿ ರಾಷ್ಟ್ರಭಕ್ತರು ಮತ್ತು ಪುಣ್ಯಕ್ಷೇತ್ರದ ಭಕ್ತರು ಧರ್ಮಸ್ಥಳಕ್ಕೆ ಹೊರಟಿದ್ದೇವೆ. ಧರ್ಮವನ್ನು ಉಳಿಸಲು ಕುತಂತ್ರಿಗಳ ಷಡ್ಯಂತ್ರವನ್ನು ಬಯಲು ಮಾಡಲು ವಿರೇಂದ್ರ ಹೆಗ್ಗಡೆಯವರಿಗೆ ಧೈರ್ಯತುಂಬಿ ನೈತಿಕ ಬೆಂಬಲ ವ್ಯಕ್ತಪಡಿಸಲು ಈ ಯಾತ್ರೆಯನ್ನು ಕೈಗೊಂಡಿದ್ದೇವೆ ಎಂದರು.
ಭೋವಿನಿಗಮದ ಅಧ್ಯಕ್ಷ ರವಿಕುಮಾರ್ ಅವರ ಭ್ರಷ್ಟಾಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಅವರೊಬ್ಬರೇ ಅಲ್ಲ, ಇಡೀ ರಾಜ್ಯ ಸರ್ಕಾರವೇ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಹಿಂದೆ ಭೋವಿ ವಾಲ್ಮೀಕಿ ನಿಗಮದ ಅಧಿಕಾರಿ ಪತ್ರಬರೆದು ಭ್ರಷ್ಟಾಚಾರದ ಬಗ್ಗೆ ಮಾಹಿತಿನೀಡಿ, ಆತ್ಮಹತ್ಯೆ ಮಾಡಿಕೊಂಡಿದ್ದರು. ನಮ್ಮ ಹೋರಾಟದ ಫಲವಾಗಿ ಮೂರು ದಿನಗಳ ಹಿಂದೆಯಷ್ಟೇ ಅವರ ಮಗನಿಗೆ ಸರ್ಕಾರಿ ಕೆಲಸ ದೊರಕಿದೆ. ದಲಿತರ, ಹಿಂದುಳಿದವರ ಹಣವನ್ನು ತಿನ್ನುವ ಈ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕಪಾಠ ಕಲಿಸುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಆಗುತ್ತದೆ. ಕೆಲವೇ ದಿನಗಳ ಹಿಂದೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು, ಈ ಸರ್ಕಾರ 60 ಪರ್ಸೆಂಟ್ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಬಹಿರಂಗ ಆರೋಪ ಮಾಡಿದರೂ ಇದರ ಬಗ್ಗೆ ಯಾವೋಬ್ಬ ಸರ್ಕಾರದ ಪ್ರತಿನಿಧಿ ಅಥವಾ ಸಚಿವರು ಪ್ರತಿಕ್ರಿಯಿಸಿಲ್ಲ. ಸುಳ್ಳು ಎಂದು ಕೂಡ ಹೇಳಿಲ್ಲ. ಆರೋಪ ಸುಳ್ಳಾದರೆ ಅವರ ಮೇಲೆ ಕ್ರಮ ಕೈಗೊಂಡಿಲ್ಲ. ಹಾಗಾದರೆ ಸರ್ಕಾರ ಭ್ರಷ್ಟಾಚಾರ ಒಪ್ಪಿಕೊಂಡ ಹಾಗೆಯೇ ಆಗಿದೆ ಎಂದರು.
ನನ್ನ ಮೇಲೆ ಆರೋಪ ಬಂದಾಗ ನಾನು ರಾಜೀನಾಮೆ ಕೊಟ್ಟು ತನಿಖೆಗೆ ಒಪ್ಪಿ ಕಳಂಕರಹಿತನಾಗಿ ಹೊರಗೆ ಬಂದಿದ್ದೆ. ಆದರೆ ಈ ಸರ್ಕಾರ ಅದನ್ನು ಮಾಡುತ್ತಿಲ್ಲ ಎಂದು ದೂರಿದರು. ಮೈಸೂರು ದಸರಾ ಉದ್ಘಾಟನೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post