ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಶಕ್ತಿ ಸಮಾಜದ ಕಾರ್ಯಕಾರಿ ಸಮಿತಿಯ ಅಧ್ಯಕ್ಷೆ ಹೆಚ್. ಪಾರ್ವತಮ್ಮ ಅವರ ನೇತೃತ್ವದಲ್ಲಿ ಅ.10 ಮತ್ತು 11ರಂದು ಕೇದಾರಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಅವರ ಸಾನಿಧ್ಯದಲ್ಲಿ ಇಷ್ಠಲಿಂಗ ಮಹಾಪೂಜೆ ಹಾಗೂ ಧರ್ಮಸಭೆಯನ್ನು ಆಯೋಜಿಸಲಾಗಿದೆ ಎಂದು ಶಿವಶಕ್ತಿ ಸಮಾಜದ ನಿರ್ದೇಶಕ ಬಳ್ಳೇಕೆರೆ ಸಂತೋಷ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉತ್ತರಾಖಂಡ ಕೇದಾರಪೀಠದ ಶ್ರೀಗಳನ್ನು ಶಿವಮೊಗ್ಗಕ್ಕೆ ಕರೆಯಿಸಬೇಕೆಂಬುದು ಬಹಳ ದಿನಗಳ ಆಸೆಯಾಗಿತ್ತು. ಇದಕ್ಕಾಗಿ ನಮ್ಮ ಸಮಿತಿಯ ಅಧ್ಯಕ್ಷೆ ಹೆಚ್. ಪಾರ್ವತಮ್ಮ ಅವರ ಕೋರಿಕೆಯನ್ನು ಸ್ವೀಕರಿಸಿದ ಶ್ರೀಗಳು ಶಿವಮೊಗ್ಗಕ್ಕೆ ಬರಲು ಒಪ್ಪಿದ್ದಾರೆ. ಅ.11ರಂದು ಪಾರ್ವತಮ್ಮ ಅವರ ಎನ್.ಟಿ. ರಸ್ತೆಯಲ್ಲಿರುವ ನಿವಾಸ ಶ್ರೀ ಘಂಟಾಕರಣ ಭವನದಲ್ಲಿ ಬೆಳಿಗ್ಗೆ 8 ಗಂಟೆಗೆ ಇಷ್ಠಲಿಂಗಪೂಜೆ ಮತ್ತು ಧರ್ಮಸಭೆ ನಡೆಯಲಿದೆ ಎಂದರು.
ಬೆಳಿಗ್ಗೆ 8 ಗಂಟೆಗೆ ಇಷ್ಠಲಿಂಗಪೂಜೆ ನಡೆದರೆ, ಮಧ್ಯಾಹ್ನ 12 ಗಂಟೆಗೆ ಧರ್ಮಸಭೆ ನಡೆಯಲಿದೆ. ಇದರ ದಿವ್ಯಸಾನಿಧ್ಯವನ್ನು ಕೇದಾರ ಶ್ರೀಗಳು ವಹಿಸುವರು. ಹಾಗೆಯೇ ಬಾಳೆಹೊನ್ನೂರು ಶಾಖಾ ಮಠದ ಎಡೆಯೂರು ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮಿಗಳು, ಕಣ್ವಕುಪ್ಪೆ ಕ್ಷೇತ್ರ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ತಾವರೆಕೆರೆ ಶೀಲಮಠದ ಶ್ರೀ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ತರಿಕೆರೆ ತಾಲ್ಲೂಕು ಹುಣಸಘಟ್ಟದ ಶ್ರೀ ಗುರು ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು, ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿರುವರು ಎಂದರು.
ಇವರ ಜೊತೆಗೆ ಸಮಾಜದ ಹಿರಿಯ ಮುಖಂಡರಾದ ಹೆಚ್.ವಿ. ಮಹೇಶ್ವರಪ್ಪ, ಎಸ್.ಎಸ್. ಜ್ಯೋತಿಪ್ರಕಾಶ್ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸುತ್ತಾರೆ. ಜಿಲ್ಲಾ ವೀರಶೈವ ಜಂಗಮ ಅರ್ಚಕರ, ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದವರು ಕೂಡ ಈ ಕಾರ್ಯಕ್ಕೆ ಸಹಕಾರ ನೀಡುವರು ಎಂದರು.
ಅಂಬಾರಿ ಮೇಲೆ ಶ್ರೀಗಳ ಮೆರವಣಿಗೆ
ಧರ್ಮಸಭೆಯ ಹಿಂದಿನ ದಿನ ಅ.10ರಂದು ಮಧ್ಯಾಹ್ನ 4 ಗಂಟೆಗೆ ಕೇದಾರ ಶ್ರೀಗಳು ಪುರಪ್ರವೇಶ ಮಾಡುವರು. ಅವರನ್ನು ಶಿವಪ್ಪನಾಯಕ ವೃತ್ತದಲ್ಲಿ ಬರಮಾಡಿಕೊಳ್ಳುವುದು. ಅಲ್ಲಿಂದ ಪಾರ್ವತಮ್ಮನ ನಿವಾಸದವರೆಗೆ ಆನೆಯ ಮೇಲೆ ಅವರನ್ನು ಕೂರಿಸಿ ಮೆರವಣಿಗೆ ಮಾಡಲಾಗುವುದು. ಇದಕ್ಕಾಗಿ ಬೀರನಕೆರೆ ಮಠವನ್ನು ಸಂಪರ್ಕಿಸಿದ್ದು ಅವರು ಆನೆಯನ್ನು ಅಂಬಾರಿಗೆ ಕೊಡಲು ಒಪ್ಪಿದ್ದಾರೆ. ಅರಣ್ಯ ಇಲಾಖೆ ಸೇರಿದಂತೆ ಅಂಬಾರಿಯ ಮೆರವಣಿಗೆಗೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಒಪ್ಪಿಗೆ ಕೂಡ ಸಿಕ್ಕಿದೆ. ಕೇದಾರ ಶ್ರೀಗಳನ್ನು ಆನೆಯ ಮೇಲೆ ಮೆರವಣಿಗೆ ಮಾಡಬೇಕೆಂಬುದು ನಮ್ಮ ಹೆಬ್ಬಯಕೆಯಾಗಿತ್ತು. ಅದರಂತೆ ಅವರನ್ನು ಮೆರವಣಿಗೆ ಮಾಡಲಾಗುವುದು. ಅಂದು ಅವರು ಪಾರ್ವತಮ್ಮನವರ ಮನೆಯಲ್ಲಿ ತಂಗುವರು. ಮಾರನೇಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿವಶಕ್ತಿ ಸಮಾಜದ ಅಧ್ಯಕ್ಷೆ ಪಾರ್ವತಮ್ಮ, ಪದಾಧಿಕಾರಿಗಳಾದ ಮರುಳೇಶ್, ಉಮೇಶ್ ಹಿರೇಮಠ, ಲಿಂಗೇಗೌಡರು, ರತ್ನಾಮಂಜುನಾಥ್, ಸುನಂದ ಹಿರೇಮಠ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post