ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಮಿಳು ಜನರು ನಂಬಿಕಸ್ಥ ಶ್ರಮಿಕರಾಗಿದ್ದು, ಕರ್ನಾಟಕದ ಜನತೆ ಅವರಿಗೆ ಅತ್ಯಂತ ಗೌರವ ನೀಡಿದ್ದಾರೆ. ಅವರು ಕೂಡ ಕನ್ನಡಿಗರಾಗಿಯೇ ಇಲ್ಲಿ ಬೆಳೆದಿದ್ದು, ತಮಿಳುನಾಡು ಮತ್ತು ಕರ್ನಾಟಕದ ರಾಮಸೇತುವಿನಂತೆ ಇಲ್ಲಿ ವಾಸವಾಗಿದ್ದಾರೆ. ದೇಶ ಕಟ್ಟಲು ಎಲ್ಲರೂ ಬಿಜೆಪಿಯನ್ನು ಬೆಂಬಲಿಸಿ ಸುಭದ್ರ ಭಾರತ ಕಟ್ಟಬೇಕು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ Annamalai ಹೇಳಿದ್ದಾರೆ.
ಅವರು ಇಂದು ನಗರದ ಎನ್ಇಎಸ್ ಮೈದಾನದಲ್ಲಿ ಬಿಜೆಪಿ ನಗರ ವತಿಯಿಂದ ಹಮ್ಮಿಕೊಂಡಿದ್ದ ತಮಿಳು ಬಾಂಧವರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಈಶ್ವರಪ್ಪನವರು ಬಿಜೆಪಿ ಹೈಕಮಾಂಡ್ಗೆ ಪತ್ರ ಬರೆದು ಕಾರ್ಯಕರ್ತನಿಗೆ ಅಭ್ಯರ್ಥಿಯನ್ನಾಗಿ ಮಾಡುವಂತೆ ಹೇಳಿದ್ದಾರೆ. ಅದರಂತೆ ಚನ್ನಬಸಪ್ಪನವರು ಅಭ್ಯರ್ಥಿಯಾಗಿದ್ದಾರೆ. ಸಂಪೂರ್ಣ ಬಹುಮತ ಬಂದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಆದ್ದರಿಂದ ಕನಿಷ್ಠ 130 ಸ್ಥಾನ ಬಿಜೆಪಿ ಈ ಬಾರಿ ಗೆಲ್ಲಲೇಬೇಕು. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.

Also read: ಆಮಿಷಗಳಿಗೆ ಒಳಗಾಗದೆ ತಮಗೆ ಸೂಕ್ತವೆನಿಸುವ ಅಭ್ಯರ್ಥಿಗೆ ಮತ ನೀಡಿ: ರಾಹುಲ್ ಶರಣಪ್ಪ ಕರೆ
ಶಾಸಕ ಈಶ್ವರಪ್ಪ MLA Eshwarappa ಮಾತನಾಡಿ, ಒಬ್ಬ ನಿವೃತ್ತ ಐಎಸ್ ಐಪಿಎಸ್ ಅಧಿಕಾರಿ ಸಿಂಗಂ ಎಂದೇ ಖ್ಯಾತರಾದ ಅಣ್ಣಾಮಲೈ ಅವರು ಮೋದಿಯವರ ನಾಯಕತ್ವ ಮತ್ತು ಅವರ ದೂರದೃಷ್ಟಿ ನೋಡಿ ಒಂದು ಸ್ಥಾನವೂ ಇಲ್ಲದ ತಮಿಳುನಾಡಿನಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನಾಲ್ಕು ಎಂಎಲ್ಎಗಳನ್ನು ಗೆಲ್ಲಿಸಿ ಈಗ ತಮಿಳುನಾಡಿನಲ್ಲಿ ಪಕ್ಷವನ್ನು ಭದ್ರವಾಗಿ ಕಟ್ಟುತ್ತಿದ್ದಾರೆ. ಶಾಸಕನಾಗಿ ನಾನು ಎಲ್ಲಾ ಸಮುದಾಯಗಳಿಗೂ ಅನುದಾನ ನೀಡಿದ್ದೇನೆ ಬಿಜೆಪಿ ಸರ್ಕಾರ ಬಂದಾಗ ಮೊಟ್ಟಮೊದಲು ತಿರುವಳ್ಳವರ್ ಪ್ರತಿಮೆಯನ್ನು ಕರ್ನಾಟಕದಲ್ಲಿ ಸ್ಥಾಪಿಸಿ ಸರ್ವಜ್ಞ ಪ್ರತಿಮೆಯನ್ನು ತಮಿಳುನಾಡಿನಲ್ಲಿ ಸ್ಥಾಪಿಸಿ ಎರಡೂ ರಾಜ್ಯಗಳ ಜನರು ಸಹೋದರರಂತೆ ಶಾಂತಿಯಿಂದ ಬಾಳಲು ಬಿಎಸ್ವೈ ಸರ್ಕಾರ ಕ್ರಮ ಕೈಗೊಂಡಿತ್ತು. ತಮಿಳು ಕನ್ನಡಿಗರ ಸಂಗಮಕ್ಕೆ ಇದು ದಾರಿಯಾಯಿತು. ಚನ್ನಬಸಪ್ಪನವರು ಕೂಡ ಶಿವಮೊಗ್ಗದ ನಗರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು, ದೇಶ ಮತ್ತು ಹಿಂದು ಧರ್ಮದ ಕಟ್ಟಾಳುವಾದ ಅವರನ್ನು ಬೆಂಬಲಿಸಿ ನನಗಿಂತ ಹೆಚ್ಚಿನ ಲೀಡಿನಲ್ಲಿ ಗೆಲ್ಲಿಸಬೇಕು. ಅವರು ಗೆದ್ದರೆ ನಾನೇ ಗೆದ್ದ ಹಾಗೆ ನಾವೆಲ್ಲರೂ ಭಾರತೀಯರು. ರಾಷ್ಟ್ರಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದರು.

ತಮಿಳ್ ಸಮಾಜದ ಮುಖಂಡರಾದ ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿ, ಬಿಎಸ್ವೈ ಮತ್ತು ಕೆ.ಎಸ್. ಈಶ್ವರಪ್ಪ ಇಬ್ಬರೂ ಶಿವಮೊಗ್ಗ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಮಾಡಿದ್ದು, ತಮಿಳು ಸಮಾಜಕ್ಕೆ ಮೊದಲಿನಿಂದಲೂ ಅನೇಕ ಅನುದಾನ ನೀಡುತ್ತಾ ಬಂದಿದ್ದಾರೆ. ನಾನು ಸಾಯುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ ಮತ್ತು ಬಿಜೆಪಿಯನ್ನು ಬೆಂಬಲಿಸುತ್ತೇನೆ. ತಮಿಳು ಸಮಾಜಕ್ಕೆ ಈ ಇಬ್ಬರು ನಾಯಕರ ಋಣವಿದೆ. ಸಮಾಜ ಬಿಜೆಪಿಯನ್ನು ಬೆಂಬಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ನಾಗರಾಜ್, ಜ್ಞಾನೇಶ್ವರ್, ಮೇಯರ್ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಕುಲದೀಪ್ ಸಿಂಗ್, ತಮಿಳುಮುಖಂಡರಾದ ಏಳುಮಲೈ,ಭೂಪಾಲ್ ರಾಜೇಂದ್ರ, ಅರುಣಗಿರಿ, ಬೇಲೂರು ರವಿ, ಶಿವಕುಮಾರ್, ದೊರೆಚಿನ್ನಪ್ಪ, ಮಂಜುನಾಥ್ ಮೊದಲಾದವರಿದ್ದರು.










Discussion about this post