ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋಮು ಪ್ರಚೋದಿತ ಭಾಷಣದ ಆರೋಪದಲ್ಲಿ ತಮ್ಮ ವಿರುದ್ದ ಜಿಲ್ಲಾ ಪೊಲೀಸ್ ಇಲಾಖೆ ಎಫ್ ಐ ಆರ್ ದಾಖಲಿಸಿರುವುದಕ್ಕೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ತೀವ್ರ ಆಕ್ರೋಶ ಹೊರ ಹಾಕಿದ್ದಾರಲ್ಲದೆ, ಹಿಂದುತ್ವವನ್ನು ರಕ್ಷಣೆ ಮಾಡುವ ವಿಚಾರದಲ್ಲಿ ತಮ್ಮ ವಿರುದ್ದ ಇಂತಹ ನೂರು ಎಫ್ಐಆರ್ #FIR ಹಾಕಿದರೂ ಕೂಡ ಜಗ್ಗುವುದಿಲ್ಲ ಎಂದು ಸವಾಲು ಹಾಕಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಪೊಲೀಸ್ ಇಲಾಖೆಯಿಂದ ನನಗೆ ಎರಡು ಜಾಮೀನು ರಹಿತ ವಾರೆಂಟ್ ಬಂದಿವೆ. ಪೊಲೀಸರು ಸುಮೊಟೊ ಕೇಸ್ ಹಾಕಿದ್ದಾರೆ. ಕಾಂಗ್ರೆಸ್ ನಿಂದಲೋ ಅಥವಾ ಜಿಲ್ಲಾ ಪೊಲೀಸ್ ಇಲಾಖೆಯ ಸ್ವಯಂ ಪ್ರೇರಣೆಯೋ ಯಾರ ಕುಮ್ಮಕ್ಕಿನಿಂದ ಕೇಸ್ ದಾಖಲಾಗಿದೆ ಎಂಬ ಬಗ್ಗೆ ತಿಳಿದಿಲ್ಲ. ಇಷ್ಟಕ್ಕೂ ನಾನು ಏನು ತಪ್ಪು ಮಾಡಿದ್ದೇನೆ? ಸಾವಿರಾರು ವರ್ಷದ ಹಿಂದಿನ ಎಲ್ಲ ಆಸ್ತಿಯನ್ನು ವಕ್ಫ್ ಎಂದು ನಮೂದು ಮಾಡಲಾಗಿದೆ. ಇದನ್ನು ಪ್ರಶ್ನಿಸಿ ರೈತರು ಹಾಗೂ ಹಿಂದೂ ದೇವಾಲಯಗಳ ಪರವಾಗಿ ಮಾತನಾಡಿದ್ದು ತಪ್ಪಾ ಎಂದು ಕಿಡಿಕಾರಿದರು.
ವಕ್ಪ್ ವಿರುದ್ದ ನಾವೆಲ್ಲ ಮಾತನಾಡಿದ ಬಳಿಕ ಸರ್ಕಾರ ನೋಟಿಸ್ ಕೊಟ್ಟ ಎಲ್ಲಾ ಪ್ರಕರಣಗಳಲ್ಲಿ ಹಿಂತೆಗೆದುಕೊಂಡಿದ್ದೇವೆ ಎಂದು ಹೇಳಿದೆ. ಆದರೆ ಕಲುಬುರಗಿಯ ಆಳಂದ ತಾಲೂಕಿನ ಬೀರಲಿಂಗೇಶ್ವರ ದೇವಸ್ಥಾನವನ್ನು ಮಾತ್ರ ವಕ್ಫ್ ನಿಂದ ಬಿಡಿಸಿಕೊಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆದೇಶ ನೀಡಿದೆ. ಅದು ಬಿಟ್ಟರೆ ರಾಜ್ಯದ ಎಲ್ಲಿಯೂ ವಕ್ಪ್ ಒತ್ತುವರಿ ಪ್ರಕರಣವನ್ನು ಹಿಂತೆಗೆದುಕೊಂಡ ಉದಾಹರಣೆ ಇಲ್ಲ. ಇದೇ ಕಾರಣಕ್ಕೆ ನಾನು ರಾಜ್ಯದ ಜನ ದಂಗೆ ಏಳಬಹುದು ಎಂದಿದ್ದೆ. ಮುಸ್ಲಿಂರ ವಿರುದ್ದ ದಂಗೆ ಏಳಬಹುದು ಎಂದು ಎಚ್ಚರಿಕೆ ನೀಡಿದ್ದೆ. ಅದಕ್ಕೆ ಕೇಸ್ ಹಾಕಿದ್ದಾರೆ. ಆದರೆ ಖರ್ಗೆ ಮೇಲೆ ಯಾಕೆ ಕೇಸ್ ಹಾಕಿಲ್ಲ ಎಂದು ಪ್ರಶ್ನಿಸಿದರು
Also read: ಮೈಸೂರು | ಗೊಮ್ಮಟಗಿರಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ | 4 ದಿನ ಜಾತ್ರಾ ಮಹೋತ್ಸವ
ಇನ್ನು ಬಾಂಗ್ಲಾ ವಿಮೋಚನಾ ಚಳವಳಿ ಸಮಯದಲ್ಲಿ ಅದೇ ಮುಸಲ್ಮಾನರಿಗೆ ಇತರೆ ಮುಸಲ್ಮಾನರು ಹೊಡೆಯುತ್ತಿದ್ದ ಸಮಯದಲ್ಲಿ ಯಾರೂ ಇರಲಿಲ್ಲ. ಅವರಿಗೆ ಇಸ್ಕಾನ್ ಊಟ ಹಾಕುತ್ತಾ ಬಂದಿದೆ. ಅದನ್ನೇ ಪ್ರಸ್ತಾಪಿಸಿ, ನಾನು ಅನ್ನ ಹಾಕಿದವರ ಮನೆಗೆ ಕನ್ನ ಹಾಕುವವರು ಎಂದಿದ್ದೆ. ಇದರಲ್ಲಿ ತಪ್ಪಿಲ್ಲ. ಜೈಲಿನಲ್ಲಿರುವ ಸಂತನ ಬಿಡುಗಡೆಗೆ ಪ್ರಯತ್ನಿಸಿದ ವಕೀಲನನ್ನು ತೀವ್ರ ಹಲ್ಲೆ ಮಾಡಿದ್ದಾರೆ. ಇದನ್ನು ಖಂಡಿಸಿದ್ದೆ. ಬಾಂಗ್ಲಾ ಮುಸಲ್ಮಾನರ ಬಗ್ಗೆ ಮಾತನಾಡಿದರೆ ಕಾಂಗ್ರೆಸ್, ಎಸ್ಪಿ ಹಾಗೂ ಎಸ್ಡಿಪಿಐ ಅವರಿಗೆ ಏನು ಸಮಸ್ಯೆ ಎಂದು ಪ್ರಶ್ನಿಸಿದ ಅವರು, ಈಗಲೂ ನಾನು ಬಾಂಗ್ಲಾ ಮುಸಲ್ಮಾನರ ರಾಕ್ಷಸಿ ಕೃತ್ಯವನ್ನು ಖಂಡಿಸುತ್ತೇನೆ. ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯುವುದಿಲ್ಲ. ಕೇಸ್ಗಳಿಗೆ ಹೆದರುವುದಿಲ್ಲ. ಬಾಂಗ್ಲಾ ಮುಸಲ್ಮಾನರ ಪರ ಯಾರೂ ನಿಲ್ಲಬಾರದು ಎಂದರು.
ಕಾನೂನುಬದ್ಧವಾಗಿ ಕೆಲಸ ಮಾಡುತ್ತೇನೆ. ಎಸ್ಪಿ ಅವರು ನಾನು ನೀಡಿರುವ ಹೇಳಿಕೆಯನ್ನು ನೋಡಲಿ. ಅಶಾಂತಿ ನಿರ್ಮಿಸುವ ಪ್ರಯತ್ನ ಮಾಡಿಲ್ಲ. ಆದರೂ ಅವರು ಯಾರನ್ನೊ ತೃಪ್ತಿಪಡಿಸಲು ಕೇಸ್ ಹಾಕಿದ್ದಾರೆ. ಇದಕ್ಕೆ ಯಾರು ಪ್ರಚೋದನೆ ನೀಡಿದ್ದಾರೆ. ನಾನು ಇದೇ ರೀತಿ ಮಾತನಾಡುತ್ತೇನೆ. ದೇಶ, ಧರ್ಮದ್ರೋಹ ಮಾಡುವವರ ವಿರುದ್ದ ನಿರಂತರ ಹೋರಾಟ ಮಾಡುತ್ತೇನೆ ಎಂದು ಗುಡುಗಿದರು.
ಇದೇ ವೇಳೆ ಹಿಂದುತ್ವ ಎನ್ನುವುದು ರೋಗ ಎಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ಅವರ ಪುತ್ರಿ ಇಲ್ತಿಜಾ ಮಸ್ತಿ ಹೇಳಿಕೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಹಿಂದುತ್ವ ರೋಗ ಎನ್ನುವ ಮಟ್ಟಿಗೆ ಮಾತನಾಡುತ್ತಿದ್ದಾರೆ. ಹಾಗಾದ್ರೆ ಇಸ್ಲಾಂ ಅಂದ್ರೆ ಎನೇನ್ನಬೇಕು? ಇದನ್ನು ಒಬ್ಬ ಮುಸಲ್ಮಾನ ಅಥವಾ ಕಾಂಗ್ರೆಸ್ ನಾಯಕರೂ ಖಂಡಿಸಲಿಲ್ಲ. ಇದನ್ನೆ ಮುಸ್ಲಿಂ ಸಮುದಾಯದ ಬಗ್ಗೆ ನೀಡಿದ್ದರೆ ದೇಶ ಹೊತ್ತಿ ಉರಿಯುತ್ತಿತ್ತು ಎಂದು ಈಶ್ವರಪ್ಪ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಲಿಂಗಯ್ಯ ಶಾಸ್ತ್ರಿ, ಪಾಲಿಕೆ ಮಾಜಿ ಇ. ವಿಶ್ವಾಸ್, ರಾಷ್ಟ್ರ ಭಕ್ತ ಬಳಗದ ಮುಖಂಡರಾದ ಬಾಲು, ಜಾದವ್, ಅರ್ಚಕರಾದ ರುದ್ರಯ್ಯ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















