ಕಲ್ಪ ಮೀಡಿಯಾ ಹೌಸ್ |
ಶಿವಮೊಗ್ಗ |
ಮೊಬೈಲ್ ಗೀಳಿಗೆ ಸಿಲುಕಿರುವ ಆಧುನಿಕ ಯುವ ಸಮೂಹದಿಂದ ಭಾವನಾತ್ಮಕ ಸಂಬಂಧ ಕಣ್ಮರೆಯಾಗುತ್ತಿದೆ ಎಂದು ವಿಧಾನಪರಿಷತ್ತಿನ ಸದಸ್ಯರಾದ ಡಿ.ಎಸ್.ಅರುಣ್ ಆತಂಕ ವ್ಯಕ್ತಪಡಿಸಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ವತಿಯಿಂದ ಸೋಮವಾರ ಏರ್ಪಡಿಸಿದ್ದ ಅಂತಿಮ ವರ್ಷದ ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳ ‘ಗ್ರಾಜುಯಂಡ್ಸ್ ಡೇ – 2023’ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಪದವಿ ಸೇರಿದಂತೆ ಉನ್ನತ ಶಿಕ್ಷಣ ಪಡೆಯುವಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಪಾಲು ಪಡೆಯುತ್ತಿರುವುದು ಸಂತೋಷದ ಸಂಗತಿ. ಅಧ್ಯಯನದ ಜೊತೆಗೆ ಕೌಶಲ್ಯಾಧಾರಿತ ಬುದ್ದಿಮತ್ತೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವತ್ತ ಗಮನವಹಿಸಿ. ಭಾವನಾತ್ಮಕ ಸಂಬಂಧಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಎಂದು ಸಲಹೆ ನೀಡಿದರು.
Also read: ಆ.16 ಸಂಸದ ರಾಘವೇಂದ್ರ 50ನೇ ಜನ್ಮದಿನ: ಅರ್ಥಪೂರ್ಣ ಆಚರಣೆಗೆ ಸಿದ್ಧತೆ
ಉನ್ನತ ಶಿಕ್ಷಣದ ಉನ್ನತಿಕರಣಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪರಿಣಾಮಕಾರಿಯಾಗಿದೆ. ಬದಲಾವಣೆಗಳ ಅವಶ್ಯಕತೆಗೆ ತಕ್ಕಂತೆ ಅಧ್ಯಯನ ಕೈಗೊಳ್ಳಬಹುದಾಗಿದೆ. ಎನ್ಇಪಿ ಸರಿಯಿಲ್ಲ ಎಂದು ಪ್ರತಿಪಾದಿಸುವವರು ಎನ್ಇಪಿ ನೀಡುವ ಪೂರಕ ಅಂಶಗಳನ್ನು ಮೊದಲು ಸರಿಯಾಗಿ ತಿಳಿದುಕೊಳ್ಳಿ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮಾತನಾಡಿ, ಸಮಾಜ ನಮಗೆ ಬಹಳಷ್ಟು ನೀಡಿದ್ದು, ಸಮಾಜಕ್ಕೆ ನಾವು ಉತ್ತಮ ಕೊಡುಗೆ ನೀಡೊಣ. ಸಮಾಜಕ್ಕೆ ಅನೇಕ ದೊಡ್ಡ ಸಾಧಕರನ್ನ, ಪ್ರಜೆಗಳನ್ನು ನೀಡಿದ ಖ್ಯಾತಿ ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮಮತಾ.ಆರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲರಾದ ಹೆಚ್.ಎಂ.ಸುರೇಶ್, ಖಾಜೀಂ ಷರೀಫ್, ಪ್ರಾಧ್ಯಾಪಕರಾದ ಜಗದೀಶ್, ನಾಗರಾಜ್, ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಬಿಕಾಂ ಮತ್ತು ಬಿಬಿಎ ವಿಭಾಗಗಳ ಸುಮಾರು 400 ಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

