ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈತರು ಸಮಗ್ರ ಕೃಷಿ ಅಳವಡಿಕೆಯೊಂದಿಗೆ ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಸಿ. ವಾಸುದೇವಪ್ಪ ಹೇಳಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ಮಾ.17 ರಿಂದ 20 ರವರೆಗೆ ನವುಲೆಯ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಲಾಗಿರುವ ಕೃಷಿ ಮತ್ತು ತೋಟಗಾರಿಕೆ ಮೇಳದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಹೊಸ ಆವಿಷ್ಕಾರಗಳು, ವೈಜ್ಞಾನಿಕತೆ, ವಿವಿಧ ತಳಿಗಳು, ಕೀಟ, ರೋಗ ನಿಯಂತ್ರಣ, ಮಣ್ಣು ನಿರ್ವಹಣೆ, ಸಾವಯವ ಕೃಷಿ ಜೊತೆಗೆ ಸಮಗ್ರ ಕೃಷಿ ಪರಿಚಯವನ್ನು ಈ ಕೃಷಿ ಮೇಳ ಮಾಡಿಕೊಡುತ್ತಿದೆ. ಮೊದಲು ಶಿವಮೊಗ್ಗದಲ್ಲಿ ಎಲ್ಲಿ ನೋಡಿದರಲ್ಲಿ ಭತ್ತದ ಹಸಿರು ಕಾಣುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಲಾಭದ ಉದ್ದೇಶದಿಂದ ಅಡಿಕೆ ಮತ್ತು ಪ್ಲಾಂಟೇಷನ್ ಕಡೆ ವಾಲುತ್ತಿದ್ದು, ಆಹಾರ ಧಾನ್ಯ ನಿರ್ಲಕ್ಷಿಸಲಾಗುತ್ತಿದೆ. ಅಡಿಕೆಗೆ ಮೌಲ್ಯವರ್ಧನೆ ಮಾಡಲು ಅನೇಕ ಅವಕಾಶ ಇರುವುದರಿಂದ ಹೆಚ್ಚಿನ ಬೇಡಿಕೆ ಇದ್ದೇ ಇರುತ್ತದೆ.
ಈಗ ತೋಟಗಾರಿಕಾ ಬೆಳೆಗಳು ಮುಂಚೂಣಿಯಲ್ಲಿದ್ದು 333 ಬಿಲಿಯನ್ ಟನ್ಗಳಷ್ಟು ತೋಟಗಾರಿಕೆ ಉತ್ಪನ್ನವಾಗುತ್ತಿದೆ. ಪ್ರತಿ ಮನೆಗಳಲ್ಲಿ ಹಣ್ಣು ಹಂಪಲುಗಳನ್ನು ಇದರಿಂದಾಗಿ ಕಾಣಬಹುದಾಗಿದೆ.
ರೈತರ ಉತ್ಪಾದನೆಗೆ ತಕ್ಕ ಮಾರುಕಟ್ಟೆ ವ್ಯವಸ್ಥೆ ಆಗಬೇಕು. ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು ಜೊತೆಗೆ ಸಮಗ್ರ ಕೃಷಿ ಬಗ್ಗೆ ಗಮನ ಹರಿಸಬೇಕು. ಯಾವುದೇ ಉತ್ಪನ್ನವನ್ನು ಮೌಲ್ಯವರ್ಧಿಸುವ ಕುರಿತು ಗಮನ ಹರಿಸಬೇಕು. ಮೌಲ್ಯ ಕೊಂಡಿ ವ್ಯವಸ್ಥೆಯನ್ನು ಅಳವಡಿಕೊಳ್ಳವುದರೊಂದಿಗೆ ಶೇಖರಣೆಗೆ ಹೆಚ್ಚಿನ ಒತ್ತು ನೀಡಿ, ವ್ಯಾವಹಾರಿಕ ಜ್ಞಾನ ಇಟ್ಟುಕೊಂಡು ಬೆಳೆಗಳನ್ನು ಬೆಳೆಯಬೇಕು.
ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ಹಲವಾರು ಪ್ರಯತ್ನಗಳು ಆಗುತ್ತಿವೆ. ಎನ್ಇಪಿ ಯಿಂದ ತಾಂತ್ರಿಕ ವಿದ್ಯಾರ್ಥಿಗಳಿಗೆ ಆಗುವ ಅನಕೂಲಗಳ ಬಗ್ಗೆ ಚಿಂತನೆ ನಡೆಸಬೇಕು. ಸಂಶೋಧನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದರು.
ರೈತ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಕಾಶ್ ಮಂಚಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಂತ್ರಿಕತೆ ಉತ್ತುಂಗಕ್ಕೇರುತ್ತಿದೆ. ಸಂಪನ್ಮೂಲ ಹೆಚ್ಚಿದೆ, ಆದರೂ ರೈತರ ಬೆಳೆಗೆ ಉತ್ತಮ ಮಾರುಕಟ್ಟೆ ಇಲ್ಲದೆ ಕೃಷಿ ಉತ್ಪನ್ನಗಳ ಮಾರಾಟ ಕಡಿಮೆಯಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕೃಷಿ ಮೇಳ ಮತ್ತು ಮಾರುಕಟ್ಟೆಯಲ್ಲಿ ರೈತರ ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆ ಬರುವಂತೆ ಮಾಡಿ ಅವರ ಅಂತಃಶಕ್ತಿ ವೃದ್ದಿಸುವ ಕೆಲಸ ಆಗಬೇಕು.
ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಮಣ್ಣಿನ ಮಹತ್ವ ಹಾಗೂ ಮಣ್ಣಿನಲ್ಲಿನ ಸೂಕ್ಷ್ಮ ಜೀವಿಯ ಬಗ್ಗೆ ರೈತರಿಗೆ ಜ್ಞಾನ ನೀಡಬೇಕು. ಶೇ.83 ರಷ್ಟು ಅತಿ ಸಣ್ಣ ರೈತರಿದ್ದು, ಸ್ವಲ್ಪ ಭೂಮಿಯಲ್ಲಿ ಹೆಚ್ಚು ಬೆಳೆ ಬೆಳೆಯುವ, ಸಾವಯ ಕೃಷಿ ಬಗ್ಗೆ ಹೆಚ್ಚಿನ ಗಮನ ನೀಡುವಂತಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಆರ್.ಸಿ ಜಗದೀಶ್ ಮಾತನಾಡಿ, ಪ್ರಸಕ್ತ ಸಾಲನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಘೋಷಿಸಿದ್ದು, ಅತ್ಯಂತ ಮಹತ್ವದ ವರ್ಷವಾಗಿದೆ. ನೈಸರ್ಗಿಕ, ಸಾವಯವ ಕೃಷಿ, ಕೃಷಿ ತಾಂತ್ರಿಕತೆ, ಗೊಬ್ಬರ, ಸಸಿ ಸೇರಿದಂತೆ ಒಂದೇ ಸೂರಿನಡಿ ರೈತರಿಗೆ ಅಗತ್ಯವಾದ ಎಲ್ಲ ರೀತಿಯ ಸಲಹೆ ಮತ್ತು ಪರಿಹಾರ ಒದಗಿಸುವ ಉದ್ದೇಶದಿಂದ ಕೃಷಿ ಮೇಳವನ್ನು ಆಯೋಜಿಸಲಾಗಿದೆ. 6 ಕೃಷಿ ಸಂಬಂಧಿತ ಇಲಾಖೆಗಳು ಈ ಮೇಳದಲ್ಲಿ ಪಾಲ್ಗೊಂಡಿದ್ದು, ರೈತರು, ಉದ್ದಿಮೆದಾರರು, ತಜ್ಞರು, ವಿದ್ಯಾರ್ಥಿಗಳು ಇಲ್ಲಿ ಲಭ್ಯವಿದ್ದು ಎಲ್ಲರೂ ಈ ಮೇಳದ ಪ್ರಯೋಜನ ಪಡೆಯಬೇಕು.
ಕೃಷಿ ವಿಶ್ವವಿದ್ಯಾಲಯವು 50 ಟನ್ ಜೈವಿಕ ಗೊಬ್ಬರ ಮತ್ತು ಕೀಟನಾಶಕವನ್ನು ರೈತರಿಗೆ ನೀಡುತ್ತಿದೆ. 1.5 ಲಕ್ಷ ಸಸಿಗಳು ಮಾರಾಟಕ್ಕೆ ಇಲ್ಲಿ ಲಭ್ಯವಿದೆ. 14 ಸಾವಿರ ಟನ್ ಬೀಜಗಳು ವಿವಿಧ ಕೇಂದ್ರಗಳಲ್ಲಿ ಮಾರಾಟಕ್ಕೆ ಸಿದ್ದವಿದೆ. ರಾಗಿ, ಭತ್ತ, ಶೇಂಗಾ ಮತ್ತು ಸಿರಿಧಾನ್ಯಗಳ ತಳಿಗಳು ಲಭ್ಯವಿದೆ. ಪ್ರತಿವರ್ಷ ವಿಶ್ವವಿದ್ಯಾಲಯವು 4 ಲಕ್ಷ ರೈತರಿಗೆ ವಿವಿಧ ರೀತಿಯಲ್ಲಿ ತಲುಪುತ್ತಿದೆ. ಕೃಷಿ, ಬೀಜ, ತಾಂತ್ರಿಕತೆ, ಹೊಸ ವಿಚಾರಗಳು ಇಲ್ಲಿ ಲಭ್ಯವಿದ್ದು ರೈತರು ಈ ಮೇಳದ ಸದುಪಯೋಗ ಪಡೆಯಬೇಕೆಂದರು.
ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಬಿ. ಹೇಮ್ಲಾನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ವಿಶ್ವವಿದ್ಯಾಲಯದ ಡಾ. ಹೆಚ್ ಎಲ್ ಹರೀಶ್, ಪ್ರಗತಿಪರ ರೈತರಾದ ಬಿ. ಶಿವರಾಮ್, ಕೆ ನಾಗರಾಜ್, ದೊಡ್ಡನಗೌಡ ಸಿ ಪಾಟೀಲ್ ಮಾತನಾಡಿ ವಿವಿಧ ತಾಂತ್ರಿಕತೆಯ ಹಸ್ತ ಪ್ರತಿಗಳನ್ನು ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಡಾ.ಮೃತ್ಯುಂಜಯ ಸಿ ವಾಲಿ, ಡಾ.ಆರ್.ಲೋಕೇಶ್, ಡಾ.ದುಷ್ಯಂತ್ ಕುಮಾರ್, ವಿವಿಧ ವಿಭಾಗಗಳ ಮುಖ್ಯಸ್ಥರು, ಇತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















