ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಳಗಾಂ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ #D S Arun ಅವರು ಪವಿತ್ರ ಆಜಾನ್ ಕುರಿತು ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಕಾಂಗ್ರೆಸ್ ಪಕ್ಷದ ದಕ್ಷಿಣ ಬ್ಲಾಕ್ ಅದ್ಯಕ್ಷ ಕಲೀಂ ಪಾಷ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅರುಣ್ ಅವರ ಈ ಹೇಳಿಕೆ ಕೇವಲ ಅಲ್ಪಸಂಖ್ಯಾತ ಸಮುದಾಯಕ್ಕೆ ಮಾತ್ರವಲ್ಲ, ಧಾರ್ಮಿಕ ಸಹಿಷ್ಣುತೆಯನ್ನು ನಂಬುವ ಎಲ್ಲ ಸರ್ವಧರ್ಮೀಯ ನಾಗರಿಕರಿಗೆ ನೋವುಂಟುಮಾಡಿರುವ ವಿಷಯವಾಗಿದೆ.
ಆಜಾನ್ #Azan ಎಂದರೆ ಕೇವಲ ಮಸೀದಿಯಿಂದ ಕೇಳಿಬರುವ ಧ್ವನಿ ಅಲ್ಲ. ಅದು ಇಸ್ಲಾಮ್ ಧರ್ಮದಲ್ಲಿ ಮಾನವನನ್ನು ದೇವರ ಸ್ಮರಣೆಯತ್ತ ಆಹ್ವಾನಿಸುವ ಪವಿತ್ರ ಪ್ರಾರ್ಥನಾ ಕರೆ ಎಂದಿದ್ದಾರೆ. ಆಜಾನ್ ಮತ್ತು ನಮಾಜ್ ಪ್ರಾರ್ಥನೆಗಳು ದೇವರನ್ನು ಓಲೈಸಲು ಹೊರತು ಮನುಷ್ಯರನ್ನು ತೋರಿಸಲು, ಯಾರನ್ನಾದರೂ ಅವಮಾನಿಸಲು ಅಥವಾ ತೊಂದರೆಗೊಳಿಸಲು ಅಲ್ಲ. ಅದು ಆತ್ಮಶುದ್ಧಿ, ವಿನಮ್ರತೆ ಮತ್ತು ಶಾಂತಿಯ ಸಂಕೇತವಾಗಿದೆ. ಇಸ್ಲಾಮಿನಲ್ಲಿ ಮಾತ್ರವಲ್ಲ, ಸನಾತನ (ಹಿಂದೂ) ಧರ್ಮ, ಕ್ರೈಸ್ತ ಧರ್ಮ, ಸಿಖ್ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳಲ್ಲೂ ದೇವರನ್ನು ಆರಾಧಿಸುವುದು ಮಾನವ ಕುಲದ ಕಲ್ಯಾಣಕ್ಕಾಗಿ, ಪ್ರಕೃತಿಯ ಸಮತೋಲನಕ್ಕಾಗಿ ಮತ್ತು ಸಮಾಜದಲ್ಲಿ ಶಾಂತಿ, ಸಹೋದರತ್ವ ಉಳಿಯಲೆಂಬ ಉದ್ದೇಶದಿಂದಲೇ ನಡೆಯುತ್ತದೆ ಎಂದಿದ್ದಾರೆ.
ದೇವರ ಆರಾಧನೆಯ ಮೂಲ ಉದ್ದೇಶ ಮಾನವನನ್ನು ಅಹಂಕಾರದಿಂದ ದೂರಮಾಡಿ, ಮಾನವೀಯತೆಯತ್ತ ಕರೆದೊಯ್ಯುವುದಾಗಿದೆ. ಆಜಾನ್ನಲ್ಲಿ ಕೇಳಿಬರುವ “ಅಲ್ಲಾಹ್ ಅತಿದೊಡ್ಡವನು” ಎಂಬ ಘೋಷಣೆ ಈ ಜಗತ್ತಿನ ಎಲ್ಲ ಶಕ್ತಿಗಳಿಗಿಂತ ಸತ್ಯ, ನ್ಯಾಯ ಮತ್ತು ಮಾನವೀಯ ಮೌಲ್ಯಗಳೇ ಶ್ರೇಷ್ಠವೆಂಬ ಸಂದೇಶವನ್ನು ಸಾರುತ್ತದೆ.
ನಮಾಜ್ ಕಡೆಗೆ ಬನ್ನಿ, ಯಶಸ್ಸಿನ ಕಡೆಗೆ ಬನ್ನಿ” ಎಂಬ ಕರೆ ಮಾನವನನ್ನು ಶಾಂತಿ, ಶಿಸ್ತು ಮತ್ತು ನೈತಿಕ ಜೀವನದತ್ತ ಆಹ್ವಾನಿಸುತ್ತದೆ. ಫಜ್ರ್ ಆಜಾನ್ನಲ್ಲಿರುವ “ನಮಾಜ್ ನಿದ್ರೆಯಿಗಿಂತ ಶ್ರೇಷ್ಠ” ಎಂಬ ವಾಕ್ಯ ಜೀವನದಲ್ಲಿ ಜಾಗೃತತೆ, ಹೊಣೆಗಾರಿಕೆ ಮತ್ತು ಆತ್ಮಜ್ಞಾನವನ್ನು ಬೆಳೆಸುವ ಸಂದೇಶವಾಗಿದೆ. ಇಂತಹ ಪವಿತ್ರ, ಆಧ್ಯಾತ್ಮಿಕ ಮತ್ತು ಮಾನವೀಯ ಅರ್ಥ ಹೊಂದಿರುವ ಆಜಾನ್ ಕುರಿತು ಸಾರ್ವಜನಿಕ ವೇದಿಕೆಗಳಲ್ಲಿ ಹಗುರವಾಗಿ ಅಥವಾ ಅಸಮರ್ಪಕವಾಗಿ ಮಾತನಾಡುವುದು ಸರಿಯಲ್ಲ ಧರ್ಮವನ್ನು ವ್ಯಂಗ್ಯಕ್ಕಾಗಲಿ, ರಾಜಕೀಯ ಲಾಭಕ್ಕಾಗಲಿ ಬಳಸದೆ, ಶಾಂತಿ, ಸೌಹಾರ್ದತೆ ಮತ್ತು ಮಾನವೀಯತೆಯ ಸಂದೇಶವನ್ನು ಉಳಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.ಶಾಸಕ ಅರುಣ್ ಇದನ್ನು ಗಮನಿಸಲಿ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















